“ಸ್ವಚ್ಛತೆ-ಸಮಯ ಪಾಲನೆ-ವ್ಯಸನಮುಕ್ತಿ” ವಿಷಯದ ಗೋಷ್ಠಿಯಲ್ಲಿ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಅಭಿಮತ
ವಿಜಯಪುರ: ಯಾರು ಸಮಯಕ್ಕೆ ಬೆಲೆ ಕೊಡುತ್ತಾರೊ ಅಂತಹವರನ್ನು ಇಡೀ ಜಗತ್ತೆ ಗುರುತಿಸುವಂತಹ ಸಮಯ ಬರುತ್ತದೆ ಎಂದು ಶ್ರೀ ಸಿದ್ಧೇಶ್ವರ ಅಪ್ಪನವರು ಸದಾ ಹೇಳುತ್ತಿದ್ದರು ಎಂದು ಖ್ಯಾತ ವಾಗ್ಮಿ ಹಾಗೂ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ “ಸ್ವಚ್ಛತೆ-ಸಮಯ ಪಾಲನೆ-ವ್ಯಸನಮುಕ್ತಿ” ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ೪ನೇ ಗೋಷ್ಠಿಯಲ್ಲಿ ತಮ್ಮ ಅನುಭಾವದ ನುಡಿಗಳನ್ನಾಡಿದರು.
ಜ್ಞಾನಯೋಗಾಶ್ರಮದಲ್ಲಿ ಮಾತ್ರ ಅಲ್ಲ, ಎಲ್ಲ ಭಕ್ತ ವೃಂದದ ಹೃದಯದಲ್ಲೂ ಶ್ರೀ ಸಿದ್ಧೇಶ್ವರ ಅಪ್ಪನವರು ನೆಲೆಸಿದ್ದಾರೆ. ಅವರು ನಮ್ಮನ್ನು ಅಗಲಿ ಎಷ್ಟು ಬೇಗ ಒಂದು ವರ್ಷ ಉರುಳಿತು ಗೊತ್ತೆ ಆಗಲಿಲ್ಲ. ಅದಕ್ಕೆ ಸಮಯ ಬಹಳ ಮುಖ್ಯವಾದದ್ದು ಅದನ್ನು ನಾವು ಅರಿತುಕೊಳ್ಳಬೇಕು ಎಂದರು.
ಅವರ ಸಾನಿಧ್ಯವಹಿಸಿದ್ದಾಗ ಶಾಂತಿಯನ್ನು ಹುಡುಕುವ ಪ್ರಮೇಯ ಇರತಿರಲಿಲ್ಲ ಸಹಜವಾಗಿ ಆ ವಾತಾವರಣ ಶಾಂತವಾಗುತ್ತಿತ್ತು. ಅದು ಅಪ್ಪನವರ ವ್ಯಕ್ತಿತ್ವಕ್ಕೆ ಇದ್ದ ಶಕ್ತಿ. ಅವರ ಜೊತೆ ಐದು ನಿಮಿಷ ಮಾತನಾಡಿದರು ಸಾಕು, ನಮ್ಮ ತಲೆಯಲ್ಲಿ ಹೊಸ ಚಿಂತನೆಗಳನ್ನು ಬಿತ್ತುತ್ತಿದ್ದರು. ಅವರ ಜೊತೆಯಲ್ಲಿದ್ದಷ್ಟು ಸಮಯ ನಾನು ಬಹಳ ಆನಂದದಿಂದ ಹೆಮ್ಮೆಯಿಂದ ಕಳೆದಿದ್ದೇನೆ. ವಿಜಯಪುರದ ಜನರನ್ನು ಕಂಡರೆ ನನಗೆ ಸದಾ ಹೊಟ್ಟೆ ಉರಿ. ಏಕೆಂದರೆ ಸದಾ ನೀವು ದೇವರ ಜೊತೆ ಇದ್ದದ್ದೇ ನಿಮ್ಮ ಪುಣ್ಯ. ಅವರು ಎಂದಿಗೂ ನಮ್ಮೊಂದಿಗೆ ಇರಬೇಕು ಎಂಬ ಆಶಯ ನಮ್ಮೆಲ್ಲರದು. ಆದರೆ ಏನು ಮಾಡುವುದು, ಕಾಲವನ್ನು ಯಾರು ತಡೆಯಲು ಸಾಧ್ಯ. ಸಮಯವನ್ನು ಯಾರಿಂದಲೂ ತಡೆಯಲು ಸಾಧ್ಯ ನಾವು ಕಾಲದ ಹಿಂದೆ ಓಡಬೇಕು ಅಷ್ಟೇ ನಮ್ಮ ಹತ್ತಿರ ಇದ್ದ ಅವಕಾಶ. ಸಮಯ ಎನ್ನುವುದು ರಾಮನನ್ನು ಕಾಯಲಿಲ್ಲ, ಕೃಷ್ಣನನ್ನು ಕಾಯಲಿಲ್ಲ ಯಾರನ್ನು ಕಾಯಲಿಲ್ಲ. ಎಷ್ಟೇ ಶ್ರೀಮಂತರಿರಲಿ, ಬಡವರಿರಲಿ ಅದು ನಿಲ್ಲುವುದಿಲ್ಲ. ಅದು ತನ್ನ ಪಾಡಿಗೆ ತಾನು ಸದಾ ಚಲಿಸುತ್ತಲೇ ಇರುತ್ತದೆ. ಎಲ್ಲಿ ಕಾಲದ ಜೊತೆ ನಾವು ಸಮಯ ಪರಿಪಾಲನೆ ಮಾಡುತ್ತೇವೆಯೊ ಎಲ್ಲಿ ಕಾಲದ ಜೊತೆ ನಿರಂತರತೆ ಇರುತ್ತದೆಯೊ ಅಲ್ಲಿ ಖಂಡಿತ ದೇವರಿರುತ್ತಾನೆ. ಅದರಂತೆ ಶ್ರೀ ಸಿದ್ಧೇಶ್ವರ ಅಪ್ಪನವರು ತಮ್ಮ ಜೀವನದೂದ್ದಕ್ಕೂ ಸಮಯವನ್ನು ಪರಿಪಾಲನೆ ಮಾಡಿದಂತವರು ಎಂದರು.
ಶ್ರೀ ಸಿದ್ಧೇಶ್ವರ ಅಪ್ಪಾಜಿಯವರು ತರುಣರೊಂದಿಗೆ ಸಮಾಜವನ್ನು ನಿರ್ಮಿಸುವಲ್ಲಿ ಸದಾ ಮುಂದಿರುತ್ತಿದ್ದರು. ಯುವಕರಲ್ಲಿ ಅವರ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುತ್ತಿದ್ದರು. ಅವರು ಎಲ್ಲಿಯೇ ಹೋಗಲಿ ಪ್ರವಚನ ನೀಡಲಿಕ್ಕೆ ಅಲ್ಲಿದ್ದ ಯುವಕರಲ್ಲಿ ಹೊಸ ಚೈತನ್ಯವನ್ನು ಹುಟ್ಟು ಹಾಕುತ್ತಿದ್ದರು. ಸಮಾಜವನ್ನು ಕಟ್ಟುವಲ್ಲಿ ಯುವಜನತೆಯನ್ನು ಪ್ರೇರೆಪಿಸುತ್ತಿದ್ದರು. ಅಷ್ಟೊಂದು ಮಹಾನ್ ಶಕ್ತಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಹತ್ತಿರ ಇತ್ತು ಎಂದರು.
ಕಾರ್ಯಕ್ರಮದಲ್ಲಿ ನಿಡಸೋಸಿ ಜಗದ್ಗುರು ಶ್ರೀ ದುರುದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಸ್ವಚ್ಛತೆ, ಸಮಯ ಪಾಲನೆ, ಹಾಗೂ ವ್ಯಸನಮುಕ್ತ ಸಮಾಜಕ್ಕೆ ಶ್ರೀ ಸಿದ್ಧೇಶ್ವರ ಅಪ್ಪನವರು ಸದಾ ಪ್ರಾಮುಖ್ಯತೆಯನ್ನು ನೀಡುತ್ತಿದ್ದರು. ಸ್ವಸ್ಥ ಸಮಾಜ ಅಭಿವೃದ್ಧಿಯ ಪಥವನ್ನು ಪ್ರಾರಂಭಿಸುತ್ತದೆ. ನಾವು ನಮ್ಮ ಜೀವನದಲ್ಲಿ ಸಮಯ ಪಾಲನೆ, ಮತ್ತು ಯುವಕರು ಚಟಗಳಿಂದ ದೂರವಿರಬೇಕು ಮತ್ತು ನಮ್ಮ ಪರಿಸರ, ಸಮಾಜವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವ ಮೂಲಕ ಉತ್ತಮ ಸಮಾಜ, ಸದೃಡ ಸಮಾಜದ ನಿರ್ಮಾಣಕ್ಕೆ ಕಾರಣಿಕರ್ತರಾಗಬೇಕು ಎಂದು ಹೇಳಿದರು.
ಬಸವರಾಜ ನಾಟಿಕಾರ ಪ್ರಾರ್ಥನಾ ಗೀತೆ ಹಾಡಿದರು. ಜಂಬುನಾಥ ಕಂಚ್ಯಾಣಿ ಸ್ವಾಗತಿಸಿ, ಪರಿಚಯಿಸಿದರು, ಶರಣಾನಂದ ಮಹಾಸ್ವಾಮೀಜಿ ನಿರೂಪಿಸಿದರು.

