ಮುದ್ದೇಬಿಹಾಳ: ಕೃಷಿ ಅಗತ್ಯತೆಗಳನ್ನು ಸಗಟು ರೂಪದಲ್ಲಿ ತರುವ ಮತ್ತು ಬೆಳೆದ ಉತ್ಪನ್ನಗಳನ್ನು ಚಿಲ್ಲರೆ ರೂಪದಲ್ಲಿ ಮಾರುವ ಕೌಶಲ್ಯ ತಂದು ಕೊಡುವ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸಿ ಸುಸ್ಥಿರತೆಯ ಪರಿಸರ ನಿರ್ಮಿಸಲು ರೈತ ಉತ್ಪಾದಕ ಕಂಪನಿಗಳು ಉತ್ತಮ ಭೂಮಿಕೆಯಾಗಿದ್ದು ಕೃಷಿ ನಿರಾಸಕ್ತ ಹೊಸ ಪೀಳಿಗೆಯಲ್ಲಿ ಸಕಾರಾತ್ಮಕತೆ ತರಲು ಎಫ್.ಪಿ.ಓಗಳು ಸಹಕಾರಿಯಾಗಿವೆ ಎಂದು ಬಾಗಲಕೋಟೆಯ ಪಶು ಸಂಗೋಪನೆ ಹಾಗೂ ಪಶು ವೈಧ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಶಿವಾನಂದ ಕರಡಿಗುಡ್ಡ ಹೇಳಿದರು.
ಪಟ್ಟಣದ ವಿದ್ಯಾನಗರದಲ್ಲಿರುವ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯಲ್ಲಿ ಏರ್ಪಡಿಸಲಾಗಿದ್ದ ರೈತ ಉತ್ಪಾದಕ ಕಂಪನಿ ಕೈಪಿಡಿ ಹಾಗೂ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಮಟ್ಟದಲ್ಲಿ ರೈತರನ್ನು ಒಗ್ಗೂಡಿಸಿ ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳನ್ನು ಉತ್ತಮಪಡಿಸಬೇಕೆಂಬ ಆಲೋಚನೆಯಿಂದ ಹುಟ್ಟಿ ಬಂದ ರೈತ ಉತ್ಪಾದಕ ಕಂಪನಿಯ ಮೂಲ ಆಶಯವನ್ನು ಎತ್ತಿ ಹಿಡಿಯಲು ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ನಡೆಸುತ್ತಿರುವ ಪ್ರಯತ್ನಗಳು ಶ್ಲಾಘನೀಯ ಎಂದರು.
ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ವ್ಯಾಪ್ತಿಯ ಬೆಳಗಾವಿ ಪ್ರಾದೇಶಿಕ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಈರಣ್ಣ ಕೋಲಾರ ಮಾತನಾಡಿ, ಕೃಷಿಯನ್ನು ಸುಸ್ಥಿರಗೊಳಿಸುವಲ್ಲಿ, ಜೀವನೋಪಾಯವನ್ನು ಉತ್ತೇಜಿಸುವಲ್ಲಿ ಹಾಗೂ ಕೃಷಿಯ ಮೇಲೆ ಅವಲಂಬಿತರಾಗಿರುವವರ ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ರೈತ ಉತ್ಪಾದಕ ಕಂಪನಿಗಳು ನಿರ್ಣಾಯಿಕ ಪಾತ್ರ ವಹಿಸುತ್ತವೆ ಎಂಬುದನ್ನು ದೃಢಪಡಿಸಲು ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಇಟ್ಟಿರುವ ಹೆಜ್ಜೆಗಳು ಇತರೆ ಎಫ್.ಪಿ.ಓಗಳಿಗೆ ಮಾದರಿಯಾಗಿವೆ ಎಂದರು.
ಮುಖ್ಯ ಅತಿಥಿಯಾಗಿದ್ದ ಪ್ರಗತಿಪರ ರೈತ ನಾಗೇಶ ಭಾವಿಕಟ್ಟಿ ಮಾತನಾಡಿ ರೈತರು ದಿನನಿತ್ಯದ ಬದುಕಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಧ್ವನಿಯಾಗುವುದರ ಜೊತೆ ಅಗತ್ಯತೆಗಳನ್ನು ಅವರ ಮನೆ ಬಾಗಿಲಿಗೆ ಮುಟ್ಟಿಸುವ ಜವಾಬ್ದಾರಿ ಮತ್ತು ಸದಸ್ಯ ರೈತ ಕುಟುಂಬದ ಯೋಗಕ್ಷೇಮ ನೋಡಿಕೊಳ್ಳಲು ನಿಭಾಯಿಸಬೇಕಾದ ಕರ್ತವ್ಯಗಳೆರಡನ್ನು ನನ್ನದೆಂಬ ಭರವಸೆಯನ್ನು ಮೂಡಿಸಲು ಹುಟ್ಟಿಬಂದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯನ್ನು ವ್ಯವಸ್ಥಿತವಾಗಿ ಕಟ್ಟಲು ಹಗಲಿರುಳು ದುಡಿಯುತ್ತಿರುವ ಅರವಿಂದ ಕೊಪ್ಪರವರ ಮಾರ್ಗದರ್ಶನದಲ್ಲಿ ಇಡೀ ದೇಶಕ್ಕೆ ದಾಸೋಹಿ ಎಂಬ ಪದದ ಅರ್ಥದಡಿ ನಾವೆಲ್ಲ ದುಡಿಯಲು ಸನ್ನದ್ದರಾಗಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಅರವಿಂದ ಕೊಪ್ಪ ಮಾತನಾಡಿ ರೈತರ ಸಾರ್ವಭೌಮತ್ವ, ಮಾನವೀಯತೆ ಹಾಗೂ ವಿನಮ್ರತೆಯನ್ನು ಎತ್ತಿ ಹಿಡಿದು ಅಹಂಕಾರ ಭಾವ ಮತ್ತು ಇತರರ ಒಳಿತಿಗಾಗಿ ದುಡಿಯುವ ಹಂಬಲದೊAದಿಗೆ ನಿಸ್ವಾರ್ಥಮಯ ಸೇವೆಯನ್ನು ಸಮಾಜಕ್ಕೆ ಅರ್ಪಿಸುವುದನ್ನು ಪ್ರತಿಪಾದಿಸುವ ದಾಸೋಹಿ ಎಂಬ ವೃಕ್ಷದಡಿ ರೈತ ಕುಲದ ಕಲ್ಯಾಣಕ್ಕೆ ಸ್ಮರಣೀಯ ಕಾರ್ಯಗಳನ್ನು ರೈತರಿಗೆ ಕೊಡುಗೆಯಾಗಿ ನೀಡಬೇಕೆಂದು ನಿಷ್ಠರಾಗಿದ್ದೇವೆ ಎಂದರು.
ಸಾನಿಧ್ಯವನ್ನು ವೇ. ಶರಣಯ್ಯ ಹಿರೇಮಠ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಂಪನಿಯ ಕಾರ್ಯನಿರ್ವಾಹಕ ಪರಿಷತ್ ಅಧ್ಯಕ್ಷ ಆರ್.ಬಿ.ಸಜ್ಜನ, ಉಪಾಧ್ಯಕ್ಷ ಬಸನಗೌಡ ಪಾಟೀಲ, ಸಹ ಕಾರ್ಯದರ್ಶಿ ಶ್ರೀಶೈಲ ಮೇಟಿ, ನಿರ್ದೇಶಕರಾದ ಗೋಲಪ್ಪ ಗಂಗನಗೌಡರ, ಸೋಮಲಿಂಗಪ್ಪ ಗಸ್ತಿಗಾರ, ಸಂಗಪ್ಪ ಹವಾಲ್ದಾರ, ಶ್ರೀ ಪರಮಾನಂದ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಜಿಲ್ಲಾ ಸಮನ್ವಯಾಧಿಕಾರಿ ಶ್ರೀಶೈಲ ಅಳ್ಳಗಿ ಉಪಸ್ಥಿತರಿದ್ದರು.
ಕಂಪನಿಯ ನಿರ್ದೇಶಕ ಜಗದೀಶ ಪಂಪಣ್ಣವರ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕಿ, ನ್ಯಾಯವಾದಿ ರಶ್ಮಿ ಕೊಪ್ಪ ವಕೀಲರು ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಮಾರುಕಟ್ಟೆ ಅಧಿಕಾರಿ ಬಾಲಕೃಷ್ಣ ಗೌಡರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

