ಮುದ್ದೇಬಿಹಾಳ: ರೈತ ಸಮುದಾಯವನ್ನು ಅತಂತ್ರತೆಗೆ ದೂಡಿದ ಪ್ರಸಕ್ತ ಕೃಷಿ ಬಿಕ್ಕಟ್ಟುಗಳಿಗೆ ಪರಿಹಾರ ಒದಗಿಸಬಲ್ಲ ಮಾರ್ಗಗಳನ್ನು ಗುರುತಿಸಿ ಅವುಗಳನ್ನು ಮೂಲೋತ್ಪಾದನೆ ಮಾಡಿ ರೈತರ ಬದುಕಲ್ಲಿ ನೆಮ್ಮದಿ ಮೂಡಿಸಬೇಕಿದ್ದಲ್ಲಿ ಕೃಷಿ ಸಂರಕ್ಷಿಸುವ ಜವಾಬ್ದಾರಿಯನ್ನು ಅಕ್ಷರಸ್ಥ ಯುವಜನಾಂಗ ಹೊರಬೇಕು ಎಂದು ಪರಪ್ಪ ಸಾವಯವ ಕೃಷಿ ವಿದ್ಯಾಪೀಠದ ಅಧ್ಯಕ್ಷ ಅರವಿಂದ ಕೊಪ್ಪ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠ, ಬಸರಕೋಡ, ದಾಸೋಹಿ ರೈತ ಉತ್ಪಾದಕ ಕಂಪನಿ, ತಾಲೂಕಾ ರೈತ ಆಸಕ್ತಿ ಗುಂಪುಗಳ ಮಹಾಮಂಡಳ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ರೈತ ದಿನಾಚರಣೆ ಮತ್ತು ಸಾಧಕ ರೈತರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ಮದಲ್ಲಿ ಧರ್ಮವನ್ನು ಬೆಸೆದು ತನು, ಮನ, ಭಾವ, ನುಡಿ, ನಡೆಗಳಲ್ಲಿ ಪರಿಶುದ್ಧತೆಯನ್ನು ಅಳವಡಿಸಿಕೊಂಡು ತ್ಯಾಗಮಯ ಜೀವನದ ಬಹು ದೊಡ್ಡ ಕುರುಹಾಗಿ ಕಾಣಿಸಿಕೊಳ್ಳುವ ರೈತನಿಗೆ ಸಾಮಾಜಿಕ ಪ್ರಾಶಸ್ತ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಇಡೀ ಸಮಾಜ ಒಂದಾಗಿ ಕೈಜೋಡಿಸಬೇಕಿದೆ ಎಂದರು.
ವಿಶ್ರಾಂತ ಡಿ.ವೈ.ಎಸ್ಪಿ ಎಸ್.ಎಸ್.ಹುಲ್ಲೂರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ವಿಶ್ರಾಂತ ಕಾರ್ಯಪಾಲಕ ಅಭಿಯಂತರ ಬಸನಗೌಡ ಪಾಟೀಲ ಮಾತನಾಡಿ ಎಲ್ಲ ರೀತಿಯಿಂದಲೂ ಶೋಷಿತನಾಗಿರುವ ರೈತನನ್ನು ಕತ್ತಲಲ್ಲಿಟ್ಟು ನಡೆಸುವ ಅಭಿವೃದ್ಧಿ ಪೂರಕ ಯಾವ ಕೃಷಿ ಕಾರ್ಯವೂ ಪ್ರಯೋಜನಕ್ಕೆ ಬರಲಾರವು. ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಕೃಷಿಗೆ ಪ್ರಥಮ ಮನ್ನಣೆ ನೀಡುವ ಬಗ್ಗೆ ನಮ್ಮನ್ನಾಳುವವರು ಗಟ್ಟಿ ನಿರ್ಧಾರಕ್ಕೆ ಬರಬೇಕಿದೆ ಎಂದರು.
ಸನ್ಮಾನ ಸ್ವೀಕರಿಸಿದ ಬೀಳಗಿಯ ಪ್ರಗತಿಪರ ರೈತ ಪ್ರವೀಣ ಮುಧೋಳ ಮಾತನಾಡಿದರು.
ಹಾರ್ವರ್ಡ್ ಸೈನ್ಸ ಕಾಲೇಜಿನ ಅಧ್ಯಕ್ಷ ಎಸ್ ಎಂ ನೆರಬೆಂಚಿ, ಪ್ರೆಟ್ಟಿಲ್ ವೈನ್ಸ ಪ್ರೈವೇಟ್ ಲಿಮಿಟೆಡಿನ ಬೆಳೆ ವಿಸ್ತರಣೆ ವ್ಯವಸ್ಥಾಪಕ ಆಕಾಶ ಮೋಳೆ, ಸರ್ಕಾರಿ ಕಾಲೇಜಿನ ಉಪನ್ಯಾಸಕ ಮಾಳಗೊಂಡ ವೇದಿಕೆಯ ಮೇಲಿದ್ದರು. ಉಪನ್ಯಾಸಕ ಐ.ಬಿ ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ನ್ಯಾಯವಾದಿ ಬಸವರಾಜ ಬಡಿಗೇರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

