“ಜಾಗತಿಕ ಆಧ್ಯಾತ್ಮಿಕ ಚಿಂತನೆ” ವಿಷಯ ಕುರಿತ ಗೋಷ್ಠಿ ಉದ್ಘಾಟಿಸಿದ ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ ಅಭಿಮತ
ವಿಜಯಪುರ: ಮಾನವ ಕುಲಕ್ಕೆ ಸಿಕ್ಕ ಅತ್ಯಂತ ದೊಡ್ಡ ಕೊಡುಗೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಈ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ನನ್ನ ದೊಡ್ಡ ಸೌಭಾಗ್ಯ ಎಂದು ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ ಹೇಳಿದರು.
ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ “ಜಾಗತಿಕ ಆಧ್ಯಾತ್ಮಿಕ ಚಿಂತನೆ” ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ೩ನೇ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ನಮ್ಮೊಂದಿಗೆ ಇಲ್ಲ ಎಂದು ನಾನು ಹೇಳುವುದಿಲ್ಲ. ಇಂದು ಅವರು ನಮ್ಮ-ನಿಮ್ಮ ಮನದಲ್ಲಿ ಇದ್ದದ್ದಕ್ಕಾಗಿಯೇ ಇಂದು ನಾವೆಲ್ಲರೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಸೇರಿದ್ದೇವೆ. ಸ್ವಾಮೀಜಿಯವರು ಸದಾ ಶಾಂತಿಗೆ ಹೆಚ್ಚು ಒತ್ತನ್ನು ಕೊಟ್ಟಂತವರು. ಆದರೆ ನಾವು ಇಂದು ದ್ವೇಷದ ಸಮಾಜದಲ್ಲಿ ಬದುಕುತ್ತಿದ್ದೇವೆ. ನಮ್ಮ ಗಾಳಿಯಲ್ಲಿ, ಉಸಿರಿನಲ್ಲಿಯೇ ದ್ವೇಷ ತುಂಬಿದೆ. ಇಂತಹ ಈಗಿನ ಸಮಾಜದಲ್ಲಿ ನಾವು ಶ್ರೀ ಸಿದ್ದೇಶ್ವರ ಅಪ್ಪನವರ ಸಂದೇಶಗಳನ್ನು ಮಾತುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಿದ್ದೇ ಆದಲ್ಲಿ ನಾವು ಸನ್ಮಾರ್ಗದತ್ತ ಸಾಗಲು ಸಾಧ್ಯ. ಮತ್ತು ಶಾಂತಿಯುತ ಬದುಕು ನಡೆಸಲು ಸಾಧ್ಯ. ಅಪ್ಪನವರು ಯಾವಾಗಲೂ ಒಂದು ಮಾತು ಹೇಳುತ್ತಿದ್ದರು, ನಾವು ಯಾವಾಗಲೂ ಅಪೇಕ್ಷೆ ಪಡದೆ ಬದುಕಬೇಕು. ಸಣ್ಣ-ಪುಟ್ಟ ವಿಷಯಗಳಿಗೆ ಜಗಳವಾಡುವುದನ್ನು ಬಿಟ್ಟು ನಿಸ್ವಾರ್ಥದಿಂದ ಬದುಕಬೇಕು, ಅಂದಾಗ ನಮ್ಮ ಬದುಕು ಸುಂದರವಾಗಲು ಸಾಧ್ಯ ಎನ್ನುತ್ತಿದ್ದರು. ಅವರು ಹೇಳಿದ ಮಾತುಗಳನ್ನು ನಾವು ಪಾಲಿಸಿದ್ದೇ ಆದಲ್ಲಿ ಉತ್ತಮ ಬದುಕು, ಸದೃಢ ಸಮಾಜ ಕಟ್ಟಲು ಸಾಧ್ಯ ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಮಾತನಾಡಿದರು.
ತಮ್ಮ ಅನುಭಾವವನ್ನು ಹಂಚಿಕೊಂಡ ಗದಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಮಾತನಾಡಿದರು.
ಬೀದರ ಚಿದಂಬರ ಆಶ್ರಮದ ಶಿವಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು.
ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.
ಶ್ರೀಮತಿ ಅಶ್ವಿನಿ ಹಿರೇಮಠ ಪ್ರಾರ್ಥಿಸಿದರು, ವಿಜಯಪುರ ಜಿಲ್ಲೆಯ ಅಖಿಲ ಭಾರತೀಯ ವೀರಶೈವ ಮಹಾಸಭಾ ಅಧ್ಯಕ್ಷ ವ್ಹಿ.ಸಿ. ನಾಗಠಾಣ ಸ್ವಾಗತಿಸಿ, ಪರಿಚಯಿಸಿದರು, ಶ್ರದ್ಧಾನಂದ ಸ್ವಾಮೀಜಿ ನಿರೂಪಿಸಿದರು.

