ಸಿಂದಗಿಯಲ್ಲಿ ಬಿಜೆಪಿ ಹಮ್ಮಿಕೊಂಡ ಅಭಿನಂದನಾ ಸಮಾರಂಭ ಹಾಗೂ ಕಾರ್ಯಕಾರಣಿ ಸಭೆ
ಸಿಂದಗಿ: ಸಿಎಂ ಸಿದ್ದರಾಮಯ್ಯ ಅವರ ಸರಕಾರ ವಾಲ್ಮೀಕಿ ಸಮಾಜದ ೧೮೭ಕೋಟಿ ರೂ. ಅನುದಾನ ದುರ್ಬಳಕೆ, ಮುಡಾ ಸೇರಿದಂತೆ ಅನೇಕ ಹಗರಣಗಳು ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯ ಅವರು ಖುರ್ಚಿಗೆ ಅಂಟಿಕೊಳ್ಳದೇ ಎಲ್ಲ ಹಗರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಸವಾಲು ಎಸೆದರು.
ಪಟ್ಟಣದ ಬಿಜೆಪಿ ಕಾರ್ಯಾಲಯದ ಮುಂಭಾಗದಲ್ಲಿ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭ ಹಾಗೂ ಕಾರ್ಯಕಾರಣಿ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದಲಿತ ಸರಕಾರ ಎನ್ನುವ ಸಿಎಂ ಸಿದ್ದರಾಮಯ್ಯ ಸರಕಾರ ದಲಿತರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಹಣ ಲೂಟಿ ಮಾಡಿದೆ. ಸಂಸತ್ತಿಗೆ ದೇಶದಲ್ಲಿ ಏಳು ಬಾರಿ ಆರಿಸ ಬಂಸ ಏಕೈಕ ಸದಸ್ಯ ನಾನಾಗಬೇಕಾದರೆ ಅದೃಷ್ಟ ದೇವತೆಯ ಕೃಪಾಕಟಾಕ್ಷದಿಂದ ಅತ್ಯಂತ ತುಳಿತಕ್ಕೊಳಗಾದ ಸಮಾಜದಿಂದ ಬಂದವನನ್ನು ಆರಿಸಿ ತಂದಿದೆ. ನಾನು ಎರಡು ಬಾರಿ ಜಯಗಳಿಸಿದರು ಮೈಮರೆತಿಲ್ಲ. ಕೂಡಗಿ ವಿದ್ಯುತ್ಸ್ಥಾವರ ಘಟಕ ತಂದಿದ್ದು ನನ್ನ ಹೆಗ್ಗಳಿಕೆ. ಶೇಡಬಾಳ-ಸಿಂದಗಿ ವಾಡಿ ರೈಲು ಮಾರ್ಗದ ವಿಚಾರವಾಗಿ ಸಂಬಂಧಿಸಿದ ಸಚಿವರ ಜೊತೆ ಮಾತನಾಡುವೆ. ವಿಜಯಪುರ ವಿಮಾನ ನಿಲ್ದಾಣ ಪ್ರಾರಂಭವಾಗಲು ಫಾಯರ್ ಫೈಟರ್ ಯಂತ್ರದ ಕೊರತೆಯಿಂದಾಗಿ ವಿಳಂಬವಾಗುತ್ತಿದೆ.
ಈ ವೇಳೆ ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಕಾಂಗ್ರೆಸ್ ಸರಕಾರ ವರ್ಷ ತುಂಬುವುದರಲ್ಲೇ ಸಾಕಷ್ಟು ಹಗರಣಗಳ ಮೂಲಕ ಹೆಸರು ಕೆಡಿಸಿಕೊಂಡಿದೆ. ಕಾಂಗ್ರೆಸ್ ಸರಕಾರ ಹಗರಣಗಳ ಸರಮಾಲೆಯಾಗಿದೆ. ಚುನಾವಣೆ ಸಂದರ್ಭದಲ್ಲಿ ಎರಡು ತಿಂಗಳ ಗೃಹಲಕ್ಷ್ಮೀ ಹಣ ಒಮ್ಮಿಲೆ ಹಾಕಿದ್ದೀರಿ. ಆದರೆ ಇದೀಗ ಮೂರು ತಿಂಗಳಾದರೂ ಹಣ ಬಂದಿಲ್ಲ. ತಾಲೂಕಿನ ರಸ್ತೆಗಳು ಹದಗೆಟ್ಟಿವೆ. ಎಲ್ಲಿ ನೋಡಿದರೂ ಗುಂಡಿಗಳೇ ಕಾಣುತ್ತವೆ. ಮುಂದಿನ ದಿನಮಾನಗಳಲ್ಲಿ ಅವುಗಳನ್ನು ಸರಿಪಡಿಸದೇ ಹೋದಲ್ಲಿ ಆ ಗುಂಡಿಗಳಲ್ಲೇ ಮರಗಳನ್ನು ನೆಟ್ಟು ಪ್ರತಿಭಟನೆ ಮಾಡಿ ಕಾರ್ಯಸಾಧನೆಯನ್ನು ಬಹಿರಂಗ ಪಡಿಸಲಾಗುವುದು. ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಶಾಸಕರು ಹಸ್ತಕ್ಷೇಪ ಮಾಡುತ್ತಿರುವುದ ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.
ಇದೇ ಸಂದರ್ಭದಲ್ಲಿ ಬಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ ಶೇಡಬಾಳ-ಸಿಂದಗಿ ವಾಡಿ ರೈಲು ಮಾರ್ಗವಾಗಬೇಕು ಎಂದು ಒತ್ತಾಯಿಸಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಎಂ.ಎನ್.ಪಾಟೀಲ, ಅಶೋಕ ಅಲ್ಲಾಪೂರ, ಮಲ್ಲಿಕಾರ್ಜುನ ಜೋಗುರ, ಸಿದ್ದು ಬುಳ್ಳಾ, ಈರಣ್ಣ ರಾವೂರ, ಮಳುಗೌಡ ಪಾಟೀಲ, ಡಾ.ಸಂದೀಪ ಪಾಟೀಲ, ಬಾಬುಗೌಡ ಪಾಟೀಲ, ಬಿ.ಆರ್.ಯಂಟಮಾನ, ಶ್ರೀಮಂತ ನಾಗೂರ, ಎಂ.ಎಸ್.ಮಠ, ಶಿಲ್ಪಾ ಕುದರಗೊಂಡ, ನಿಲಮ್ಮ ಯಡ್ರಾಮಿ, ಶಿವಕುಮಾರ ಬಿರಾದಾರ, ಗುರು ತಳವಾರ, ಸಿದ್ದರಾಮ ಅನಗೊಂಡ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

” ಸಿಂದಗಿ ತಾಲೂಕಿಗೆ ರೂ.೮೫ಸಾವಿರ ಕೋಟಿ ವೆಚ್ಚದ ಕೇಂದ್ರ ಸರಕಾರದ ಜೆಜೆಎಂ ಕುಡಿಯುವ ನೀರು ಯೋಜನೆ ಕಾಮಗಾರಿ ಟೆಂಡರ್ ಆಗಿದ್ದರೂ ಚುನಾವಣೆ ಘೋ಼ಷಣೆ ಹಿನ್ನೆಲೆಯಲ್ಲಿ ಆರಂಭವಾಗಲಿಲ್ಲ. ೨೦೦ಕೋಟಿ ವೆಚ್ಚದ ಚಿಮ್ಮಲಗಿ ಏತ ನೀರಾವರಿ ಟೆಂಡರ್ ಆಗಿ ಗುತ್ತಿಗೆಯೂ ನಿಗದಿಯಾಗಿತ್ತು. ಆದರೆ ಅನುಮೋದನೆ ತಡವಾಗಿತ್ತು. ಎರಡು ಕಾಮಗಾರಿಗಳು ನನ್ನ ಅವಧಿಯಲ್ಲಿ ಮಂಜೂರಗೊಂಡಿದ್ದವು. ಆದರೆ ಇಂದಿನ ಶಾಸಕರು ನನ್ನ ಕಾಮಗಾರಿ ಎಂದು ಭೂಮಿಪೂಜೆಗಳಲ್ಲಿ ಹೇಳುತ್ತಾರೆ. ಇದರ ಬಗ್ಗೆ ಶಾಸಕ ಅಶೋಕ ಮನಗೂಳಿ ಬಹಿರಂಗ ಚರ್ಚೆಗೆ ಬರಬೇಕು.”
– ರಮೇಶ ಭುಸನೂರ, ಮಾಜಿ ಶಾಸಕರು
” ನನ್ನ ಅನಾರೋಗ್ಯ ಸ್ಥಿತಿಯಲ್ಲಿಯೂ ೪೪ ಡಿಗ್ರಿ ಉಷ್ಣಾಂಶದ ಮಧ್ಯದಲ್ಲಿ ಮತಕ್ಷೇತ್ರದ ಎಲ್ಲ ಕಡೆಗಳಲ್ಲಿ ಸುತ್ತಾಡಿ ಮತಯಾಚನೆ ಮಾಡಿದ್ದೇನೆ. ಇದು ನನ್ನ ಕೊನೆಯ ಚುನಾವಣೆ. ಈ ಚಾನಾವಣೆಯಲ್ಲಿ ಜಯಶಾಲಿಯನ್ನಾಗಿ ಮಾಡಿದ್ದೀರಿ ನಿಮ್ಮ ಋಣವನ್ನು ನಾನೆಂದು ಮರೆಯಲಾರೆ” ಎಂದು ಸಂಸದ ರಮೇಶ ಜಿಗಜಿಣಗಿ ಭಾವುಕರಾಗಿ ಕಣ್ಣೀರು ಸುರಿಸಿದರು.

