ಲಿಂ.ಚಂದ್ರಕಾಂತ ಕರದಳ್ಳಿ ಪುಣ್ಯಸ್ಮರಣೆ & ಶ್ರೀ ಚಂದ್ರಕಾಂತ ಸದ್ಭಾವನಾ ಪುರಸ್ಕಾರದಲ್ಲಿ ವಿಮರ್ಶಕ ಸಿ.ಎಸ್.ಭೀಮರಾಯ ಅಭಿಮತ
ಶಹಾಪೂರ: ಮಕ್ಕಳ ಸಾಹಿತ್ಯ ಮತ್ತು ಸಾಹಿತಿಗಳೆಂದರೆ ಮೂಗು ಮುರಿಯುವುದರೊಂದಿಗೆ ಅಸಡ್ಡೆ ಮಾಡುವುದು ಸರಿಯಲ್ಲ. ಮಕ್ಕಳ ಸಾಹಿತ್ಯ ರಚನೆಗೆ ಮಗು ಮನಸ್ಸಿರಬೇಕು. ಮಕ್ಕಳಿಗಾಗಿ ಕಥೆ, ಕವಿತೆ, ನಾಟಕ ಮತ್ತು ಕಾದಂಬರಿ ರಚಿಸುವುದು ಕಷ್ಟದ ಕೆಲಸ. ಮಕ್ಕಳ ಸಾಹಿತಿಗಳು ಮಕ್ಕಳ ಬೌದ್ಧಿಕ ಮಟ್ಟವನ್ನು ಗಮನದಲ್ಲಿಟ್ಟುಕೊಂಡು, ಅವರ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗುವ, ನೈತಿಕ ಮೌಲ್ಯ ಮತ್ತು ರಾಷ್ಟಪ್ರೇಮದ ಗುಣಗಳನ್ನು ಬೆಳೆಸುವಂತಹ ಸಾಹಿತ್ಯ ರಚನೆಯಾಗಬೇಕೆಂದು ವಿಮರ್ಶಕ ಸಿ.ಎಸ್.ಭೀಮರಾಯ ಅಭಿಪ್ರಾಯಪಟ್ಟರು.
ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಶ್ರೀ ಚಂದ್ರಕಾಂತ ಕರದಳ್ಳಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಲಿಂ. ಚಂದ್ರಕಾಂತ ಕರದಳ್ಳಿಯವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಹಾಗೂ ಶ್ರೀ ಚಂದ್ರಕಾಂತ ಸದ್ಭಾವನಾ ಪುರಸ್ಕಾರ-೨೦೨೩ರ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸಕರಾಗಿ ಮಾತನಾಡಿದರು.
ಮಕ್ಕಳನ್ನು ಉದ್ದೇಶಿಸಿ ರಚನೆ ಮಾಡುವ ಸಾಹಿತ್ಯವನ್ನು ಮಕ್ಕಳೇ ಓದುವುದಿಲ್ಲ. ಮಕ್ಕಳ ಸಾಹಿತ್ಯ ಬರೆಯುವವರ ನಡುವೆಯಷ್ಟೇ ಅದು ವಿನಿಮಯಗೊಳ್ಳುತ್ತದೆ. ಸಾಹಿತ್ಯದಲ್ಲಿ ಮಕ್ಕಳಿಗೆ ಅಭಿರುಚಿ ಹುಟ್ಟಿಸಬೇಕಿದೆ. ಮಕ್ಕಳಿಗೆ ಆಸಕ್ತಿ ಹುಟ್ಟಿಸುವ ರೀತಿ ಕಥೆ, ಕವಿತೆ ಹೇಳಿದರೆ, ಪುಸ್ತಕದ ಕುರಿತು ಹೇಳಿದರೆ ಅವರಲ್ಲಿ ಅಭಿರುಚಿ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪಾಲಕರು ಪ್ರಯತ್ನಿಸಬೇಕೆಂದು ಅವರು ಸೂಚಿಸಿದರು.
ಸಾನಿಧ್ಯವನ್ನು ವಹಿಸಿಕೊಂಡಿದ್ದ ಗುರುಪಾದ ಮಹಾಸಾಮಿಗಳು ಮಾತನಾಡಿದರು.
ಇದಕ್ಕೂ ಮುನ್ನ ನಾಡಿನ ಹೆಸರಾಂತ ಮಕ್ಕಳ ಸಾಹಿತಿ ಹ. ಮ. ಪೂಜಾರ ಅವರಿಗೆ ಐದು ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ಒಳಗೊಂಡ ರಾಜ್ಯಮಟ್ಟದ ೨೦೨೩ನೇ ಸಾಲಿನ ಶ್ರೀ ಚಂದ್ರಕಾಂತ ಕರದಳ್ಳಿ ಸದ್ಭಾವನಾ ಪುರಸ್ಕಾರ ನೀಡಲಾಯಿತು. ಹಾಗೆಯೇ ಯಾದಗಿರಿ ಜಿಲ್ಲೆಯ ಸಹಕಾರ ಒಕ್ಕೂಟ ಯುನಿಯನ್ (ನಿ) ಅಧ್ಯಕ್ಷ ವಿಶ್ವನಾಥರೆಡ್ಡಿ ದರ್ಶನಾಪುರ ಅವರ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗಮನಿಸಿ ಮತ್ತು ಗುರುಪಾದ ಮಹಾಸ್ವಾಮಿಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿನ ಕೊಡುಗೆಯನ್ನು ಗುರುತಿಸಿ ಶ್ರೀ ಚಂದ್ರಕಾಂತ ಕರದಳ್ಳಿ ಪ್ರತಿಷ್ಠಾನವು ಈ ಕಾರ್ಯಕ್ರಮದಲ್ಲಿ ಗೌರವಿಸಿತು.
ನಿವೃತ್ತ ಮುಖ್ಯೋಪಾಧ್ಯಾಯ ಗುರುಬಸಯ್ಯ ಗದ್ದುಗೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ವಿಶ್ವನಾಥರೆಡ್ಡಿ ದರ್ಶನಾಪುರ, ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ರವೀಂದ್ರನಾಥ ಹೊಸಮನಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಗೌರೀಶ ಅವಟಿ ನಿರೂಪಿಸಿದರು. ಶ್ರೀಶೈಲ ಮಠ ವಂದಿಸಿದರು.


