ಕೆಸರಟ್ಟಿ- ಅಂಬಳನೂರ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗೆ ಭೂಮಿ ಪೂಜೆ
ತಾಳಿಕೋಟಿ: ಜಲಜೀವನ ಮಿಷನ್( ಜೆಜೆಎಂ) ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾಗಿದೆ. ನಳ ಜೋಡಣೆ ಮೂಲಕ ಪ್ರತಿ ಮನೆಗೂ ಸಿದ್ಧ ಕುಡಿಯುವ ನೀರು ಪೂರೈಸುವುದು ಇದರ ಉದ್ದೇಶವಾಗಿದೆ. ಇದು ದೀರ್ಘಾವಧಿಯ ಯೋಜನೆ ಆಗಿದ್ದು ಕಾಮಗಾರಿಯು ಗುಣಮಟ್ಟದ್ದಾಗಿರುವಂತೆ ಗುತ್ತಿಗೆದಾರ ಹಾಗೂ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಹೇಳಿದರು.
ಮತಕ್ಷೇತ್ರದ ಕೆಸರಟ್ಟಿ ಗ್ರಾಮದಲ್ಲಿ ರೂ. 106 ಲಕ್ಷ ಹಾಗೂ ಅಂಬಳನೂರ ಗ್ರಾಮದಲ್ಲಿ ರೂ. 66 ಲಕ್ಷ ಮೊತ್ತದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸಿಂದಗಿ 2022-23 ನೇ ಸಾಲಿನ ಜೆಜೆಎಂ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಾಮಗಾರಿ ನಡೆಯುವಾಗ ಗುತ್ತಿಗೆದಾರ ಹಾಗೂ ಇಲಾಖೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡಿಸಬೇಕು ಎಷ್ಟು ಗ್ರಾಮಗಳಲ್ಲಿ ಕಳಪೆ ಕಾಮಗಾರಿಯಿಂದಾಗಿ ಮತ್ತೊಮ್ಮೆ ಕೆಲಸ ಮಾಡಿಸುವ ಅನಿವಾರ್ಯತೆ ಬಂದಿದೆ, ಹೀಗಾಗಬಾರದು. ಇದು ದೀರ್ಘಾವಧಿಯ ಯೋಜನೆಯಾಗಿರುವುದರಿಂದ ಗುಣಮಟ್ಟ ಕೆಡದಂತೆ ನೋಡಿಕೊಳ್ಳಬೇಕು. ಇದಕ್ಕೆ ಗ್ರಾಮದ ಜನರು ಸಹಕರಿಸಬೇಕು. ಈಗ ಗ್ರಾಮದಲ್ಲಿ ಕುಡಿಯುವ ನೀರಿಗೆ ತುಂಬಾ ತೊಂದರೆ ಇದೆ. ಗುತ್ತಿಗೆದಾರರು ಈ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಬೇಕೆಂದು ಸೂಚಿಸುತ್ತೇನೆ ಎಂದ ಅವರು, ನನ್ನ ಮತ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವುದು ನನ್ನ ಕೆಲಸದ ಪ್ರಥಮ ಆದ್ಯತೆಯಾಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂದರು.
ಈ ಸಮಯದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಹುಸೇನಸಾಬ ಸೊಲಾಪೂರ. ಸದಸ್ಯರಾದ ಬಾಬು ಚೌಹಾಣ.ಅಶೋಕ ಬಡಿಗೇರ. ಗಣ್ಯರಾದ ಬಸನಗೌಡ. ರಾಮು ಗಾಣೂರ. ಅಲಿ ಮಕಾನದಾರ. ಬಸನಗೌಡ. ಎಂ. ಸೋಲಾಪೂರ. ಮಡಿವಾಳಪ್ಪ ನಾಯ್ಕೋಡಿ. ಗುತ್ತಿಗೆದಾರ ಬಿಎಸ್ ಪಾಟೀಲ್ ಅಭಿಯಂತರ ಹಿಕ್ಕನಗುತ್ತಿ ಲಾಲ್ ಸಾಬ್ ನಾಯ್ಕೋಡಿ ಇದ್ದರು.

