ಪಿಎಲ್ಡಿ ಬ್ಯಾಂಕಿನ ಅವ್ಯವಹಾರ ಮತ್ತು ಬ್ಯಾಂಕಿನ ಅಧ್ಯಕ್ಷ, ಹಿರಿಯ ಅಧಿಕಾರಿಗಳ ದುರ್ನಡತೆಗೆ ಖಂಡನೆ
ಮುದ್ದೇಬಿಹಾಳ: ಇಲ್ಲಿನ ಬಸ್ ನಿಲ್ದಾಣದ ಎದುರಿಗಿನ ಪಿಎಲ್ಡಿ ಬ್ಯಾಂಕ್ ನಲ್ಲಿ ಅವ್ಯವಹಾರವಾಗಿದೆ ಮತ್ತು ಬ್ಯಾಂಕಿನ ಅಧ್ಯಕ್ಷ ಮತ್ತು ಹಿರಿಯ ಅಧಿಕಾರಿಗಳ ದುರ್ನಡತೆ ಎಂದು ಆರೋಪಿಸಿ ವಿವಿಧ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಧರಣಿ ಸತ್ಯಾಗ್ರಹ ಆರಂಭಿಸಿದರು.
ಈ ವೇಳೆ ಮುಖಂಡ ಹರೀಶ ನಾಟೆಕಾರ ಮಾತನಾಡಿ, ರೈತರಿಗೆ ಸಹಾಯವಾಗಬೇಕಾದ ಪಿಎಲ್ಡಿ ಬ್ಯಾಂಕ್ ನಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ. ಪ್ರತೀ ವರ್ಷ ನಬಾರ್ಡ್ ಬ್ಯಾಂಕ್ ನಿಂದ ಬರುವ ೨ಕೋಟಿ ರೂ ಅನುದಾನವನ್ನು ಅಧ್ಯಕ್ಷರು ಮತ್ತು ವ್ಯವಸ್ಥಾಪಕ ಮಂಡಳಿ ಗುಳುಂ ಮಾಡಿದ್ದಾರೆ. ಬ್ಯಾಂಕ್ ನ ಪಕ್ಕದಲ್ಲಿರುವ ವಾಣಿಜ್ಯ ಮಳಿಗೆಗಳಲ್ಲಿ ಯಾವುದೇ ಮೀಸಲಾತಿಯನ್ನು ಕಲ್ಪಿಸಿಲ್ಲ ಮತ್ತು ಟೆಂಡರ್ ಪ್ರಕ್ರೀಯೆ ಕೂಡ ನಡೆದಿಲ್ಲ. ಬ್ಯಾಂಕ್ ನ ಅಧ್ಯಕ್ಷರು ತಮ್ಮ ಅಧಿಕಾರವನ್ನು ದುರುಪಯೋಗ ಪಡೆದುಕೊಂಡು ತಮ್ಮ ಸಂಬಂಧಿಕರಿಗೆ ಮಾತ್ರ ಸಹಾಯ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದು ಈ ಬಗ್ಗೆ ತಾಲೂಕು ದಂಡಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಕ್ರಮವಾಗಿಲ್ಲ. ಹಾಗಾಗಿ ಧರಣಿ ಆರಂಭಿಸಿದ್ದು ಬುಧವಾರದ ಸಂಜೆಯವರೆಗೆ ೩ ದಿನಗಳು ಕಳೆದರೂ ಯಾರೊಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ. ಗುರುವಾರದಿಂದ ಹೋರಾಟವನ್ನು ಇನ್ನಷ್ಟು ಉಗ್ರವಾಗಿಸುವುದಾಗಿ ತಿಳಿಸಿದರು.
ಮುಖಂಡ ಬಸವರಾಜ ಪೂಜಾರಿ ಮಾತನಾಡಿದರು.
ಧರಣಿ ಸ್ಥಳದಲ್ಲಿ ಹೋರಾಟಗಾರರು ತಮಟೆಬಾರಿಸುತ್ತ, ಬೊಬ್ಬೆ ಹಾಕುತ್ತ ತಮ್ಮ ಆಕ್ರೋಶವನ್ನು ಹೊರಹಾಕಿದರು. ಈ ವೇಳೆ ಶರಣು ಸರೂರ, ಗೋಪಾಲ ದಾಸರ, ಸಂಗು ಚಲವಾದಿ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು.

