ವಿಜಯಪುರ: ನಗರದಲ್ಲಿ ನಾಳೆ ದಿ.24 ರವಿವಾರ ನಡೆಯಲಿರುವ ವೃಕ್ಷೊಥಾನ್ ಹೆರಿಟೇಜ್ ರನ್-2023ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಗರಾದ್ಯಂತ ಓಟಗಾರರು ಸಾಗುವ ಮಾರ್ಗಗಳಲ್ಲಿ ರವಿವಾರ ಬೆಳಿಗ್ಗೆ 6 ಗಂಟೆಯಿಂದಲೆ ನಾನಾ ಸಾಂಸ್ಕೃತಿಕ ಕಲಾ ತಂಡಗಳಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
ಕರ್ನಾಟಕವೂ ಅಷ್ಟೇ ಅಲ್ಲ, ನಾನಾ ರಾಜ್ಯಗಳು ಹಾಗೂ ವಿದೇಶಗಳಿಂದ ಹೆಸರು ನೋಂದಾಯಿಸಿರುವ ಕ್ರೀಡಾಪಟುಗಳು ಗುಮ್ಮಟ ನಗರಿಗೆ ಆಗಮಿಸಿದ್ದು, ಇಂದು ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಹೆಸರು ನೋಂದಾಯಿಸಿದ ಓಟಗಾರರಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಬ್ ಮತ್ತು ಟಿ ಶರ್ಟ್ ಗಳನ್ನು ವಿತರಿಸಲಾಯಿತು.
ಈ ಮಧ್ಯೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಐರಾನ್ಮ್ಯಾನ್, ಹಾಫ್ ಐರಾನ್ಮ್ಯಾನ್, ಅಲ್ಟ್ರಾ ಮ್ಯಾರಾಥಾನ್, ಪುಲ್ ಮ್ಯಾರಾಥಾನ್ ಮತ್ತು ಹಾಫ್ ಮ್ಯಾರಾಥಾನ್ ಗಳಲ್ಲಿ ಪಾಲ್ಗೊಂಡಿರುವವರನ್ನು ಸ್ವಾಗತಿಸಲಾಯಿತು.
ನಂತರ ನಡೆದ ನಾನಾ ಗೋಷ್ಠಿಗಳಲ್ಲಿ ಪ್ರಶಾಂತ ಹಿಪ್ಪರಗಿ, ಪ್ರಮೋದ ದೇಶಪಾಂಡೆ, ಕಿರಣ ಬೇಟಗೇರಿ, ಡಾ.ಶಿವಪುತ್ರ ಯಲಗೊಂಡ, ನಿರಂಜನ ಪಾಟೀಲ, ಹರಿನಾಥ, ಡಾ.ಉದಯಕುಮಾರ ಜಾಧವ, ಬರಿಗಾಲ ಓಟಗಾರ್ತಿ ಎಂದೇ ಖ್ಯಾತರಾದ ಸುಲತಾ ಕಾಮತ, ಸೀರೆಯುಟ್ಟ ಬರಿಗಾಲಲ್ಲಿ ಓಡುವ ಖ್ಯಾತಿಯ ಪ್ರೀತಿ ಮನಿಷ, ರಾಜೇಂದ್ರ ಕೌರ, ಶೋಭಾ ನರೇಂದ್ರನ್ ಮುಂತಾದವರು ಜಿಲ್ಲೆಯ ಯುವಕ-ಯುವತಿರೊಂದಿಗೆ ಸಂವಾದ ನಡೆಸಿದರು. ಅಲ್ಲದೇ, ಓಟದಲ್ಲಿ ಪಾಲ್ಗೊಳ್ಳುವದರಿಂದ ದೈಹಿಕ ಮತ್ತು ಮಾನಸಿಕವಾಗಿ ಸಿಗುವ ಲಾಭಗಳು, ಆರೋಗ್ಯವನ್ನು ಸುಸ್ಥಿರವಾಗಿಟ್ಟುಕೊಳ್ಳುವ ಕುರಿತು ಮಾಹಿತಿ ಹಂಚಿಕೊಂಡರು. ಇದೇ ವೇಳೆ ಝುಂಬಾ ನೃತ್ಯ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದವು.
ಈ ಮಧ್ಯೆ ರವಿವಾರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ 20ಅಡಿ ಅಗಲ, 40 ಅಡಿ ಉದ್ದ ಹಾಗೂ 4 ಅಡಿ ಎತ್ತರವಿರುವ ಹಾಗೂ 20 ಜನ ಗಣ್ಯರು ಕುಳಿತುಕೊಳ್ಳುವ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಅಲ್ಲದೇ, ವೇದಿಕೆ ಹಿಂಭಾಗದಲ್ಲಿ ಬೃಹತ್ ಎಲ್.ಇ.ಡಿ ಪರದೆ ಅಳವಡಿಸಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

