ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ | ಶಾಸಕ ಯಶವಂತ್ರಾಯಗೌಡ ಪಾಟೀಲ ಮಾಹಿತಿ
ಇಂಡಿ: ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿರುವ ಇಂಡಿ ತಾಲೂಕಿಗೆ ನೀರಾವರಿ ಯೋಜನೆಗಳ ಅವಶ್ಯವಿದ್ದು ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಮೂಲಕ ಇಂಡಿ ಹಾಗೂ ನಾಗಠಾಣ ಕ್ಷೇತ್ರಗಳ ೨೮ ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಯಾಗಲಿದೆ ಎಂದು ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.
ಸೋಮವಾರ ತಾಲೂಕಿನ ಹೋರ್ತಿ ಗ್ರಾಮದಲ್ಲಿ ಕೃಷ್ಣಾ ಭಾಗ್ಯ ಜಲನಿಗಮ ನಿಯಮಿತ ಹೋರ್ತಿ-ರೇವಣಸಿದ್ದೇಶ್ವರ ಏತನೀರಾವರಿ ಯೋಜನೆಯ ಕಾರ್ಯನಿರ್ವಹಿಸುವ ಕಛೇರಿ ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು ಸಾವಳಸಂಗ ಗುಡ್ಡಕ್ಕೆ ಭೇಟಿ ನೀಡಿದಾಗ ಈ ಎತ್ತರದ ಪ್ರದೇಶಕ್ಕೆ ನೀರು ಹಾಯಿಸಬೇಕು ಇದರಿಂದ ಈ ಭಾಗದ ರೈತರಿಗೆ ಒಳಿತಾಗುತ್ತದೆ ಎಂಬ ಆಶಾಭಾವನೆ ಹೊಂದಿದ್ದರು. ಅವರ ಆಶಯದಂತೆ ರೇವಣಸಿಧ್ಧೇಶ್ವರ ಏತ ನೀರಾವರಿ ಮೂಲಕ ನೀರು ಹರಿಸಲಾಗುತ್ತದೆ ಎಂದರು.
ಇಂಡಿ ಕ್ಷೇತ್ರದ ೩೨ ಹಳ್ಳಿಗಳ ೨೧೫೦೦ ಹೆಕ್ಟೇರ್, ನಾಗಠಾಣ ಕ್ಷೇತ್ರದ ೧೦ ಹಳ್ಳಿಗಳ ೬೫೦೦ ಹೆಕ್ಟೇರ್ ಪ್ರದೇಶ ಈ ಯೋಜನೆಯಿಂದ ನೀರಾವರಿಯಾಗಲಿದೆ ಎಂದರು
ಇಲ್ಲಿ ಕೆಬಿಜೆಎನ್ಎಲ್ ಕಚೇರಿ ತೆರೆಯುವ ಉದ್ದೇಶ ನೀರಾವರಿ ಯಾವ ಹಂತದಲ್ಲಿದೆ? ಯಾವ ವಿಧದಲ್ಲಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ರೈತಾಪಿ ವರ್ಗ ತಿಳಿದುಕೊಳ್ಳಲು ಕಛೇರಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಮುರಾರ್ಜಿ ವಸತಿ ಶಾಲೆಯ ಸಮೀಪ ೨ ಎಕರೆ ಸರಕಾರದ ಭೂಮಿ ಇರುವದರಿಂದ ಕೆಬಿಜೆಎನ್ಎಲ್ ಕಛೇರಿ ಹಾಗೂ ಹೆಲಿಪ್ಯಾಡ್ ನಿರ್ಮಿಸಲಾಗುವುದು ಎಂದರು.
ಆಲಮಟ್ಟಿ ಹಿನ್ನೀರಿನ ಕೃಷ್ಣಾ ನದಿಯ ಮೂಲಕ ಜಲಧಾರೆ ಯೋಜನೆಯಿಂದ ಕುಡಿಯುವ ನೀರಿನ ಶಾಶ್ವತ ಪರಿಹಾರ ಆಗಲಿದೆ ಎಂದು ತಿಳಿಸಿದರು.
ವಿಧಾನ ಸಭೆಯ ಅಧಿವೇಶನದಲ್ಲಿ ಇಂಡಿ ಜಿಲ್ಲೆಯಾಗಿಸಬೇಕು ಎಂದು ನಾನು ಮುಖ್ಯ ಮಂತ್ರಿಗಳಿಗೆ ಬೇಡಿಕೆ ಇಟ್ಟಿರುವೆ ಈ ನನ್ನ ಬೇಡಿಕೆಗೆ ಮುಖ್ಯ ಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
೩೭೧ ಜೆ, ಮಾಡುವಾಗ ಜಿಲ್ಲಾ ರಾಜಕಾರಣಿಗಳು ಇಚ್ಛಾಶಕ್ತಿಯಿಂದ ಧ್ವನಿಗೂಡಿಸಿದ್ದರೆ ವಿಜಯಪುರ ಜಿಲ್ಲಾ ಕೂಡಾ ಹೈದರಾಬಾದ ಕರ್ನಾಟಕದಲ್ಲಿ ಸೇರಿ ನಮ್ಮ ಪೀಳಿಗೆಗೆ ಉದ್ಯೋಗ, ಶಿಕ್ಷಣ, ಆರ್ಥಿಕ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತಿತ್ತು ರಾಜಕಾರಣಿಗಳ ಇಛ್ಛಾಶಕ್ತಿಯ ಕೊರತೆಯಿಂದ ನಾವು ಕಲ್ಯಾಣ ಕರ್ನಾಟಕಕ್ಕೆ ಸೇರಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿದರು.
ಕಾಂಗ್ರೇಸ್ ಮುಖಂಡ ಎಂ.ಆರ್ ಪಾಟೀಲ (ಬಳ್ಳೊಳ್ಳಿ) ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಆಲಮಟ್ಟಿಯ ಕೆಬಿಜೆಎನ್ಎಲ್ ಮುಖ್ಯ ಎಂಜನೀಯರ್ ಸಿ.ಹೆಚ್. ಶ್ರೀನಿವಾಸ, ಅಧೀಕ್ಷಕ ಇಂಜನೀಯರ್ ಗೋವಿಂದ ರಾಠೋಡ, ಕಾರ್ಯಪಾಲಕ ಇಂಜನೀಯರ್ ಸಂಗಮೇಶ ಮುಂಡಾಸ, ಸಹಾಯಕ ಇಂಜನೀಯರ್ ಹಣಮಂತಪ್ಪ ಗುಡಗುಂಟ, ಮನೋಜಕುಮಾರ ಗಡಬಳ್ಳಿ, ಸೇರಿದಂತೆ ಗ್ರಾ.ಪಂ ಅಧ್ಯಕ್ಷ ಜಯಶ್ರೀ ಬೋಸಗಿ, ಉಪಾಧ್ಯಕ್ಷೆ ಚಂದ್ರಕಲಾ ಮಸಳಿಕೇರಿ, ಎಚ್.ಎನ್ ಶ್ರೀನಿವಾಸ ಮಹಾದೇವ ಪೂಜಾರಿ, ಬಿ.ಬಿ ಗುಡ್ಡದ, ಮಲ್ಲು ಬೋಸಗಿ, ಶ್ರೀಮಂತ ಇಂಡಿ, ಸಂಬಾಜಿ ಮಿಸಾಳೆ, ಸುರೇಶಗೌಡ, ಶೇಖರ ನಾಯಕ, ಎಸ್.ಆರ್ ರುದ್ರವಾಡಿ, ಸದಾಶಿವ ಪ್ಯಾಟಿ, ದಯಾನಂದ ಮಠ ಸೇರಿದಂತೆ ಅನೇಕರಿದ್ದರು.
ಜಿ.ಆರ್ ಭೋಸಗಿ ನಿರೂಪಿಸಿ, ಪಿ. ಬಮ್ಮಹಳ್ಳಿ ವಂದಿಸಿದರು.

