ಮುಷ್ಕರ ನಿರತ ಉಪನ್ಯಾಸಕರ ಮನವಿ ಸ್ವೀಕರಿಸಿದ ಕೆಪಿಸಿಸಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಅಭಿಮತ
ವಿಜಯಪುರ: ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ತಮ್ಮ ಸೇವಾ ಖಾಯಂಮಾತಿಗಾಗಿ ಕಳೆದ 28 ದಿನಗಳಿಂದ ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದ್ದು, ಸರ್ಕಾರ ಶೀಘ್ರ ಅವರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ.
ವಿಜಯಪುರ ಜಿಲ್ಲಾಧಿಕಾರಿಗಳ ಆವರಣದ ಹತ್ತಿರ ಕಳೆದ 27 ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಉಪನ್ಯಾಸಕರನ್ನು ಭೇಟಿ ಮಾಡಿ ಅವರ ಮನವಿ ಸ್ವೀಕರಿಸಿ ಮಾತನಾಡಿದ ಬಬಲೇಶ್ವರ ಅವರು, “ಕಳೆದ 20 ವರ್ಷದಿಂದ ಸಾವಿರ ರೂಪಾಯಿ ಸಂಬಳಕ್ಕೆ ಪ್ರಾರಂಭವಾಗಿರುವ ಎಲ್ಲಾ ಅತಿಥಿ ಉಪನ್ಯಾಸಕರ ನೋವಿನ ಕಥೆ ಕೇಳಿದರೆ ದುಃಖವಾಗುತ್ತದೆ. ಕಳೆದ ಎರಡು ದಶಕಗಳಿಂದಲೂ ಆಡಳಿತದಲ್ಲಿರುವ ಯಾವ ಪಕ್ಷದ ಸರಕಾರವಿದ್ದಾಗಲೂ ಯಾವ ಮುಖ್ಯಮಂತ್ರಿಯೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎನ್ನುವುದು ಅವರ ನೋವಾಗಿದೆ. ಈಗಾಗಲೇ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಸಚಿವ ಡಾ. ಎಂ ಬಿ ಪಾಟೀಲರು ಸುವರ್ಣ ಸೌಧದ ಮುಂದೆ ಧರಣಿ ನಿರತರನ್ನು ಭೇಟಿಯಾಗಿ ಅವರ ಮನವಿ ಸ್ವೀಕರಿಸಿ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಕ್ಷಣ ಪ್ರೇಮಿಗಳು, ಜೊತೆಗೆ ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಆಡಳಿತಗಾರರಾಗಿರುವುದರಿಂದ ಖಂಡಿತವಾಗಿಯೂ ನಿಮ್ಮ ಬೇಡಿಕೆಗೆ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಪರಿಹಾರ ದೊರೆಯುತ್ತದೆನ್ನುವ ಆತ್ಮವಿಶ್ವಾಸ ನನಗಿದೆ” ಎಂದು ಹೇಳಿದರು.
ಮಕ್ಕಳ ಕಲಿಕೆಯ ಹಿತದೃಷ್ಟಿಯಿಂದ ತಾವು ಆದಷ್ಟು ಬೇಗನೆ ತರಗತಿಗಳಿಗೆ ಮರಳುವಂತಾಗಲಿ ಎನ್ನುವುದು ನಮ್ಮೆಲ್ಲರ ಸದಾಶಯವಾಗಿದೆ ಎಂದು ಧರಣಿ ನಿರತ ಅಧ್ಯಾಪಕರಲ್ಲಿ ಕೈ ಮುಗಿದು ಕೇಳಿಕೊಂಡರು.
ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾದ ಡಾ. ಎಂ ಬಿ ಪಾಟೀಲರು ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ಸಚಿವರಾಗಿದ್ದು, ಖಂಡಿತವಾಗಿಯೂ ಅವರು ನಿಮಗೆ ನ್ಯಾಯ ದೊರಕಿಸಿ ಕೊಡುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಬಬಲೇಶ್ವರ ಹೇಳಿದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಬ್ಬಿಯವರು ಹಾಗೂ ಆನಂದ್ ಕುಲಕರ್ಣಿ ಅವರನ್ನು ಒಳಗೊಂಡಂತೆ ನೂರಾರು ಜನ ಧರಣಿ ನಿರತ ಉಪನ್ಯಾಸಕರು ಪಾಲ್ಗೊಂಡಿದ್ದರು.

