ವಿಜಯಪುರ: ಜಿಲ್ಲೆಯು ಐತಿಹಾಸಿಕ ಸ್ಮಾರಕಗಳಿಗೆ ಹೆಸರುವಾಸಿಯಾಗಿದ್ದು, ಇದೊಂದು ಪ್ರವಾಸಿ ತಾಣವಾಗಿದೆ. ದೇಶ-ವಿದೇಶದ ಪ್ರವಾಸಿಗರು ಆಗಮಿಸುತ್ತಿದ್ದು, ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಲೋಕಾಯುಕ್ತ ಅಧಿಕ್ಷಕ ಹನಮಂತರಾಯ ಅವರು ಹೇಳಿದರು.
ಬುಧವಾರ ನಗರದ ಸೆಟ್ಲೈಟ್ ಬಸ್ ನಿಲ್ದಾಣ, ಶಿವಾಜಿ ವೃತ್ತ, ಕೇಂದ್ರ ಬಸ್ ನಿಲ್ದಾಣ, ಕೋರ್ಟ್, ಗಗನ ಮಹಲ್ ಹಾಗೂ ಎ.ಪಿ.ಎಮ್.ಸಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ವೀಕ್ಷಿಸಿದರು.
ಸೆಟ್ಲೈಟ್ ಬಸ್ ನಿಲ್ದಾಣ ಹಾಗೂ ಕೇಂದ್ರ ಬಸ್ ನಿಲ್ದಾಣಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಗೋಡೆ ಆವರಣ ಸುತ್ತಲೂ ವಿವಿಧ ಗಿಡ ಮರಗಳ ಬೆಳೆಸಬೇಕು. ಹಸಿರು ಹುಲ್ಲು ಬೆಳೆಸುವ ಮೂಲಕ ಬಸ್ ನಿಲ್ದಾಣವನ್ನು ಸುಂದರವಾಗಿಸುವುದರೊಂದಿಗೆ ಸ್ವಚ್ಚತೆ, ಕಸ-ತ್ಯಾಜ್ಯವನ್ನು ದಿನದಲ್ಲಿ ಎರಡು ಸರತಿಗಳಲ್ಲಿ ವಿಲೇವಾರಿಗೆ ಕ್ರಮ ವಹಿಸಬೇಕು. ನಿಲ್ದಾಣದ ಆವರಣದಲ್ಲಿರುವ ಐತಿಹಾಸಿಕ ಬಾವಿಯನ್ನು ಸ್ವಚ್ಚಗೊಳಿಸಿ, ನೀರನ್ನು ಬಳಸಿಕೊಳ್ಳುವಂತೆ, ಬಸ್ ನಿಲ್ದಾಣದ ಸ್ಥಳಗಳಲ್ಲಿ ಸಿ.ಸಿ. ಟಿವಿ ಅಳವಡಿಸಬೇಕು ಎಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಜಿಲ್ಲೆಯ ಬೇರೆ-ಬೇರೆ ಗ್ರಾಮಗಳಿಂದ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ನಗರಕ್ಕೆ ಆಗಮಿಸುತ್ತಾರೆ. ಶಾಲಾ–ಕಾಲೇಜಿನ ನಿಗದಿತ ಸಮಯಕ್ಕನುಗುಣವಾಗಿ ವಿದ್ಯಾರ್ಥಿಗಳು ತಲುಪುವಂತೆ ಹೆಚ್ಚುವರಿ ಬಸ್ ಸಂಚರಿಸುವಂತೆ ನೋಡಿಕೊಳ್ಳಬೇಕು. ಶಿವಾಜಿ ವೃತ್ತದಲ್ಲಿರುವ ಕೋಟೆ ಗೋಡೆಗೆ ಹೊಂದಿಕೊಂಡಂತೆ ಕಂದಕದ ಹತ್ತರ್ದ ಎತ್ತರದ ಗೋಡೆ ನಿರ್ಮಿಸಿ,ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಸೂಚಿಸಿದರು. ಲಾಲ್ ಬಹದ್ದೂರ ಶಾಸ್ತ್ರೀ ಮಾರುಕಟ್ಟೆಗೆ ಭೇಟಿ ನೀಡಿ, ಸ್ವಚ್ಚತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಪೌರ ಕಾರ್ಮಿಕರನ್ನು ಅಭಿನಂದಿಸಿದರು. ಸ್ವಚ್ಚತೆ ಜೊತೆಗೆ ತಮ್ಮ ಆರೋಗ್ಯ ಕುರಿತು ಹೆಚ್ಚು ಗಮನ ಹರಿಸುವಂತೆ ಅವರಿಗೆ ತಿಳಿಸಿದರು. ಗಗನ ಮಹಲ್, ಕೋರ್ಟ್ ಆವರಣ ಹಾಗೂ ಎ.ಪಿ.ಎಂ.ಸಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಮುಂಬರುವ ದಿನಗಳಲ್ಲಿ ಸ್ವಚ್ಚ ಹಾಗೂ ಸುಂದರ ನಗರವನ್ನಾಗಿಸಲು ಅಗತ್ಯ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಬದ್ರುದ್ದೀನ ಸೌದಾಗರ, ವಿಜಯಪುರ ತಹಶೀಲ್ದಾರ್ ಕವಿತಾ, ಲೋಕಾಯುಕ್ತ ಡಿ.ವೈ.ಎಸ್.ಪಿ ಸುರೇಶ ರೆಡ್ಡಿ, ಈಶಾನ್ಯ ಕರ್ನಾಟಕ ಸಾರಿಗೆ ವಿಜಯಪುರ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಜೆ.ಎಮ್.ಫಯಾಜ್, ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್ ಆನಂದ ಟಕ್ಕನ್ನವರ ಹಾಗೂ ಆನಂದ ಡೋಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

