ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ, ಗಣಿಹಾರ ಆರೋಪ
ವಿಜಯಪುರ: ಮುಸ್ಲಿಮರ 2ಬಿ ಮೀಸಲಾತಿಯನ್ನು ರದ್ದುಪಡಿಸಿದ ಸರಕಾರದ ಉದ್ದೇಶ, ಸಮಾಜಗಳಲ್ಲಿ ಒಡಕುಂಟು ಮಾಡುವುದಲ್ಲದೆ ಇದರಿಂದ ಮುಸ್ಲಿಮರು ಪ್ರಚೋದನೆಗೆ ಒಳಗಾಗಿ ಗಲಭೆ, ದಾಂಧಲೆ ಮಾಡಲಿ ಎನ್ನುವುದಾಗಿತ್ತು. ಇದರಿಂದ ರಾಜ್ಯದಲ್ಲಿ ಅಶಾಂತಿ, ಗೊಂದಲ ಸೃಷ್ಟಿಸಿ ಚುನಾವಣೆಯಲ್ಲಿ ಬಿಜೆಪಿ ತನ್ನ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ಹೊಂದಿತ್ತು ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಆರೋಪಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರಕಾರ ಮುಸ್ಲಿಮರ ಶೇಕಡ ನಾಲ್ಕು ಮೀಸಲಾತಿ ರದ್ದುಪಡಿಸಿ ಅದರಲ್ಲಿ ಪಂಚಮಸಾಲಿಗೆ ಶೇಕಡ 2 ಒಕ್ಕಲಿಗರಿಗೆ ಶೇಕಡ 2 ಹಂಚಿದ್ದಾರೆ. ನಮ್ಮ ಅನ್ನವನ್ನು ಕಸಿದುಕೊಂಡು ಇನ್ನೊಬ್ಬರಿಗೆ ಹಂಚಿದ್ದಾರೆ. ಇದು ಯಾವ ನ್ಯಾಯ? ಯಾವ ಧರ್ಮವೂ ಹೀಗೆ ಹೇಳುವುದಿಲ್ಲ. ಎಲ್ಲ ಧರ್ಮಗಳ ಸಾರ ಒಂದೇ ಆಗಿರುವಾಗ ಚುನಾವಣೆ ಹೊತ್ತಲ್ಲಿ ಕೇವಲ ರಾಜಕೀಯ ಮತ ಬೇಟೆಗೋಸ್ಕರ ಸರಕಾರ ಈ ನಾಟಕವಾಡಿದೆ. ಆದರೆ ಮುಸ್ಲಿಂ ಸಮುದಾಯವು ಬಿಜೆಪಿ ಸರ್ಕಾರದ ಹುನ್ನಾರಕ್ಕೆ ಬಲಿಯಾಗದೆ ಪ್ರತಿಭಟನೆ, ಗಲಭೆಗೆ ಕೈಹಾಕದೆ ಕಾನೂನು ಹೋರಾಟಕ್ಕೆ ಮುಂದಾಗಿದ್ದು ಬಿಜೆಪಿಗೆ ತಿರುಗುಬಾಣವಾಗಿದೆ ಎಂದರು.
ಈಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬುದು ಸಂವಿಧಾನದಲ್ಲಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ಲಿಂಗಾಯತರಿಗೆ ಮೀಸಲಾತಿ ಕೊಡಬೇಕೆಂದು ಸಂವಿಧಾನದಲ್ಲಿ ಹೇಳಿದೆಯಾ ಸಿಎಂ ಬೊಮ್ಮಾಯಿ ಅವರೆ ಎಂದು ಪ್ರಶ್ನಿಸಿದ ಅವರು ಅಮಿತ್ ಶಾ ಅವರು ಜನರನ್ನು ದಾರಿ ತಪ್ಪಿಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಆಗಿದ್ದಾರೆ. ಲವಲೇಶವೂ ಸಾಮಾಜಿಕ ಕಾಳಜಿ ಇಲ್ಲದ ಅವರು ಕೇವಲ ಒಂದು ಸಂಘಟನೆಯ ಮುಖ್ಯಮಂತ್ರಿ ಆಗಿದ್ದಾರೆಂದು ಲೇವಡಿ ಮಾಡಿದರು.
ಈಗಾಗಲೇ ಮುಸ್ಲಿಮರ ಮೀಸಲಾತಿ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ತಾವು ಈ ಕುರಿತು ಕಾನೂನು ತಜ್ಞರ ಜೊತೆ ಸಮಾಲೋಚಿಸುತ್ತಿರುವುದಾಗಿ ಎಸ್ ಎಂ ಪಾಟೀಲ್ ಗಣಿಹಾರ ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ನಾಗರಾಜ್ ಲಂಬು, ಎಂ.ಸಿ.ಮುಲ್ಲಾ, ಫಯಾಜ್ ಕಲಾದಗಿ, ಅಕ್ರಂ ಮಾಶಾಳಕರ್ ಇದ್ದರು.