ಮಕ್ಕಳ ಹಿರಿಯ ಸಾಹಿತಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಹ.ಮ.ಪೂಜಾರ ಅಭಿಮತ
ವಿಜಯಪುರ: ಸರಕಾರಗಳು ಬದಲಾದಂತೆ ಪಠ್ಯಪುಸ್ತಕ ನೀತಿ ಬದಲಾಗುತ್ತಿದೆ. ಒಂದು ಸರಕಾರ ಒಬ್ಬನನ್ನು ಕೊಲೆಗಡುಕ ಎಂದು ಬಿಂಬಿಸಿದರೆ ಇನ್ನೊಂದು ಸರಕಾರ ಅವರೊಬ್ಬ ಮಹಾನ್ ದೇಶಪ್ರೇಮಿ ಎಂದು ಹೇಳುತ್ತದೆ. ಇದರಿಂದ ಮಕ್ಕಳು ದ್ವಂದ್ವದಲ್ಲಿ ಸಿಲುಕುತ್ತಿದ್ದಾರೆ. ಕಾರಣ ಪಠ್ಯಪುಸ್ತಕ ಸಲಹಾ ಸಮಿತಿ ಸ್ವಾಯತ್ವ ಸಂಸ್ಥೆಗೆ ವಹಿಸಿದಾಗ ಈ ಗೊಂದಲಗಳಿಗೆ ಪರಿಹಾರ ಸಿಗಲು ಸಾಧ್ಯ ಎಂದು ಮಕ್ಕಳ ಸಾಹಿತಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಹ.ಮ.ಪೂಜಾರ ಅಭಿಪ್ರಾಯಪಟ್ಟರು.
ಸಿಂದಗಿಯ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಡಿ.೨೩ರಂದು ಸ್ಥಳಿಯ ’ನಮ್ಮ ಗೆಳೆಯರ ಬಳಗ’ ಹಮ್ಮಿಕೊಂಡ ಗುರು ಸನ್ಮಾನ ಹಾಗು ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೊಂದು ಭಾವೈಕ್ಯತೆಯ ವಿಶಿಷ್ಠ ಸಮ್ಮೇಳನವಾಗಿದ್ದು, ಇಲ್ಲಿ ಬೋಧಕರೊಂದಿಗೆ ಪೂರಕ ಕಾರ್ಯಗೈದ ಭೋಧಕೇತರ ಸಿಬ್ಬಂದಿಯನ್ನೂ ಗೌರವಿಸಿದ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯ ಎಂದರು.
ಜನ್ಮ ನೀಡಿದ ತಾಯಿ, ಬದುಕು ರೂಪಿಸಿದ ಶಿಕ್ಷಕ ಹಾಗೂ ಇವರಿಗೆ ಸೇತುವೆಯಾದ ತಂದೆ ಈ ಮೂವರನ್ನೂ ಮಕ್ಕಳು ಗೌರವಿಸಿದರೆ ಜೀವನ ಪಾವನ ಸಾಧ್ಯ. ಈ ಭಾಗದ ಹಲಸಂಗಿ ಗೆಳೆಯರ ಬಳಗದಂತೆ ಶಿಷ್ಯರ ಈ ಗೆಳೆಯರ ಬಳಗವೂ ಸಹ ತನ್ನ ರಚನಾತ್ಮಕ ಕೆಲಸಗಳ ಮೂಲಕ ಪ್ರಸಿದ್ಧಿ ಪಡೆಯಲಿ ಎಂದು ಹಾರೈಸಿದರು.
ಎಚ್.ಟಿ. ಕುಲಕರ್ಣಿ ಸರ್ ಮಾತನಾಡಿ, ಶಿಷ್ಯರ ಪ್ರೀತಿಯಲ್ಲಿ ಅದ್ಭುತ ಶಕ್ತಿ ಇದೆ. ಆ ಶಕ್ತಿಯೇ ನನ್ನನ್ನು ಕಳೆದ ೪೦ವರ್ಷಗಳಿಂದ ಮಧುಮೇಹ ರೋಗದಿಂದ ಕಾಪಾಡಿದೆ ಎಂದು ಭಾವುಕರಾಗಿ ನುಡಿದರು.
ಸಾನಿಧ್ಯವಹಿಸಿದ ಶಿರುಂಜಿ ಜ್ಞಾನಯೋಗಾಶ್ರಮದ ಬಸವ ಸಮರ್ಥ ಸ್ವಾಮೀಜಿ ಮಾತನಾಡಿದರು.
ಶಾಸಕ ಅಶೋಕ ಮನಗೂಳಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸನ್ಮಾನಕ್ಕೆ ಪ್ರತಿಯಾಗಿ ಶಿಕ್ಷಕ ಎಸ್.ಕೆ.ಗುಗ್ಗರಿ ಮಾತನಾಡಿದರು.
ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಪ್ರಕಾಶ ಚೌಧರಿ, ಸಮಿತಾ ಬೊಮ್ಮಣ್ಣಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಬರಹಗಾರ ರಂಗನಾಥ ಥೋರ್ಪೆ ಪ್ರಾಸ್ತಾವಿಕ ಮಾತನಾಡಿದರು. ನ್ಯಾಯವಾದಿ ಭಗವಂತ ರೇವೂರ ಸ್ವಾಗತಿಸಿದರು. ಶಿಕ್ಷಕಿಯರಾದ ಸುಮಂಗಲಾ ಕೋಳೂರ, ಗಿರಿಜಾ ಸೊನ್ನದ ನಿರೂಪಿಸಿದರು. ಗೀತಾ ಮಠ ಪ್ರಾರ್ಥಿಸಿದರು. ಪ್ರಥಮ ದರ್ಜೆ ಗುತ್ತಿಗೆದಾರ ಅರವಿಂದ ಹೂಗಾರ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ವೇದಿಕೆ ಮೇಲಿನ ಗಣ್ಯರು ಪುಷ್ಪಾರ್ಚನೆ ಮಾಡಿ ಗುರುನಮನ ಸಲ್ಲಿಸಿದರು.

