ಗದುಗಿನ ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ,ಎಸ್.ಎಸ್. ಪಟ್ಟಣಶೆಟ್ಟರ ಅಭಿಮತ
ಆಲಮಟ್ಟಿ: ಸಾಮಾಜಿಕ ಕಳಕಳಿಯ ಎಲ್ಲ ಮಜಲುಗಳನ್ನು ನಿಷ್ಟೆ ಬದ್ದತೆಯ ಕಾರ್ಯಕ್ಷಮತೆಯಿಂದ ನಿರ್ವಹಿಸಿರುವ ಕರುನಾಡು ಗಾಂಧಿ ಹರ್ಡೇಕರ ಮಂಜಪ್ಪನವರು ಕಾಯಕ ಪ್ರಕಾಶದ ಅದಮ್ಯ ಪುಷ್ಪ ಎಂದು ಗದುಗಿನ ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ,ಶಿವಾನಂದ ಪಟ್ಟಣಶೆಟ್ಟರ ಅಭಿಪ್ರಾಯಿಸಿದರು.
ಆಲಮಟ್ಟಿಯಲ್ಲಿರುವ ರಾಷ್ಟ್ರಧರ್ಮ ದೃಷ್ಟಾರ, ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪನವರ ಸ್ಮಾರಕ ಭವನಕ್ಕೆ ಭೇಟಿ ನೀಡಿ ಮಂಜಪ್ಪನವರ ಪ್ರತಿಮೆಗೆ ಹೂಮಾಲೆ ಹಾಕಿ ಗೌರವ ಸಲ್ಲಿಸಿ ಮಾತನಾಡಿದ ಅವರು, ತರ್ಕಶುದ್ದಿ ವಿವೇಚನೆಯಿಂದ ಮಂಜಪ್ಪನವರು ಕೈಗೊಂಡ ದೇಶಭಕ್ತಿ,ರಾಷ್ಟ್ರೀಯತೆ ಸೇರಿದಂತೆ ಸಮಾಜಪರ ಮಾಡಿರುವ ಹಲವಾರು ಅಮೋಘ ಕಾಯಕಗಳು ಇಂದಿಗೂ ಜೀವಂತವಾಗಿವೆ ಎಂದರು.
ಋಷಿ ಸದೃಶ ಜೀವನ ನಡೆಸಿರುವ ಮಂಜಪ್ಪನವರು ಅನರ್ಘ್ಯ ಸಂದೇಶಗಳನ್ನು ಸಮಾಜಮುಖಿಯಾಗಿ ನೀಡಿದ್ದಾರೆ. ಮೇರು ವ್ಯಕ್ತಿತ್ವದ ಕರುನಾಡಿನ ಧ್ರುವತಾರೆಯಾಗಿ ಮಹಾಮಾನವ ಗೈದಿರುವ ಕಾಯಕ ತತ್ಪರತೆಗಳು ಮರೆಯಲು ಅಸಾಧ್ಯ. ಅವರ ಪರಿಶ್ರಮದ ಫಲವು ಸದಾಕಾಲವೂ ಅಜರಾಮರಾಗಿವೆ. ಮಹಾತ್ಮಾ ಗಾಂಧಿಯವರ ತತ್ವಪಾಲಕರಾಗಿ, ಬಸವ ಚಿಂತನೆಗಳ ಅನುಯಾಯಿಗಳಾಗಿ ಸರಳ ಜೀವನ ಪಥದಲ್ಲಿ ಸಾಗಿರುವ ಮಹಾ ಮುತ್ಸದ್ದಿ ಮಂಜಪ್ಪನವರ ಅಪ್ಪಟ ದೇಶ ಪ್ರೇಮ ಸೇವೆ ಅನನ್ಯವಾಗಿವೆ. ನಾಡು-ನುಡಿ ಕಾಳಜಿಯಂತೂ ಶಕ್ತಿಯುತವಾಗಿವೆ ಎಂದರು.
ಸಾಹಿತಿಗಳಾಗಿ ಹಲವಾರು ಗ್ರಂಥ ಮಾಲೆಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಮಂಜಪ್ಪನವರ ಬದುಕಿನ ಎಲ್ಲ ಅಯಾಮಗಳು ಸರ್ವೋಚ್ಚವಾಗಿವೆ. ಎಲ್ಲಾ ಕ್ಷೇತ್ರದಲ್ಲೂ ತಮ್ಮ ಆಸ್ತಿತ್ವನ್ನು ಪ್ರತಿಪಾದಿಸಿದ್ದಾರೆ. ಅವರ ಪರಿಶುದ್ಧ ಜೀವನ ಚರಿತ್ರೆ, ಶ್ರೇಷ್ಟ ಬರಹ, ವಿಚಾರ, ಚಿಂತನೆಗಳು ನಮಗೆ ದಾರಿದೀಪವಾಗಿವೆ. ತಪಸ್ಸಿನೋಪಾದಿಯಲ್ಲಿ ಸಮಾಜ ಸೇವೆ ಅವ್ಯಾಹತವಾಗಿ ನಡೆದಿವೆ. ಸಾಮಾಜಿಕ ಸುಧಾರಣೆಯ ಪರಿಕಲ್ಪನೆಯಂತೂ ಅದ್ವಿತೀಯವಾಗಿವೆ ಎಂದು ಮಂಜಪ್ಪನವರ ಯಶೋಗಾಥೆ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಬಣ್ಞಿಸಿದರು.
ನಾಡ ನೇತಾರರಲ್ಲೊಬ್ಬರಾಗಿ ಬದುಕಿರುವ ಮಂಜಪ್ಪನವರು ಬನವಾಸಿಯ ಬಡಕುಟುಂಬದಲ್ಲಿ ಜನ್ಮತಳೆದು ಆಲಮಟ್ಟಿ ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಅಪಾರ ಸಾಧನೆ ಮಾಡಿದ್ದಾರೆ. ಇಲ್ಲಿ ಕಾಯಕ ವೃತ್ತಿ ಶಿಕ್ಷಣದ ಮತ್ತು ನೈತಿಕ ಶಿಕ್ಷಣದ ಒಂದು ಗುರುಕುಲ ವಿದ್ಯಾಲಯ ಸ್ಥಾಪಿಸಿ ಮಕ್ಕಳ ಬುದ್ದಿಯ ವಿಕಸನಕ್ಕೆ ಶ್ರಮಿಸಿದರು. ಗ್ರಾಮೋದ್ಯೋಗಗಳ ಪುನರುಜ್ಜೀವನದ ಅಪೇಕ್ಷೆ ಹೇರಳವಾಗಿತ್ತು. ಯಾವುದೇ ಸ್ವ ಪ್ರತಿಫಲನದ ನಿರಪೇಕ್ಷಯಿಲ್ಲದೇ ಸಾಗಿದ ಮಂಜಪ್ಪನವರ ಕಾಯಕ ಘಂಟಗಳು ಆದರ್ಶಪ್ರಾಯವಾಗಿವೆ. ಇಂಥ ಶರಣರನ್ನು ಕಾಣುವುದು ವಿರಳ. ಅವರ ಕಾಯಕ ದರ್ಪಣ, ಜೀವನ ಮೈಲುಗಲ್ಲು ಸಮಾಜಕ್ಕೆ ಅಮೃತ ಸಂಜೀವಿನಿಯ ಶಕ್ತಿಯಾಗಿದೆ. ಜನಸಾಮಾನ್ಯರಿಗೆ ದಿಕ್ಕು ತೋರಿದ ಮಂಜಪ್ಪನವರು ಎಂಬ ಅಪ್ರತಿಮ ಪ್ರತಿಭೆಗೆ ಕೊನೆವರೆಗೂ ಸರಿಯಾದ ರೀತಿಯಲ್ಲಿ ಸಮಾಜ ಸ್ಪಂದಿಸದಿರುವದು ಅತೀವ ನೋವಿನ ಸಂಗತಿ. ಸರಿಯಾದ ನ್ಯಾಯ, ಪ್ರಚಾರ, ಗುರುತಿಸುವಿಕೆ ದೊರೆಯದೆ ಶರಣ ಮಂಜಪ್ಪನವರು ಇನ್ನೂ ಅಪರಿಚಿತರಂತೆ ಉಳಿದಿರುವುದು ದುರಂತ. ಇಂಥ ಅಜ್ಞಾತ ಮಹಾತ್ಮನ ಬಗ್ಗೆ ಕರುಣೆ, ಕಳಕಳಿ ಸಮಾಜ ಹೊಂದಬೇಕು ಎಂದರು.
ಸಂಸ್ಥೆಯ ಸಿಇಓ ಆಯ್.ಬಿ.ಬೆನಕೊಪ್ಪ ಮಾತನಾಡಿ, ಶರಣ ಮಂಜಪ್ಪ ಹರ್ಡೇಕರ ಅವರ ಬಹುಮುಖ ಚರಿತ್ರೆ ಎಲ್ಲರೂ ಅರಿಯಬೇಕು. ದಯೆ, ಸತ್ಯ, ಧೈರ್ಯ ಸ್ವಭಾವಕ್ಕನುಗುಣವಾಗಿ ಅವರ ಕಾಯಕಗಳು ಸಾಗಿವೆ. ಸೌಮ್ಯೋಕ್ತಿ ಭಾವದ ಮಂಜಪ್ಪನವರು ರಾಷ್ಟ್ರನಿಷ್ಟೆಯ ಮಹಾಚೇತನ ಜೀವ. ತಮ್ಮ ತನು,ಮನ,ಭಾವಗಳೆಲ್ಲ ಸಮಾಜಕ್ಕೆ ಮೀಸಲಿರಿಸಿದ ಮಹಾನುಭಾವರು ಎಂದರು.
ಗದುಗಿನ ಕಲ್ಯಾಣ ವಾಣಿ ಪತ್ರಿಕೆ ಸಂಪಾದಕ ಕೋಟ್ರೇಶ ಮೆಣಸಿನಕಾಯಿ, ತೋಂಟದಾರ್ಯ ವಿದ್ಯಾಪೀಠ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಾದ ಎಸ್.ಎಸ್.ನೀಲಗುಂದ, ಅಶೋಕ ಇಲಕಲ್, ಈರಣ್ಣ ಗುರುಪುತ್ರಪ್ಪನವರ, ಆಲಮಟ್ಟಿ ಎಂ.ಎಚ್.ಎಂ.ಪಪೂ ಕಾಲೇಜು ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ, ಡಿಗ್ರಿ ಕಾಲೇಜು ಪ್ರಾಚಾರ್ಯ ಎಚ್.ಎನ್.ಕೆಲೂರ, ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಎಸ್.ಆಯ್.ಗಿಡ್ಡಪ್ಪಗೋಳ, ಉಪನ್ಯಾಸಕರಾದ ಪಿ.ವೈ.ಧನಶೆಟ್ಟಿ, ಎಂ.ಎಸ್.ಸಜ್ಜನ, ಮಮತಾ ಕರೆಮುರಗಿ, ಎನ್.ಎಸ್.ಬಿರಾದಾರ, ಜಿ.ಆರ್.ಜಾಧವ, ಎಂ.ಎಚ್.ಬಳಬಟ್ಟಿ, ಶಾಂತೂ ತಡಸಿ, ಶಿಕ್ಷಣ ಪ್ರೇಮಿ ಬಸಯ್ಯ ಶಿವಯೋಗಿಮಠ ಮೊದಲಾದವರಿದ್ದರು.

