ಶಶಿಧರ್ ಕೋಸಂಬೆ ಕ್ಷಮೆ ಯಾಚನೆಗೆ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಆಗ್ರಹ
ವಿಜಯಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸುವಿಕೆಯು, ಪ್ರಜಾಪ್ರಭುತ್ವದ ಜೀವಂತಿಕೆ ಲಕ್ಷಣವಾಗಿದ್ದು, ವ್ಯವಸ್ಥೆಯಲ್ಲಿಯ ಲೋಪ ದೋಷಗಳ ಬಗ್ಗೆ ಪ್ರಶ್ನಿಸಿ ತಿಳಿದುಕೊಂಡು, ಚರ್ಚಿಸಿ, ಅರ್ಥ ಮಾಡಿಕೊಂಡು ಮುಂದುವರಿಯುವುದು ಆರೋಗ್ಯಕರವಾದ ಲಕ್ಷಣ. ಆದರೆ ಪ್ರಶ್ನಿಸುವ ಸ್ವಾತಂತ್ರ್ಯವನ್ನೇ ಪ್ರಶ್ನಿಸಿ ಅಪಾರ್ಥ ಮಾಡಿಕೊಂಡು, ಹತಾಶೆಗೊಳಗಾಗಿ ಇನ್ನೊಬ್ಬರ ಮೇಲೆ ಆಧಾರರಹಿತವಾದ ಸುಳ್ಳು ಆರೋಪ ಮಾಡಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆಯ ವರ್ತನೆ ನೀಚತನದ ಪರಮಾವಧಿಯಾಗಿದೆ ಎಂದು ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ.
ಶುಕ್ರವಾರ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸಂಗಮೇಶ ಬಬಲೇಶ್ವರ ಅವರು ಶಶಿಧರ್ ಕೋಸಂಬೆ ಆರೋಪಗಳ ಕುರಿತಂತೆ ಅವರಿಗೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಸರಿಯಾದ ಸಮರ್ಪಕ ಉತ್ತರ ನೀಡದಿದ್ದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಬಬಲೇಶ್ವರ ಎಚ್ಚರಿಸಿದ್ದಾರೆ.
ಮೊದಲನೆಯದಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಅದರ ಅಧ್ಯಕ್ಷರು ಹಾಗೂ ನಿಮ್ಮನ್ನು ಒಳಗೊಂಡಂತೆ ಇರುವ ಆರು ಜನ ಸದಸ್ಯರ ಬಗ್ಗೆ ನಮ್ಮೆಲ್ಲರಿಗೂ ಅಪಾರವಾದ ಗೌರವವಿದೆ. ಉಳಿದ ಯಾವ ಸದಸ್ಯರು ಮತ್ತು ಅಧ್ಯಕ್ಷರ ಮೇಲೆ ಇಲ್ಲದ ಆರೋಪ ನಿಮ್ಮ ಮೇಲೆ ಯಾಕೆ ಬರುತ್ತಿದೆ? ಇದನ್ನು ಮಾಧ್ಯಮ ಮತ್ತು ನಾಗರಿಕ ಸಮಾಜದಲ್ಲಿರುವ ಪ್ರಜ್ಞಾವಂತರು ಗಮನಿಸಬೇಕಾಗಿದೆ. ಕೆಲವು ದಿನಗಳ ಹಿಂದೆ ವಿಜಯಪುರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ನೀವು ಅನಧಿಕೃತ ಕೋಚಿಂಗ್ ಸೆಂಟರ್ ಗಳನ್ನು ಬಂದ್ ಮಾಡಲು ಸೂಚಿಸಿದ್ದೆ, ಅದರಲ್ಲಿ ಸಂಗಮೇಶ್ ಬಬಲೇಶ್ವರ ಅವರಿಗೆ ಸೇರಿದ ಕೋಚಿಂಗ್ ಸೆಂಟರ್ ಗೆ ಭೇಟಿ ಕೊಟ್ಟಿದ್ದೆ. ಹಾಗಾಗಿ ಅವರು ನನ್ನ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿ, ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದ್ದೀರಿ. ನೀವೇ ಹೇಳಿ, ಪತ್ರಿಕಾ ವರದಿ ನೀಡಿರುವಂತೆ ನೀವು ಭೇಟಿ ಕೊಟ್ಟ ನನ್ನ ಕೋಚಿಂಗ್ ಸೆಂಟರ್ ಯಾವುದು? ಅದನ್ನು ತಾವು ದಾಖಲೆಯ ಸಮೇತ ಬಹಿರಂಗಗೊಳಿಸಬೇಕು. ಇಲ್ಲದಿದ್ದರೆ ಸುಳ್ಳು ಆರೋಪ ಮಾಡಿದ್ದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಇದು ನನ್ನ ಮೊದಲ ಪ್ರಶ್ನೆ.
ಇನ್ನು ಎರಡನೆಯ ಪ್ರಶ್ನೆ ” ಕೆಲವು ದಿನಗಳ ಹಿಂದೆ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಓರ್ವ ವಿದ್ಯಾರ್ಥಿಯ ಮೇಲೆ ಶಿಕ್ಷಕನೊಬ್ಬ ಹಲ್ಲೆ ಮಾಡಿದ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ನೀವು ಘಟನೆ ನಡೆದ ಸ್ಥಳಕ್ಕೆ ತಡವಾಗಿ ಭೇಟಿ ನೀಡುವ ಮುನ್ನವೇ ಪೊಲೀಸ ಇಲಾಖೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡಿದ್ದರೂ ಕೂಡ ತಾವು ಸಂತ್ರಸ್ತ ಬಾಲಕನ ತಂದೆ ತಾಯಿಗೆ ಹಾಗೂ ಸಂತ್ರಸ್ತ ಬಾಲಕನಿಗೆ ಖಾಸಗಿಯಾಗಿ ಒಂದು ರೂಮಿನಲ್ಲಿ ಆಯೋಗದ ಸದಸ್ಯನಾಗಿ ಸಾಂತ್ವನ ಮತ್ತು ಧೈರ್ಯವನ್ನು ತುಂಬಬೇಕಾಗಿತ್ತು. ಆದರೆ ನೀವು ಪ್ರಚಾರದ ಹುಚ್ಚಿಗೆ ಬಿದ್ದು ಸಾರ್ವಜನಿಕರು ಹಾಗೂ ಮಾಧ್ಯಮದೊಂದಿಗೆ ಸಂತ್ರಸ್ತ ಬಾಲಕನ ಮನೆಗೆ ತೆರಳಿ, ಎಲ್ಲರ ಎದುರಿನಲ್ಲಿಯೇ ಮಗುವಿನ ಬಟ್ಟೆ ಬಿಚ್ಚಿಸಿ ಸಾರ್ವಜನಿಕವಾಗಿ ಪರಿಶೀಲಿಸಿರುವುದು ಆ ಮಗುವಿನ ಮಾನಸಿಕತೆಯ ಮೇಲೆ ಎಂತಹ ಮಾರಕ ಪರಿಣಾಮ ಬೀರಬಹುದು ಎನ್ನುವುದನ್ನು ನೀವು ಆಲೋಚಿಸಿದ್ದೀರಾ? ಸಂತ್ರಸ್ತ ಮಗುವಿನೊಂದಿಗೆ ಈ ರೀತಿ ನಡೆದುಕೊಳ್ಳಲು ನಿಮಗೆ ಏನಾದರೂ ಆಯೋಗದ ನಿರ್ದೇಶನವಿದೆಯೇ? ನನಗೆ ತಿಳಿದಿರುವಂತೆ ಸಂತ್ರಸ್ತ ಬಾಲಕರ ಗಾಯಗಳನ್ನು ಪರಿಶೀಲಿಸಿ ಚಿಕಿತ್ಸೆ ನೀಡುವ ಅಧಿಕಾರ ವೈದ್ಯರಿಗೆ ಮಾತ್ರವಿದೆ ಎನ್ನುವುದು ನನ್ನ ಭಾವನೆ. ನಾನು ನಿಮ್ಮಷ್ಟು ಕಾನೂನನ್ನು ಅರಿತುಕೊಂಡು ಕುಡಿದಿರುವ ಪಂಡಿತನಲ್ಲ, ಇದರ ಬಗ್ಗೆ ನೀವು ಸಾರ್ವಜನಿಕರಿಗೆ ಮತ್ತು ಈ ನಾಡಿನ ಮಕ್ಕಳಿಗೆ ಏನನ್ನು ಹೇಳ ಬಯಸುತ್ತೀರಿ? ಈ ಬಗ್ಗೆ ಜಿಲ್ಲಾಡಳಿತ ಇವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಜಿಲ್ಲಾಡಳಿತಕ್ಕೆ ಎಚ್ಚರಿಸುತ್ತೇನೆ. ಜೊತೆಗೆ ಮಾಧ್ಯಮ ಮಿತ್ರರು ಸಂವೇದನಾಶೀಲರು ಅವರು ತಮ್ಮ ವರದಿಯಲ್ಲಿ ಮಗುವಿನ ಖಾಸಗಿತನದ ಗೌಪ್ಯತೆಯನ್ನು ಕಾಪಾಡುವ ಪ್ರಯತ್ನ ಮಾಡಿದ್ದಾರೆ, ಹಾಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಜೊತೆಗೆ ಪ್ರಚಾರದ ಹುಚ್ಚು ಹಿಡಿಸಿಕೊಂಡಿರುವ ಇಂಥವರೊಂದಿಗೆ ಹೋಗಿ ಮಕ್ಕಳ ಹಕ್ಕುಗಳು ಉಲ್ಲಂಘನೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎನ್ನುವುದನ್ನು ಅರಿಕೆ ಮಾಡಲು ಪ್ರಯತ್ನಿಸುತ್ತೇನೆ.
ಇನ್ನು ನನ್ನ ಮೂರನೇ ಪ್ರಶ್ನೆ ” ತಾವು ನಮ್ಮ ಅಕಾಡೆಮಿಯ ಕಾರ್ಯ ವ್ಯಾಪ್ತಿಯನ್ನು ಪ್ರಶ್ನಿಸಿದ್ದೀರಿ. ಅಪಾರ ಪಾಂಡಿತ್ಯ ಹೊಂದಿರುವ ತಮಗೆ ಕರ್ನಾಟಕ ಭೌಗೋಳಿಕ ಪ್ರದೇಶದಲ್ಲಿರುವ ಝೀರೋ ಟು 18 ವರ್ಷದ ರಾಜ್ಯದ ಎಲ್ಲಾ ಮಕ್ಕಳು ನಮ್ಮ ಅಕಾಡೆಮಿಯ ವ್ಯಾಪ್ತಿಗೆ ಒಳಪಡುತ್ತಾರೆ. ಇದು ನಿಮ್ಮಂತೆ ನಾನು ಅಧಿಕಾರದ ವ್ಯಾಪ್ತಿ ಎಂದು ತಿಳಿದಿಲ್ಲ, ಮಕ್ಕಳ ಪರಿಚಯಾರಕನಾಗಿ ಅವರ ಸೇವೆ ಮಾಡಲು ನಾನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಪ್ರವಾಸ ಮಾಡಬಹುದಾಗಿದೆ. ಅಧಿಕಾರಿಗಳಿಗೆ ನೋಟಿಸ್ ನೀಡುವ ಅಧಿಕಾರ ನನಗೆ ತಾವು ಹೇಳಿದ್ದೀರಿ, ಅಧಿಕಾರ ಇದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿಕೊಂಡು ನಾವು ಮಕ್ಕಳ ಸೇವೆಯಲ್ಲಿ ಮುಂದುವರಿಯೋಣ. ಆದರೆ ನಾನು ಯಾತಕ್ಕಾಗಿ ಅಧಿಕಾರಿಗಳಿಗೆ ನೋಟಿಸ್ ನೀಡಿ ತಿಳುವಳಿಕೆ ನೀಡಿದ್ದೇನೆ ಎನ್ನುವುದನ್ನು ತಾವು ಗಮನಿಸಿದ್ದೀರಾ? ಯಾರಿಗೆ ನಾನು ನೋಟಿಸ್ ನೀಡಿದ್ದೇನೆ ಎನ್ನುವ ಅರಿವು ತಮಗಿದೆಯಾ? ಆ ನೋಟೀಸ್ ನಲ್ಲಿ ಇರುವ ವಿಷಯ ಏನಿದೆ ಎನ್ನುವುದನ್ನಾದರೂ ತಾವು ಬಲ್ಲಿರಾ? ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಹುಟ್ಟಿ ಬಂದಿರುವ ಅಪರಾವತಾರ ಹಾಗೂ ಭಗವಂತ ನಾನೊಬ್ಬನೇ ಎನ್ನುವ ಭ್ರಾಂತಿಯಲ್ಲಿರುವ ಪ್ರೀತಿಯ ಕೋಸಂಬಿಯವರಿಗೆ ನಾನೊಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ ” ನಾನು ಅಧ್ಯಕ್ಷನಾದ ಮೇಲೆ ಹಾಸನ, ಬಾಗಲಕೋಟೆ, ವಿಜಯಪುರ ಹಾಗೂ ನಿನ್ನೆ ಗದಗದ ಸರಕಾರಿ ಬಾಲಮಂದಿರಗಳಿಗೆ ಭೇಟಿ ಕೊಟ್ಟಿದ್ದೇನೆ ನಾನು ಮೊದಲು ಬೇಟಿ ಕೊಟ್ಟಿದ್ದ ಬಾಲಮಂದಿರಗಳಲ್ಲಿ ಅವ್ಯವಸ್ಥೆಯನ್ನು ಗಮನಿಸಿ ಛಾಯಾ ಚಿತ್ರಗಳೊಂದಿಗೆ ಅಲ್ಲಿರುವ ನ್ಯೂನ್ಯತೆಗಳನ್ನು ನೋಟಿಸಿನ ರೂಪದಲ್ಲಿ ಪತ್ರ ಬರೆದು, ಬಾಲಮಂದಿರದಲ್ಲಿ ಓದುವ ಮಕ್ಕಳು ತಂದೆ ತಾಯಿ ಇಲ್ಲದವರು ಸಿಂಗಲ್ ಪೇರೆಂಟ್ ಇರುವವರು, ನೂರಾರು ಸಮಸ್ಯೆಗಳನ್ನ ಹೊತ್ತು ಬದುಕುತ್ತಿರುವವರು, ಅಂತಹ ಮಕ್ಕಳ ಬದುಕಿನೊಂದಿಗೆ ಆಟವಾಡಬೇಡಿ, ಅವರಿಗೆ ಸರಿಯಾದ ಆಹಾರ, ಶಿಕ್ಷಣ ಸಂಸ್ಕಾರ ನೀಡುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ಕೈಮುಗಿದು ಪ್ರಾರ್ಥಿಸಿ ಹೇಳಿ ಬಂದ ನಂತರ ಎಚ್ಚರಿಕೆಯ ರೂಪದಲ್ಲಿ ಬೇಗ ಸರಿ ಮಾಡಿಕೊಳ್ಳುವಂತೆ ಪತ್ರ ಬರೆದದ್ದು ನಿಜ. ಆ ಮೂರು ಜಿಲ್ಲೆಯ ನಮ್ಮ ಗೌರವಾನ್ವಿತ ಸಿಬ್ಬಂದಿ ವರ್ಗದವರು ಸ್ಪಂದಿಸಿ ಕೇವಲ ಎಂಟು ದಿನಗಳಲ್ಲಿ ಎಲ್ಲ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಫೋಟೋ ಸಮೇತ ನಮ್ಮ ಕಾರ್ಯಾಲಯಕ್ಕೆ ವರದಿ ನೀಡಿದರು. ತಕ್ಷಣ ನಮ್ಮ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯಿಂದ ಅವರಿಗೆ ಅಭಿನಂದನಾ ಪತ್ರ ಬರೆದು ಕಳಿಸಿದ್ದೇವೆ. ನಾವೆಲ್ಲರೂ ಮಕ್ಕಳ ಹಕ್ಕುಗಳನ್ನ ರಕ್ಷಿಸಿ ಅವರನ್ನು ಸಮಾಜದ ಭರವಸೆಯ ಬೆಳಕಾಗಿ ರೂಪಿಸಬೇಕಾಗಿದೆ. ಕೋಸಂಬೆ ಅಂತಹ ಮಹಾಜ್ಞಾನಿಗೆ ಉತ್ತರ ಕೊಡುತ್ತಾ ಕೂಡುವಷ್ಟು ಸಮಯ ನನ್ನಲ್ಲಿ ಇಲ್ಲವಾದರೂ, ಅವರು ಮಾಡಿರುವ ಸುಳ್ಳು ಆರೋಪಕ್ಕೆ ಸ್ಪಷ್ಟೀಕರಣ ನೀಡದಿದ್ದರೆ ಅದು ಆತ್ಮವಂಚನೆಯಾಗುತ್ತದೆ, ಹಾಗಾಗಿ ಅವರು ಮಾಡಿರುವ ಆರೋಪಕ್ಕೆ ನಾನು ಸ್ಪಷ್ಟವಾದ ರೀತಿನಲ್ಲಿ ಉತ್ತರ ನೀಡಿದ್ದೇನೆ, ಕೋಸಂಬೆಯವರು ನನ್ನ ಮೇಲೆ ಮಾಡಿರುವ ಸುಳ್ಳು ಆರೋಪಕ್ಕೆ ತಕ್ಷಣ ಕ್ಷಮೆ ಯಾಚಿಸಬೇಕು ಹಾಗೂ ನಾನು ಕೇಳಿರುವ ಪ್ರಶ್ನೆಗೆ ಉತ್ತರಿಸಬೇಕೆಂದು ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ.

ಅನಾಥ ಮಕ್ಕಳ ಸಂವೇದನೆಗಳು ನನಗೆ ಚೆನ್ನಾಗಿ ಗೊತ್ತು
“ನಾನು ಬಾಲ್ಯದಲ್ಲಿಯೇ ತಂದೆ ತಾಯಿಯನ್ನ ಕಳೆದುಕೊಂಡವನು. ತಂದೆ ತಾಯಿ ಇಲ್ಲದ ಮಕ್ಕಳ ಸಂವೇದನೆಗಳು ಕೋಸಂಬೆ ಅವರಿಗಿಂತ ನನಗೆ ಚೆನ್ನಾಗಿ ಗೊತ್ತು. ಹಾಗಾಗಿ ನಾನು ಅಧಿಕಾರಿಗಳನ್ನು ಎಚ್ಚರಿಸುವ ಪ್ರಯತ್ನ ಮಾಡಿ ಅವರಿಂದ ಸಕಾರಾತ್ಮಕವಾದ ಕೆಲಸವನ್ನು ಮಾಡಿಸಿ, ಮಕ್ಕಳ ಹಿತ ದೃಷ್ಟಿಯಿಂದ ಅವರು ಮಾಡಿದ ಕೆಲಸಕ್ಕೆ ಅಭಿನಂದನಾ ಪತ್ರ ಕೂಡ ಸಲ್ಲಿಸಿದ್ದೇನೆ. ಇದು ನನ್ನ ಕೆಲಸದ ರೀತಿ. ಶಶಿಧರ್ ಕೋಸಂಬೆ ಹೇಳುವ ಹಾಗೆ ಡ್ಯೂಟಿಸ್ ನೀಡಲು ಅಧಿಕಾರ ಇಲ್ಲವೆಂದಾದರೆ ಕೊನೆಗೆ ತಿಳುವಳಿಕೆ ಪತ್ರವನ್ನಾದರೂ ಬರೆದು ನಾನು ಪರಿವರ್ತನೆ ತರಲು ಪ್ರಯತ್ನಿಸುತ್ತೇನೆ ಅದಕ್ಕಾದರೂ ಕಾನೂನು ಪಂಡಿತರಾಗಿರುವ ಶಶಿಧರ್ ಕೋಸಂಬೆ ಅವರು ಅವಕಾಶ ಮಾಡಿಕೊಡಬಹುದೇನೋ… ಅಧಿಕಾರವನ್ನು ಜವಾಬ್ದಾರಿ ಎಂದು ತಿಳಿಯದ ಕೋಸಂಬೆ ಅವರೇ, ನಾನು ಸದಾ ಸಮಸ್ಯೆಯ ಭಾಗವಾಗಿ ಕೆಲಸ ಮಾಡುವುದಕ್ಕಿಂತ ಪರಿಹಾರದ ಭಾಗವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ಅದಕ್ಕಾಗಿ ನಾಡಿನ ಪಾಲಕರ ಮಕ್ಕಳ ಅಧಿಕಾರಿಗಳ ಸಹಕಾರವನ್ನು ಬೇಡುತ್ತೇನೆ. ಕೋಸಂಬೆ ತರ ಸೂಟು ಬೂಟು ಹಾಕಿಕೊಂಡು ಅಧಿಕಾರಿಗಳನ್ನು ಗದರಿಸುವುದೇ ಮಕ್ಕಳ ಸೇವೆ ಎಂದು ನಾನು ತಿಳಿದುಕೊಂಡಿಲ್ಲ.”
– ಸಂಗಮೇಶ ಬಬಲೇಶ್ವರ
ಅಧ್ಯಕ್ಷರು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ

