ಹಡಗಿನಾಳದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಶಾಸಕ ನಾಡಗೌಡ ಸ್ಪಷ್ಠನೆ
ತಾಳಿಕೋಟಿ: ಮತಕ್ಷೇತ್ರ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಿಗೂ ಮೂಲಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ ಸಮರ್ಪಕ ವಿದ್ಯುತ್, ಆರೋಗ್ಯ ಹಾಗೂ ಶಿಕ್ಷಣವನ್ನು ಒದಗಿಸಲು ಆದ್ಯತೆಯೊಂದಿಗೆ ಕೆಲಸ ಮಾಡಲಾಗುವುದು ಎಂದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.
ಬುಧವಾರ ತಾಲೂಕಿನ ಮೂಕಿಹಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನೂತನ ಹಡಗಿನಾಳ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ವಿಜಯಪುರ ತಾಲೂಕು ಪಂಚಾಯತ್ ತಾಳಿಕೋಟೆ ಹಾಗೂ ಮೂಕಿಹಾಳ ಗ್ರಾಮ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಜನಸಂಪರ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಗ್ರಾಮಸ್ಥರಿಂದ ಗ್ರಾಮದಲ್ಲಿರುವ ಸಮಸ್ಯೆಗಳ ಕುರಿತು ಅವರು ಮಾಹಿತಿ ಪಡೆದುಕೊಂಡರು. ನಂತರ ಮಾತನಾಡಿದ ಅವರು, ಹಡಗಿನಾಳ ಗ್ರಾಮವು ಸ್ಥಳಾಂತರಗೊಂಡ ನೂತನ ಗ್ರಾಮವಾಗಿರುವುದರಿಂದ ಇಲ್ಲಿ ಹಲವಾರು ಸಮಸ್ಯೆಗಳು ಇರುವುದು ನಿಜ. ಮೂಲವಾಗಿ ಶುದ್ಧ ಕುಡಿಯುವ ನೀರಿನ ತೊಂದರೆ ಇದ್ದು ಲಭ್ಯ ಇರುವ ನೀರು ಫ್ಲೋರೈಡ್ನಿಂದ ಕೂಡಿದೆ. ಇದಕ್ಕಾಗಿ ಇಲ್ಲೊಂದು ಆರ್ ಒ ಪ್ಲಾಂಟ್ ಘಟಕ ಸ್ಥಾಪಿಸುವುದು ಅಗತ್ಯವಾಗಿದೆ. ತಾಳಿಕೋಟಿಯಿಂದ ಈ ಗ್ರಾಮಕ್ಕೆ ಬರಲು ಸುಮಾರು ಮೂರು ಕಿಲೋಮೀಟರ್ ಅಂತರವಿದ್ದು ಈ ರಸ್ತೆ ನಿರ್ಮಿಸಲು ಆದಷ್ಟು ಬೇಗ ಕ್ರಮ ವಹಿಸಲಾಗುವುದು. ಇಲ್ಲಿರುವ ಜನರಿಗೆ ಮದುವೆ ಸಭೆ ಸಮಾರಂಭವನ್ನು ಮಾಡಲು ಒಂದು ಸಮುದಾಯ ಭವನದ ಅಗತ್ಯವಿದ್ದು ಸುಮಾರು 70 ಲಕ್ಷದ ಅನುದಾನವನ್ನು ಮಂಜೂರು ಮಾಡಿಸಲಾಗುವುದು. ಈ ಬಾರಿ ಮಂಜೂರಾದ ಮನೆಗಳು ಕೇವಲ ಸಾಮಾನ್ಯ ವರ್ಗದ ಜನರಿಗೆ ಏಕೆ ಮೀಸಲಾಗಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ಸರ್ಕಾರದವರ ತಪ್ಪು ನಿರ್ಣಯದಿಂದಾಗಿ ಹೀಗಾಗಿದೆ, ಮುಂದಿನ ಬಾರಿ ಇದನ್ನು ಸರಿಪಡಿಸಲಾಗುವುದು ಎಂದರು. ಇಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಶಾಲೆಗೆ ಬಿಸಿ ಊಟದ ಅಡುಗೆ ಕೋಣೆ ಮಕ್ಕಳಿಗೆ ಶೌಚಾಲಯ ಹಾಗೂ ಇತರ ಸೌಲಭ್ಯಗಳನ್ನು ನೀಡಲು ತಾಪಂ ಇ ಓ ಬಿರಾದಾರ ಹಾಗೂ ಗ್ರಾಪಂ ಅಧ್ಯಕ್ಷರಿಗೆ ಸೂಚಿಸಿದರು.
ಈ ಸಮಯದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಬಿರಾದಾರ. ಗ್ರಾಪಂ ಅಧ್ಯಕ್ಷ ಆರ್ ಎಚ್ ಮೇಟಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಹಿರೇಗೌಡರ, ಕೃಷಿ ಅಧಿಕಾರಿ ಮಹೇಶ್ ಜೋಶಿ. ಎ ಡಿ ಎಲ್ ಆರ್ ಬಾವಿಕಟ್ಟಿ, ಕಂದಾಯ ಇಲಾಖೆಯ ಹಾರಿವಾಳ, ಜಿಪಂ ನ ಪ್ರವೀಣ, ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಧರ್ಮಪ್ಪ ರಾಥೋಡ, ಸಮಾಜ ಕಲ್ಯಾಣ ಇಲಾಖೆಯ ಎನ್ ವಿ ಕೋರಿ, ಎಸ್.ಎಮ್. ಕಲಬುರ್ಗಿ ಅರಣ್ಯ ಇಲಾಖೆಯ ಮಹಂತೇಶ್ ಹಾದಿಮನಿ, ಮುಖ್ಯಾಳ ಗ್ರಾಪಂ ಕಾರ್ಯದರ್ಶಿ ಶಿವನಗೌಡ ದೊಡ್ಡಮನಿ, ಗ್ರಾಮದ ಗಣ್ಯರಾದ ರಾಮನಗೌಡ ದೇಸಾಯಿ, ಕಾಶಿನಾಥ್ ದೇಸಾಯಿ, ಗೌಡಪ್ಪ ದೇಸಾಯಿ, ಮಲ್ಲಪ್ಪ ಪೂಜಾರಿ, ಸಂಗನಗೌಡ ದೇಸಾಯಿ, ಭೀಮನಗೌಡ ದೇಸಾಯಿ ಸೇರಿದಂತೆ ಮತ್ತಿತರರು ಇದ್ದರು.

