ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಂಗಾಂಗ ದಾನ ಶ್ರೇಷ್ಠ ದಾನವಾಗಿದ್ದು, ಇದಕ್ಕೆ ಅಗತ್ಯವಾಗಿರುವ ಕಾನೂನು ನೆರವು ನೀಡಲು ಪೊಲೀಸ್ ಇಲಾಖೆ ಸದಾ ಬದ್ಧವಾಗಿದೆ ಎಂದು ಎಸ್ಪಿ ರಿಷಿಕೇಶ ಸೋನಾವಣೆ ಹೇಳಿದ್ದಾರೆ.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಮೂತ್ರಶಾಸ್ತ್ರ (ಯುರಾಲಜಿ) ವಿಭಾಗದ ವತಿಯಿಂದ ಆಯೋಜಿಸಲಾದ ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಯ ಮತ್ತು ಮೃತ ವ್ಯಕ್ತಿಯಿಂದ ಅಂಗಾಗ ದಾನ ಪಡೆಯುವ ಕುರಿತು ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗಾಗ ಕಸಿಯಲ್ಲಿ ದಾನಿಗಳು ಮತ್ತು ಅಂಗಾಗ ಕಸಿಗೆ ಒಳಗಾಗುವ ರೋಗಿಗಳು ಕಾನೂನು ಕೆಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಅಲ್ಲದೇ, ಅಂಗಾಂಗಗಳನ್ನು ತ್ವರಿತವಾಗಿ ಕಳುಹಿಸಲು ಸುಗಮ ರಸ್ತೆ ಸಂಚಾರಕ್ಕಾಗಿ ಶೂನ್ಯ ಟ್ರಾಫಿಕ್ ಕಾರಿಡಾರ್ ಕೂಡ ಒದಗಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸದಾ ನೆರವು ಒದಗಿಸಲು ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಘಟಕ ಪ್ರಾರಂಭಿಸಲು ವಿವಿ ಕುಲಾಧಿಪತಿ ಡಾ. ಎಂ. ಬಿ. ಪಾಟೀಲ ಕಾರಣರಾಗಿದ್ದಾರೆ. ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಅವರು ಕೂಡ ಅಂಗಾಂಗ ದಾನದ ಕುರಿತು ಸಾಕಷ್ಟು ಜನಜಾಗೃತಿ ಮೂಡಿಸಲು ಕ್ರಮ ಕೈಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಈಗಾಗಲೇ ನಾಲ್ಕು ರೋಗಿಗಳಿಗೆ ಮೂತ್ರಪಿಂಡ ಕಸಿಯನ್ನು ಯಶಸ್ವಿಯಾಗಿ ಮಾಡಲಾಗಿದೆ.
ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್. ಬಿ. ಪಾಟೀಲ ಮಾತನಾಡಿ, ದೇಶದಲ್ಲಿ ಅಂಗಾಂಗ ಕಸಿಗೆ ಬಹಳ ಬೇಡಿಕೆ ಇದೆ. ಆದರೆ, ಬೇಡಿಕೆಗೆ ತಕ್ಕಂತೆ ಅಂಗಾಗಂಗಳು ಸಿಗುತ್ತಿಲ್ಲ. ಹೀಗಾಗಿ ಜನರಲ್ಲಿ ಅಂಗಾಗ ದಾನದ ಕುರಿತು ಜಾಗೃತಿ ಮೂಡಿಸಬೇಕಿದೆ. ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಗಳ ಪೋಷಕರು ಅಥವಾ ಸಂಬಂಧಿಕರಲ್ಲಿ ಅಂಗಾಂಗ ದಾನದ ಮಹತ್ವದ ಬಗ್ಗೆ ತಿಳುವಳಿಕೆ ನೀಡಬೇಕಿದೆ. ಅಲ್ಲದೇ, ನಿಧನರಾದ ವ್ಯಕ್ತಿಗಳಲ್ಲಿ ತಕ್ಷಣ ಪಡೆಯಬಹುದಾಗ ಅಂಗಾಂಗಗಳ ಕುರಿತು ಸಾರ್ವಜನಿಕರಲ್ಲಿ ಇನ್ನೂ ಹೆಚ್ಚಿನ ರೀತಿಯ್ಲಲಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗಗಳಿಂದ 175ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಅಲ್ಲದೇ, ಯಕೃತ್ತು, ಮೂತ್ರಪಿಂಡ, ಹೃದಯ ಮತ್ತು ಶ್ವಾಸಕೋಶದ ಕಸಿಯಲ್ಲಿ ನಡೆಯುತ್ತಿರುವ ಸಂಶೋಧನೆಗಳು, ಈವರೆಗೆ ನಡೆದ ಅಂಗಾಂಗ ಕಸಿ ಪ್ರಕರಣಗಳು, ಅಂಗಾಂಗ ಕಸಿ ವಿಚಾರದಲ್ಲಿ ಪಾಲಿಸಬೇಕಾದ ಕಾನೂನು ಕ್ರಮಗಳುಗಳ ಕುರಿತು ನುರಿತ ತಜ್ಞ ವೈದ್ಯರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವಿಜಯಕುಮಾರ ಟಿ. ಕಲ್ಯಾಣಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು.
ಡಾ.ಸಂತೋಷ ಪಾಟೀಲ, ಡಾ.ಸುರೇಶ ಕಾಗಲಕರರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

