ಇಂಡಿ: ಕನ್ನಡ ಕಾವ್ಯದ ಪರಂಪರೆಯ ತಿಳಿದುಕೊಳ್ಳುವುದು ಇಂದಿನ ಯುವ ಕವಿಗಳಲ್ಲಿ ಅಗತ್ಯವಾಗಿದೆ. ಬಸವನೆಲದ ಈ ಪುರಸ್ಕಾರ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದೆ ಎಂದು ಮೇಘಾಲಯದ ಐಎಎಸ್ ಅಧಿಕಾರಿ ಹೇಮಾ ನಾಯಕ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಭವನದಲ್ಲಿ ಬೆರಗು ಪ್ರಕಾಶನ ಸಂಸ್ಥೆ ಕಡಣಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ
‘ಪ್ರೊ.ಎಚ್.ಟಿ.ಪೋತೆ-೨೦೨೩ ಬೆರಗು ಪ್ರಶಸ್ತಿ ಪ್ರದಾನ ಹಾಗೂ ’ನೋವಿಗೂ ಇದೆ ಚಲನೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರುಮಾತನಾಡಿದರು.
ಬಸವ ನೆಲದಿಂದ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನ್ನ ಸೌಭಾಗ್ಯವೇ ಸರಿ, ಕಾವ್ಯದ ನಿರಂತರ ಧ್ಯಾನದ ಪ್ರತಿಫಲನವು ಸಂಕಲನದಲ್ಲಿ ಕಾಣಬಹುದಾಗಿದೆ, ಕವಿತೆಯೆನ್ನುವುದು ಅದು ಮೋಹಕರೂಪಗಳ ಒಟ್ಟಂದ, ಕಾವ್ಯದ ಆಸಕ್ತಿಯು ವಿದ್ಯಾರ್ಥಿಗಳಲ್ಲೂ ಬರಬೇಕಿದೆ, ಕಾಲೇಜು ದಿನಗಳಲ್ಲಿ ಪಠ್ಯ ಮತ್ತು ಪಠ್ಯೇತರ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಶಸ್ತಿ ಪ್ರದಾನ ಮಾಡಿದ ಖ್ಯಾತ ಸಂಶೋಧಕ ಡಿ.ಎನ್.ಅಕ್ಕಿ ಮಾತನಾಡಿ, ಪ್ರತಿಭಾವಂತರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಬೆರಗು ತನ್ನ ಪಾರದರ್ಶಕತೆಯನ್ನು ತೋರಿಸಿದೆ, ಯಾವುದೇ ಲಾಬಿಯಿಲ್ಲದೇ ಇಂದಿನ ದಿನಮಾನಗಳಲ್ಲಿ ಅರ್ಹರಿಗೆ ಪ್ರಶಸ್ತಿ ಸಂಮಾನಗಳು ಸಿಗುತ್ತಿಲ್ಲ ಎಂದು ವಿಷಾಧಿಸಿದರು.
ಲೋಕಾರ್ಪಣೆಗೊಂಡ ಬೆರಗು ಪ್ರಶಸ್ತಿ ಪಡೆದ ನೋವಿಗೂ ಇದೆ ಚಲನೆ ಕೃತಿಯ ಕುರಿತು ಸಾಹಿತಿ ಸಿ.ಎಂ.ಬಂಡಗರ ಮಾತನಾಡುತ್ತಾ ‘ಬೆರಗು ಪ್ರಕಾಶನವು ಕಳೆದ ೭ ವರ್ಷಗಳಲ್ಲಿ ೧೨೫ ಪುಸ್ತಕಗಳನ್ನು ಪ್ರಕಟಿಸಿದ್ದು, ಪ್ರತಿವರ್ಷ ಹಸ್ತಪ್ರತಿಯೊಂದಕ್ಕೆ ಬೆರಗು ಪ್ರಶಸ್ತಿ ನೀಡಿ ಪುಸ್ತಕವನ್ನು ಪ್ರಕಟಿಸುವ ಮೂಲಕ ಗೌರವಿಸುವ ಸಂಪ್ರದಾಯಹಾಕಿಕೊಂಡು ಮುನ್ನಡೆಯುತ್ತಾ ಬಂದಿರುವುದು ಶ್ಲಾಘನೀಯ ಕಾರ್ಯ, ಹೇಮಾ ಅವರ ಕಾವ್ಯ ಎಲ್ಲ ರೂಪುಗಳನ್ನು ಮೀರಿ ಬೆರಗುಗೊಳಿಸುತ್ತದೆ ಎಂದರು.
ಕಾಲೇಜಿನ ಪ್ರಾಚಾರ್ಯ ಆರ್.ಎಚ್.ರಮೇಶ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. ಪ್ರಾಸ್ತಾವಿಕವಾಗಿ ಬೆರಗು ಪ್ರಕಾಶನದ ಸಂಚಾಲಕ ಡಾ. ರಮೇಶ ಎಸ್. ಕತ್ತಿ ಮಾತನಾಡಿದರು. ಬೆರಗು ಪ್ರಕಾಶನ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮೀ ಕತ್ತಿ, ಐಕ್ಯೂಎಸಿ ಸಂಯೋಜಕಿ ಶೀರಿನೂಸುಲ್ತಾನ ಇನಾಂದಾರ, ಬೆರಗು ಬಳಗದ ಅವಧೂತ ಬಂಡಗಾರ, ಪ್ರೊ.ರಾಜಲಕ್ಷ್ಮೀ ಆರ್, ಪ್ರೊ.ಕಿರಣ ರೇವಣಕರ, ಕವೀಂದ್ರ ಚಾಬುಕಸ್ವಾರ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
*ಪುಸ್ತಕ ಬಿಡುಗಡೆ, ನಗದು ಫಲಕ, ಸ್ಮರಣಿಕೆ ಸಮರ್ಪಣೆ*
ಪ್ರಸಕ್ತ ವರ್ಷ ಬೆರಗು ಪ್ರಕಾಶನ ಸಂಸ್ಥೆಯು ಖ್ಯಾತ ಸಾಹಿತಿ ಪ್ರೊ.ಎಚ್.ಟಿ.ಪೋತೆ ಅವರ ಹೆಸರಿನಲ್ಲಿ ಈ ಬಾರಿ ಮಹಿಳೆಯರಿಗಾಗಿಯೇ ಎರ್ಪಡಿಸಿದ್ದ ಹಸ್ತಪ್ರತಿ ಸ್ಪರ್ಧೆಯಲ್ಲಿ ಬಂದ ೬೯ ಹಸ್ತಪ್ರತಿಗಳಲ್ಲಿ ಹೇಮಾ ನಾಯಕ ಅವರ ನೋವಿಗೂ ಇದೆ ಚಲನೆ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅದನ್ನು ಪ್ರಕಟಿಸುವ ಮೂಲಕ ಬೆರಗು ಪ್ರಕಾಶನ ಗೌರವ ಸಮರ್ಪಿಸಿತು. ಹತ್ತು ಸಾವಿರ ರೂ.ಗಳ ನಗದು, ಪ್ರಶಸ್ತಿ ಫಲಕ ಸ್ಮರಣಿಕೆ ನೀಡಿ ಲೇಖಕಿ ಹೇಮಾ ನಾಯಕ ಅವರಿಗೆ ಖ್ಯಾತ ಸಂಶೋಧಕ ಡಿ.ಎನ್.ಅಕ್ಕಿ ಹಾಗೂ ವೇದಿಕೆಯ ಮೇಲಿನ ಗಣ್ಯರು ಗೌರವಿಸಿದರು. ಇದೇ ಸಂದರ್ಭದಲ್ಲಿ ನೋವಿಗೂ ಇದೆ ಚಲನೆ ಕವನ ಸಂಕಲನವನ್ನು ಕರ್ನಾಟಕ ವಿದ್ಯಾವರ್ಧಕ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪಿ.ಬಿ.ಕತ್ತಿ ಲೋಕಾರ್ಪಣೆ ಮಾಡಿ ಮಾತನಾಡಿದರು. ಹೇಮಾ ನಾಯಕ ೨೦೨೦ರ ಮೇಘಾಲಯ ಕೇಡರ್ ನಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

