ಖಾನಾಪುರದ ಸರ್ಕಾರಿ ಶಾಲೆ ದುಸ್ಥಿತಿ | ಶಿಥಿಲ ಕಟ್ಟಡದಲ್ಲಿ ಸಮಸ್ಯೆಗಳ ಸರಮಾಲೆ
– ಮಲ್ಲಿಕಾಜುನ ಎನ್. ಕೆಂಭಾವಿ
ಬ್ರಹ್ಮದೇವನಮಡು: ಸೋರುವ ಶಾಲೆ ಕೋಣೆಗಳು.. ಎಲ್ಲೆಡೆ ಮಳೆ ನೀರು ಸಂಗ್ರಹ.. ಕಿತ್ತು ಬೀಳುತ್ತಿರುವ ಮೆಲ್ಛಾವಣೆ ಪದರು.. ಆತಂಕದಲ್ಲಿಯೇ ವಿದ್ಶಾರ್ಜನೆ ಮಾಡುವ ಮಕ್ಕಳು. ಇಷ್ಟಾದರೂ ಕ್ಯಾರೆ ಎನ್ನದ ಅಧಿಕಾರಿಗಳು.!
ಇದು ಸಿಂದಗಿ ತಾಲೂಕಿನ ಖಾನಾಪುರ ಗ್ರಾಮದ ಹೊಸ ಬಡಾವಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುಃಸ್ಥಿತಿ.
ಇಲ್ಲಿ ೧ನೇ ತರಗತಿಯಿಂದ ೫ನೇ ತರಗತಿವರೆಗೆ ೪೦ ವಿದ್ಯಾರ್ಥಿನಿಯರು ಸೇರಿ ೮೦ಕ್ಕೂ ಹೆಚ್ಚು ಮಕ್ಕಳು ವಿದ್ಶಾರ್ಜನೆ ಮಾಡುತ್ತಿದ್ದಾರೆ. ಆದರೆ ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಮಕ್ಕಳು ಆತಂಕದಲ್ಲಿಯೇ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.
ಇರುವುದೇ ಎರಡು ಕೋಣೆ
ಇಷ್ಟು ಮಕ್ಕಳಿಗೆ ಇರುವುದು ಕೇವಲ ಎರಡು ಕೋಣೆಗಳು. ಇದರಲ್ಲೇ ಶಿಕ್ಷಕರು ಕುಳಿತುಕೊಳ್ಳುವ ಅನಿವಾರ್ಯವಿದೆ. ಈ ಕೋಣೆಗಳ ಛಾವಣಿ ಉದುರುತ್ತಿದೆ. ಯಾವುದೇ ಸ್ಥಿತಿಯಲ್ಲೂ ಛಾವಣಿ ಬೀಳಬಹುದು ಎಂಬ ಆತಂಕ ಶಿಕ್ಷಕರನ್ನು ಕಾಡುತ್ತಿದೆ. ಏನಾದರೂ ಅನಾಹುತ ಸಂಭವಿಸಿದರೆ ಎಂಬ ಭಯದಲ್ಲೇ ನಿತ್ಯ ಪಾಠ ನಡೆಯುತ್ತಿದೆ. ಮಳೆ ಬಂದರೆ ಶಾಲೆ ಕೋಣೆಗಳು ಸೋರುವುದಲ್ಲದೆ ಅಂಗಳದಲ್ಲೂ ನೀರು ನಿಲ್ಲುತ್ತವೆ.
ಅಡುಗೆ ಕೋಣೆಯೂ ಬಿರುಕು: ಇನ್ನು ಶಾಲೆಯಲ್ಲಿ ಇರುವ ಒಂದು ಅಡುಗೆ ಕೋಣೆಯ ಗೋಡೆಗಳೂ ಬಿರುಕು ಬಿಟ್ಟಿವೆ. ಈ ಕೋಣೆಯಲ್ಲಿ ಹೆಗ್ಗಣಗಳು ಓಡಾಡುತ್ತವೆ. ಇದರಿಂದ ಸ್ವಚ್ಛತೆ ಕಾಪಾಡುವುದು ಕಷ್ಟವಾಗಿ ಅಡುಗೆ ಧಾನ್ಯಗಳನ್ನು ವಿನಂತಿ ಮೇರೆಗೆ ಹತ್ತಿರದಲ್ಲೇ ಮತ್ತೊಬ್ಬರ ಕೋಣೆಯಲ್ಲಿ ಇಡಲಾಗಿದೆ.
ಬಯಲು ಶೌಚವೇ ಗತಿ: ಶಾಲೆಯಲ್ಲಿ ಪುರುಷರ ಶೌಚಾಲಯವೇ ಇಲ್ಲ. ಗಂಡು ಮಕ್ಕಳಿಗೆ ಬಯಲೇ ಗತಿ ಎನ್ನುವ ಸ್ಥಿತಿ ಇದೆ. ಮಹಿಳೆಯರ ಶೌಚಾಲಯವಿದ್ದರೂ ಅದಕ್ಕೆ ಕಾಂಪೌಂಡ್ ಇಲ್ಲ. ಶಾಲೆಗೂ ಕಾಂಪೌಂಡ್ ಇಲ್ಲದೆ ಬಿಡಾಡಿ ದನಗಳು ನುಗ್ಗುತ್ತವೆ. ಸೂಕ್ತ ಸುರಕ್ಷತೆ ಇಲ್ಲದಿರುವುದರಿಂದ ಹಾಗೂ ಶಾಲೆ ಗ್ರಾಮದ ಹೊರ ಭಾಗದಲ್ಲಿ ಇರುವುದರಿಂದ ಅನೈತಿಕ ಚಟುವಟಿಕೆಗಳ ತಾಣವೂ ಆಗಿದೆ. ಈ ಹಿಂದೆ ಶಾಲೆಯಲ್ಲಿ ಕಳ್ಳತನ ನಡೆದ ಉದಾಹರಣೆಗಳೂ ಇವೆ.
ಮನವಿಗೂ ಬೆಲೆಯಿಲ್ಲ: ಈ ವಿಷಯವಾಗಿ ಗ್ರಾಮ ಪಂಚಾಯಿತಿ, ಬಿಇಒ ಕಚೇರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಇದೇ ಶಾಲೆ ಹೆಸರಿನಲ್ಲಿ ಊರಲ್ಲಿನ ಬೇರೆ ಶಾಲೆಯಲ್ಲಿ ದುರಸ್ತಿ ಕಾರ್ಯಗಳು ನಡೆದಿವೆ ಎಂಬ ದೂರುಗಳೂ ಕೇಳಿಬಂದಿವೆ. ರಾಜಕೀಯ ಪಿತೂರಿಯಿಂದ ಶಾಲೆ ಸುಧಾರಣೆ ಕಾಣುವುದು ದೂರದ ಮಾತು ಎಂಬ ಅಪಸ್ವರವೂ ಗ್ರಾಮಸ್ಥರಿಂದ ಕೇಳಿಬಂದಿದ್ದು, ಯಾರದ್ದೋ ಪ್ರತಿಷ್ಠೆಗೆ ಮಕ್ಕಳೇಕೆ ಭಯದಲ್ಲಿ ಕಲಿಯಬೇಕು? ಎಂಬ ಪ್ರಶ್ನೆ ಪ್ರಜ್ಞಾವಂತರದ್ದಾಗಿದೆ.
ಈಗಲಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಲೆಗೆ ಖುದ್ದು ಭೇಟಿ ನೀಡಿ ಮಕ್ಕಳ ಶಿಕ್ಷಣಕ್ಕೆ ಅಗತ್ಶ ಸೌಕರ್ಯ ಕಲ್ಪಿಸಬೇಕು. ಅಲ್ಲದೆ ಸುಸಜ್ಜಿತ ಕಟ್ಟಡ ವ್ಶವಸ್ಥೆ ಮಾಡಬೇಕು ಎಂದು ಎಸ್ಡಿಎಂಸಿ ಅಧ್ಶಕ್ಷ ಬಸವರಾಜ ತಳವಾರ, ಉಪಾಧ್ಶಕ್ಷ ಮಂಜುನಾಥ ಹೆಳವರ, ಅಮೋಗೆಪ್ಪ ಅಲ್ಲಾಪೂರ, ಸಂಜೀವಪ್ಪ ಅಲ್ಲಾಪೂರ, ಹೊನ್ನಪ್ಪ ಅಲ್ಲಾಪೂರ, ಮಲ್ಲಣ್ಣ ನಾಯ್ಕೋಡಿ, ಬಸವರಾಜ ಖಾಚಾಪೂರ, ಪರಶುರಾಮ ನಾಯ್ಕೋಡಿ, ಮಲ್ಲಪ್ಪ ಮರಕಲ್ಲ, ಮಡಿವಾಳಪ್ಪ ಮರಗಲ್ಲ, ಮಾನಪ್ಪ ತಳವಾರ ಇತರರು ಒತ್ತಾಯಿಸಿದ್ದಾರೆ.

“ಖಾನಾಪೂರ ಹೊಸ ಬಡಾವಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಇಲಾಖೆ ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅಲ್ಲದೆ ಜಿಪಂ, ತಾಪಂ ಗಮನಕ್ಕೂ ತರಲಾಗಿದೆ. ಶೀಘ್ರ ಕೊಠಡಿಗಳ ನಿರ್ಮಾಣದ ಭರವಸೆ ನೀಡಿದ್ದಾರೆ. ಶಾಲೆಯಲ್ಲಿ ಪುರುಷರ ಶೌಚಾಲಯ ಹಾಗೂ ಮಹಿಳೆಯರ ಶೌಚಾಲಯಕ್ಕೆ ಕಾಂಪೌಂಡ್ ನಿರ್ಮಿಸಬೇಕು. ಶಾಲೆ ಭದ್ರತೆಗೆ ಕಾಂಪೌಂಡ್ ನಿರ್ಮಾಣ ಕಾರ್ಯವೂ ಆಗಬೇಕು.”
– ಭೀಮಪ್ಪ ನೆಲ್ಲಗಿ
ಮುಖ್ಯಗುರುಗಳು
ಖಾನಾಪೂರ ಹೊಸ ಬಡಾವಣೆ ಸಕಾ೯ರಿ ಕಿರಿಯ ಪ್ರಾಥಮಿಕ ಶಾಲೆ ಕೊಠಡಿಗಳ ದುರಸ್ತಿಗೆ ಕ್ರಿಯಾ ಯೋಜನೆ ತಯಾರಿಸಿ, ಡಿಡಿಪಿಐ ಹಾಗೂ ಜಿಪಂ,ತಾಪಂ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಶೀಘ್ರವೇ ಶಾಲೆಯ ದುರಸ್ತಿಗೆ ಕ್ರಮ ಕೈಕೊಳ್ಳಲಾಗುವುದು.”
– ಆರೀಫ್ ಬಿರಾದಾರ
ಬಿಇಒ, ಸಿಂದಗಿ

