ವಿಜಯಪುರ: ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಜಾಗೃತಿ ಮತ್ತು ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗೌರವಾರ್ಥ ಡಿಸೆಂಬರ್ 24 ರಂದು ನಗರದಲ್ಲಿ ನಡೆಯಲಿರುವ ವೃಕ್ಷೋಥಾನ್ ಹೆರಿಟೇಜ್ ರನ್- 2023 ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ತಂಡಗಳ ಕಲಾ ಪ್ರದರ್ಶನ ನೀಡಲಿದ್ದು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲಿವೆ.
ಓಟ ನಡೆಯಲಿರುವ ಡಿಸೆಂಬರ್ 24 ರಂದು ರವಿವಾರ ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಈ ಕಲಾ ತಂಡಗಳು 16 ನಾನಾ ಭಾಗಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತ ಓಟದಲ್ಲಿ ಪಾಲ್ಗೋಳ್ಳುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಿವೆ. ವೃಕ್ಷೊಥಾನ್ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗಣ್ಯರು ಈ ಕಲಾ ತಂಡಗಳಿಗೆ ಮಾರ್ಗದರ್ಶನ ಮಾಡುತ್ತಿದ್ದು, ಒಟ್ಟಾರೆ ಸುಮಾರು 150 ಜನ ಕಲಾವಿದರು ಈ ತಂಡಗಳಲ್ಲಿದ್ದಾರೆ ಎಂದು ವೃಕ್ಷೊಥಾನ್ ಹೆರಿಟೇಜ್ ರನ್- 2023 ಸಮಿತಿಯ ಕೋರ್ ಕಮಿಟಿ ಸಾಂಸ್ಕೃತಿಕ ವಿಭಾಗದ ಶಿವನಗೌಡ ಪಾಟೀಲ ಮತ್ತು ಸೋಮು ಎಸ್. ಮಠ ತಿಳಿಸಿದ್ದಾರೆ.
*ಕಲಾ ತಂಡಗಳು ಮತ್ತು ಅವುಗಳು ಓಟಗಾರರಿಗೆ ಸ್ಪೂರ್ತಿ ತುಂಬಲು ನಿಗದಿ ಪಡಿಸಿರುವ ಸ್ಥಳದ ಮಾಹಿತಿ ಇಲ್ಲಿದೆ.*
*1.ಕಾಖಂಡಕಿ ಬಾಜಾ ತಂಡ:* ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಓಟ ಪ್ರಾರಂಭವಾಗುವ ಸ್ಥಳದಲ್ಲಿ ತಮ್ಮ ಕಲೆ ಪ್ರದರ್ಶನ ನೀಡಲಿದ್ದಾರೆ. ಎಂಟು ಜನರ ತಂಡ ಇದಾಗಿದೆ.
*2.ಇಂಡಿಯ ನಗಾರಿ ತಂಡ:* ನಗಾರಿ ತಂಡ ಇಬ್ಬರು ಸದಸ್ಯರು ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಓಟ ಪ್ರಾರಂಭವಾಗುವ ಸ್ಥಳದಲ್ಲಿ ಇಬ್ಬರು ಕಲಾವಿದರು ನಗಾರಿ ಬಾರಿಸಲಿದ್ದಾರೆ.
*3.ಸಾರವಾಡದ ಗೊಂಬೆ ಕುಣಿತ ತಂಡ:* 19 ಜನರ ಈ ತಂಡ ಕೂಡ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಓಟ ಪ್ರಾರಂಭವಾಗುವ ಸ್ಥಳದಲ್ಲಿ ತಮ್ಮ ಕಲೆ ಪ್ರದರ್ಶಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾರ್ಗದರ್ಶನದಲ್ಲಿ ಈ ಗೊಂಬೆ ಕುಣಿತ ನಡೆಯಲಿದೆ.
*4.ಸಚಿನ ಭಜಂತ್ರಿ ಬ್ಯಾಂಜೋ ವಾದ್ಯ:* ಎಂಟು ಜನ ಬ್ಯಾಂಜೋ ಕಲಾವಿದರು ವೃಕ್ಷೊಥಾನ್ ಮ್ಯಾರಾಥಾನ್ ಓಟಗಾರರು ಸಾಗುವ ಕಾಮತ ಹೊಟೇಲ್ ಬಳಿ ಬ್ಯಾಂಜೋ ನುಡಿಸಲಿದ್ದಾರೆ.
*5.ಹುಲಿ ಕುಣಿತ ಮತ್ತು ವಾದ್ಯ ಮೇಳ:* ನಗರದ ಗೋಲಗುಂಬಜ ಮುಂಭಾಗದಲ್ಲಿ ಮಹಾನಗರ ಪಾಲಿಕೆ ಸದಸ್ಯ ದಿನೇಶ ಹಳ್ಳಿ ಅವರ ಮಾರ್ಗದರ್ಶನದಲ್ಲಿ ಹುಲಿ ಕುಣಿತ ಮತ್ತು ವಾದ್ಯ ಮೇಳ ತಂಡದ ಕಲಾವಿದರು ಓಟಗಾರರಿಗೆ ಸ್ಪೂರ್ತಿ ತುಂಬಲಿದ್ದಾರೆ.
*6.ಡೊಳ್ಳು ಕುಣಿತ:* ನಗರದ ಬಸವೇಶ್ವರ ಚೌಕಿನ ಬಳಿ ಸ್ಪೂರ್ತಿ ಫೌಂಡೇಶನ್ ನ ಅರುಣ ಹುಂಡೆಕಾರ ಅವರು 12 ಜನ ಡೊಳ್ಳು ಕುಣಿತ ತಂಡದವರನ್ನು ಕರೆಯಿಸಿ ಡೊಳ್ಳು ಬಾರಿಸುವ ಮೂಲಕ ಕ್ರೀಡಾಪಟುಗಳಿಗೆ ಓಡಲು ಉತ್ತೇಜನ ನೀಡಲಿದ್ದಾರೆ.
*7.ಮುಂಬೈ ಮಹಿಳಾ ತಂಡದಿಂದ ಚಿಯರ್ ಅಪ್ ನೃತ್ಯ:* ಗಾಂಧಿ ಚೌಕಿನಲ್ಲಿ ಮುಂಬೈನ ಖ್ಯಾತ ಮಹಿಳಾ ಕಲಾ ತಂಡದ ಆರು ಜನರ ತಂಡ ಓಟಗಾರರಿಗೆ ಚಿಯರ್ ಅಪ್ ಮಾಡುವ ನೃತ್ಯ ಮಾಡಲಿದ್ದಾರೆ.
*8.ವಿಶೇಷ ಹಲಗಿ ವಾದ್ಯ:* ಶಿವಾಜಿ ಚೌಕ್ ನಲ್ಲಿ ಓಟಗಾರನ್ನು ಹುರುದುಂಬಿಸಲು ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ಉಮೇಶ ವಂದಾಲ ಮತ್ತು ತಂಡದವರು ವಿಶೇಷ ಹಲಗಿ ವಾದ್ಯ ನುಡಿಸುವ ಮೂಲಕ ಮೆರಗು ನೀಡಲಿದ್ದಾರೆ.
*9.ವಿಶೇಷ ಕಲಾ ತಂಡಗಳಿಂದ ವಾದ್ಯ ಮತ್ತು ನೃತ್ಯ:* ನಗರದ ವಾಟರ್ ಟ್ಯಾಂಕ್ ಬಳಿ ಎಪಿ ಗ್ರುಪ್ ವತಿಯಿಂದ ಓಟಗಾರರಿಗೆ ಚಿಯರ್ ಅಪ್ ಮಾಡಲು ವಿಶೇಷ ಕಲಾ ತಂಡಗಳಿಂದ ವಾದ್ಯ ಮತ್ತು ನೃತ್ಯ ಪ್ರದರ್ಶನ ನಡೆಯಲಿದೆ.
*10.ಸೈನಿಕ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ:* ನಗರದ ಸೈನಿಕ ಶಾಲೆಯಲ್ಲಿ ಸೈನಿಕ ಶಾಲೆಯ ವಿದ್ಯಾರ್ಥಿಗಳು ಓಟಗಾರರನ್ನು ಪ್ರೋತ್ಸಾಹಿಸಲು ವಿಶೇಷ ನೃತ್ಯ ಮಾಡಲಿದ್ದಾರೆ.
*11.ಬ್ಯಾಂಜೋ ವಾದ್ಯ:* ನಗರದ ಸೋಲಾಪುರ ರಸ್ತೆಯಲ್ಲಿರುವ ಬಿ.ಎಲ್.ಡಿ.ಇ ಕಾಲೇಜಿನ ಮುಖ್ಯದ್ವಾರದ ಬಳಿ ಲಕ್ಷ್ಮಣ ಭಜಂತ್ರಿ ಸೇರಿದಂತೆ 10 ಮತ್ತು ತಂಡದವರಿಂದ ಬ್ಯಾಂಜೋ ವಾದ್ಯ ನುಡಿಸುವ ವ್ಯವಸ್ಥೆ ಮಾಡಲಾಗಿದೆ.
*12.ಕಾಲೇಜು ವಿದ್ಯಾರ್ಥಿಗಳಿಂದ ಪ್ರೋತ್ಸಾಹಿಕ ನೃತ್ಯ:* ನಗರದ ಸೋಲಾಪುರ ರಸ್ತೆಯಲ್ಲಿರುವ ಬಿ.ಎಲ್.ಡಿ.ಇ ಕಾಲೇಜಿನ ಕ್ಯಾಂಪಸ್ ನಲ್ಲಿ ನಾನಾ ಕಾಲೇಜಿನ ವಿದ್ಯಾರ್ಥಿಗಳು ಓಟಗಾರರಿಗೆ ಪ್ರೋತ್ಸಾಹಿಸಲು ವಿಶೇಷ ನೃತ್ಯ ಮಾಡುತ್ತಿದ್ದಾರೆ.
*13.ಕನಾಳ ಕಲಾ ತಂಡದಿಂದ ಡೊಳ್ಳು ಕುಣಿತ:* ಕನಾಳ ಗ್ರಾಮದ 12 ಜನರ ಡೊಳ್ಳು ಕುಣಿತ ತಂಡ ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜಿನ ಬಳಿ ಡೊಳ್ಳು ಕುಣಿತ ಕಲೆಯನ್ನು ಪ್ರದರ್ಶಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
*14.ವಚನ ಗಾಯನ:* ನಗರದ ಜ್ಞಾನಯೋಗಾಶ್ರಮದಲ್ಲಿ ಮ್ಯಾರಾಥಾನ್ ಓಟಗಾರರನ್ನು ಪ್ರೋತ್ಸಾಹಿಸಲು ವಚನ ಗಾಯನ ನಡೆಯಲಿದೆ.
*15.ಹಲಗಿ ವಾದ್ಯ:* ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಬಳಿ ಭೂತನಾಳದ ಅಶೋಕ ವಾಲಿಕಾರ ತಂಡದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಲಗಿ ವಾದ್ಯ ನಡೆಯಲಿದೆ.
*16.ಜುಂಬಾ ಡ್ಯಾನ್ಸ್:* ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿ ರೀಟಾ ಕನಮಡಿ ಮತ್ತು ಸಾವಿತ್ರಿ ಡವಳೇಶ್ವರ ತಂಡದಿಂದ ಓಟಗಾರರಿಗೆ ಮತ್ತು ಸಾರ್ವಜನಿಕರಿಗೆ ಚಿಯರ್ ಅಪ್ ಮಾಡಲು ಜುಂಬಾ ಡ್ಯಾನ್ಸ್ ನಡೆಯಲಿದೆ.
ಅಲ್ಲದೇ, ಈ ಕಾರ್ಯಕ್ರಮ ನಡೆಯುವ ಮೂರೂವರೆ ಗಂಟೆಗಳ ಕಾಲ ವಿಜಯಪುರ ನಗರದಲ್ಲಿ ನಾನಾ ಕಲಾ ತಂಡಗಳು ತಮ್ಮ ಕಲಾ ಪ್ರದರ್ಶನ ನಡೆಸಲು ಹಾಗೂ ಜನರಲ್ಲಿ ಸಾಂಸ್ಕೃತಿಕ ಕಲೆಗಳನ್ನು ಉಣಬಡಿಸಲು ಸಮಿತಿಯ ವೃಕ್ಷೊಥಾನ್ ಹೆರಿಟೇಜ್ ರನ್-2023 ಸಮಿತಿಯ ಸಾಂಸ್ಕೃತಿಕ ವಿಭಾಗದ ಸದಸ್ಯರಾದ ಅಮೀತ ಬಿರಾದಾರ, ಡಾ. ಪ್ರವೀಣ ಚೌರ್, ಮುತ್ತಣ್ಣ ಬಿರಾದಾರ, ರಾಮ ಅಂಕಲಗಿ, ಅನೀಲ ಧಾರವಾಡಕರ, ಶ್ರೀಕಾಂತ ಮಂತ್ರಿ ಹಾಗೂ ಸಿದ್ದು ನಾಯ್ಕೋಡಿ ನಿರತರಾಗಿದ್ದಾರೆ.

