ಲೇಖನ
– ಡಾ. ರಾಜಶೇಖರ ನಾಗೂರ
ಸಂಚಾಲಕರು
’ನಮ್ಮ ಕಥಾ ಅರಮನೆ’
ಉದಯರಶ್ಮಿ ದಿನಪತ್ರಿಕೆ
ಒಳಗಿನ ದನಿ ಜೋರಾದಾಗ ಹೊರಗಿನ ಶಬ್ದ ಕೇಳಿಸದು. ಈ ಮಾತಿನ ಅರ್ಥದಂತೆ ಅದೆಷ್ಟೋ ಬಾರಿ ಈ ಅನುಭವ ನಮಗೆ ಆಗಿಯೇ ಇರುತ್ತದೆ.
“ಏನಪ್ಪಾ.. ಇಷ್ಟು ಹೊತ್ತು ಕರೆದರೂ ಕೇಳಿಸಲಿಲ್ಲವಾ? ಆವಾಗಿನಿಂದ ಕೂಗುತ್ತಿರುವೆ” ಎಂದು ಕೆಲವೊಮ್ಮೆ ಯಾರಾದರೂ ಕೇಳಿದಾಗ “ಅಯ್ಯೋ ಹೌದಾ! ಕ್ಷಮಿಸಿ ನಾನು ಯಾವುದೋ ವಿಚಾರದಲ್ಲಿದ್ದೆ” ಎಂದು ಉತ್ತರಿಸಿರುತ್ತೇವೆ.
ಇದು ಕೇವಲ ಮಾತಲ್ಲ, ಮಾನವ ಮನಸ್ಸಿನ ಅದ್ಭುತ ಕಾರ್ಯವೈಖರಿ.
ಮನುಷ್ಯನ ಕಿವಿಗಳು ಶಬ್ದವನ್ನು ಕೇಳುತ್ತವೆ. ಆದರೆ ಆ ಶಬ್ದಕ್ಕೆ ಅರ್ಥ ಕೊಡುವುದು ಮೆದುಳು. ಮೆದುಳು ಯಾವ ವಿಷಯದ ಮೇಲೆ ಆಳವಾಗಿ ಕೇಂದ್ರೀಕೃತವಾಗುತ್ತದೆಯೋ ಆಗ ಉಳಿದ ಮಾಹಿತಿಯನ್ನು ಕೆಲವೊಮ್ಮೆ ಕಡೆಗಣಿಸುತ್ತದೆ. ಅದಕ್ಕೇ ಅತಿಯಾದ ಚಿಂತೆ, ದುಃಖ, ಭಯ ಅಥವಾ ಆಳವಾದ ಆಲೋಚನೆಯಲ್ಲಿ ಮುಳುಗಿರುವಾಗ ಹೊರಗಿನಿಂದ ಯಾರಾದರೂ ಕರೆದರೂ ತಕ್ಷಣ ಗಮನಕ್ಕೆ ಬರುವುದಿಲ್ಲ.

ಮನಸ್ಸಿನೊಳಗಿನ ಸಂಭಾಷಣೆ ಕೆಲವೊಮ್ಮೆ ಹೊರಗಿನ ಜಗತ್ತಿಗಿಂತ ಜೋರಾಗಿರುತ್ತದೆ.
ನಮ್ಮೊಳಗೆ, ಮುಂದೇನು? ಏಕೆ ಹೀಗಾಯಿತು? ನಾನು ಏನು ಮಾಡಬೇಕು? ಎಂಬ ಚಿಂತನೆಗಳು ಮನಸ್ಸನ್ನು ಸಂಪೂರ್ಣವಾಗಿ ಕೆಲವೊಮ್ಮೆ ಆವರಿಸಿಬಿಡುತ್ತವೆ. ಆಗ ಹೊರಗಿನ ಶಬ್ದಗಳು ಕಿವಿಗೆ ಬಿದ್ದರೂ, ಅವುಗಳಿಗೆ ಗಮನ ಕೊಡುವ ಶಕ್ತಿಯೇ ಕಡಿಮೆಯಾಗುತ್ತದೆ.
ಇದನ್ನೇ ಮನೋವಿಜ್ಞಾನದಲ್ಲಿ ಗಮನದ ಆಯ್ಕೆ (Selective Attention) ಎಂದು ವಿವರಿಸಲಾಗುತ್ತದೆ. ನಮ್ಮ ಮೆದುಳು ಒಂದೇ ಸಮಯದಲ್ಲಿ ಅನೇಕ ಮಾಹಿತಿಗಳನ್ನು ಸ್ವೀಕರಿಸಿದರೂ, ಅವುಗಳಲ್ಲಿ ಕೆಲವು ಮಾತ್ರಕ್ಕೆ ಆದ್ಯತೆ ನೀಡುತ್ತದೆ. ಆ ಕ್ಷಣದಲ್ಲಿ ಒಳಗಿನ ಚಿಂತನೆಯೇ ಆದ್ಯತೆಯಾದರೆ, ಹೊರಗಿನ ಕರೆಯು ಹಿನ್ನೆಲೆಗೆ ಸರಿಯಬಹುದು.
ಇಲ್ಲಿಯೇ ಮನೋಬಲದ ಪಾತ್ರ ಆರಂಭವಾಗುತ್ತದೆ.
ಮನೋಬಲ ಎಂದರೆ ಚಿಂತೆ ಬರದಿರುವುದಲ್ಲ. ಚಿಂತೆಯ ಮಧ್ಯೆಯೂ ಸ್ಪಷ್ಟವಾಗಿ ಯೋಚಿಸುವ ಸಾಮರ್ಥ್ಯ. ಸಮಸ್ಯೆಗಳ ನಡುವೆ ದಿಕ್ಕು ತಪ್ಪದೆ ನಿಲ್ಲುವ ಶಕ್ತಿ. ಒಳಗಿನ ಗದ್ದಲವನ್ನು ನಿಧಾನವಾಗಿ ಶಾಂತಗೊಳಿಸಿ, ವಾಸ್ತವವನ್ನು ಗಮನಿಸುವ ಸಾಮರ್ಥ್ಯ.
ಬಲಿಷ್ಠ ಮನಸ್ಸು ಎಂದರೆ ಎಂದಿಗೂ ದುಃಖಪಡುವುದಿಲ್ಲ ಎಂದಲ್ಲ. ದುಃಖ ಬಂದಾಗ ಅದಕ್ಕೆ ಸಂಪೂರ್ಣವಾಗಿ ಶರಣಾಗದೆ ಅದನ್ನು ಅರ್ಥಮಾಡಿಕೊಂಡು ಪರಿಹರಿಸಲು ಮುಂದೆ ಸಾಗುವುದು.
ಆದ್ದರಿಂದ ಮನಸ್ಸಿನಲ್ಲಿ ಗದ್ದಲ ಹೆಚ್ಚಾದಾಗ ಸ್ವಲ್ಪ ವಿರಾಮ ತೆಗೆದುಕೊಳ್ಳಿ. ಆಳವಾಗಿ ಉಸಿರಾಡಿ. ವಿಶ್ವಾಸಾರ್ಹ ವ್ಯಕ್ತಿಯೊಂದಿಗೆ ಮಾತನಾಡಿ. ನಿಮ್ಮ ಆಲೋಚನೆಗಳನ್ನು ಬರೆಯಿರಿ. ದೇಹವನ್ನು ಚಲಿಸುವಂತೆ ಮಾಡಿ. ಇಂತಹ ಸಣ್ಣ ಅಭ್ಯಾಸಗಳು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ, ಹೊರಗಿನ ಜಗತ್ತಿನೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತವೆ. ಇಲ್ಲವಾದಲ್ಲಿ ಒಳಗಿನ ಚಿಂತೆಗಳ ಟ್ರಾಫಿಕ್ ಜಾಮ್ ಖಚಿತ.
ಮನಸ್ಸು ನಮ್ಮ ಅತ್ಯಂತ ದೊಡ್ಡ ಸ್ನೇಹಿತನೂ ಆಗಬಹುದು, ಅತ್ಯಂತ ಕಠಿಣ ಪರೀಕ್ಷೆಯೂ ಆಗಬಹುದು. ಅದನ್ನು ಅರ್ಥಮಾಡಿಕೊಂಡು, ತರಬೇತಿ ನೀಡಿ, ಸಮತೋಲನದಲ್ಲಿಡುವುದು ಜೀವನದ ದೊಡ್ಡ ಕಲೆ.
ಒಳಗಿನ ದನಿ ಜೋರಾದಾಗ ಹೊರಗಿನ ಶಬ್ದ ಕೇಳಿಸದಿರಬಹುದು. ಆದರೆ ಒಳಗಿನ ಮನಸ್ಸು ಶಾಂತವಾದಾಗ, ಬದುಕಿನ ಸಣ್ಣ ಸಣ್ಣ ಸಂತೋಷಗಳೂ ಮತ್ತೆ ಸ್ಪಷ್ಟವಾಗಿ ಕೇಳಿಸುತ್ತವೆ. ಈ ಕಾರಣಕ್ಕೆ ಬೆಳಗಿನ ಶಾಂತ ಮುಂಜಾವಿನಲ್ಲಿ, ಅಥವಾ ಏಕಾಂಗಿಯಾಗಿ ಇದ್ದಾಗ ಅನೇಕ ಅದ್ಭುತ ವಿಚಾರಗಳು ಹೊಳೆಯುತ್ತವೆ. ಏಕೆಂದರೆ ಆಗ ಒಳಗಿನ ಚಿಂತೆಗಳ ಧನಿಯ ಟ್ರಾಫಿಕ್ ಕಡಿಮೆ ಇರುತ್ತದೆ.
ಒಳ ದನಿ ತುಂಬಾ ಶಕ್ತಿಶಾಲಿ. ಅದನ್ನು ಚಿಂತೆಗಳ ತಾಣವಾಗಿಸಬಾರದು. ಶಕ್ತಿಯುತ ಯೋಚನೆಗಳ ಆಗರವಾಗಿಸಬೇಕು.


