ಹೊನವಾಡ: ನುಡಿಯಿಂದ ಜನರನ್ನು ಸೆಳೆಯುವ ಜನಕ್ಕೆ ಈ ಲೋಕದಲ್ಲಿ ಕೊರತೆ ಇಲ್ಲ. ಆದರೆ ಅದರ ಪರಿಣಾಮ ಕೇಳುಗನ ಆಳಕ್ಕಿಳಿಯುವುದಿಲ್ಲ ಎಂದು ಜ್ಞಾನಯೋಗಾಶ್ರಮದ ಶಂಕರಾನಂದ ಸ್ವಾಮೀಜಿ ಹೇಳಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ನಡೆದ ಸಿದ್ದೇಶ್ವರ ಮಹಾಸ್ವಾಮಿಗಳ ಗುರು ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಕಂಡಂತಹ ಸದ್ಗುರು ಶ್ರೇಷ್ಠರಲ್ಲಿ ನಮ್ಮದೇ ಜಲ ನೆಲ ಕಪ್ಪು ಮಣ್ಣಿನಲ್ಲಿ ಜನಿಸಿ ಎಲ್ಲರ ಅಂತ:ಕರಣಕ್ಕೆ ಪಾತ್ರರಾದ ಗುರುಗಳಿವರು ಎಂದು ರೇ ಸಿ ಪಾಟೀಲ ನುಡಿದರು.
ಅರಳುವ ಪುಷ್ಪದಂತೆ ಇದ್ದು ಸುಗಂಧoತೆ ಜ್ಞಾನದ ಕಂಪನ್ನು ಹರವಿ ಬಾಡದೆ ಅಚ್ಚಳಿಯದೆ ಹೃದಯವಾಸಿ ಗುರುಗಳಿವರು. ಇವರನ್ನು ಹುಡುಕುವದಾದರೆ ತರು ಮರ ಲತೆಗಳಲ್ಲಿ ಪಕ್ಷಿ ಸಂಕುಲದಲ್ಲಿ ಜೀವಂತವಾಗಿದ್ದಾರೆ ಎಂದು ಬಾಬುರಾವ ಮಹಾರಾಜರು ಅಭಿಪ್ರಾಯಪಟ್ಟರು.
ಬುದ್ಧನಂತೆ ಭುವಿಗೆ ಬಂದವರು ಬಸವಣ್ಣನಂತೆ ದಾಸೋಹ ನೆರವೇರಿಸಿದವರು ಅಲ್ಲಮ್ಮನಂತೆ ಜ್ಞಾನ ಬಿತ್ತಿದವರು ಸಂತ ಶ್ರೇಷ್ಠರನ್ನು ಕೊಂಡಾಡಿದವರು ಕವಿ ಸಾಹಿತಿಗಳನ್ನು ಹಾಡಿ ಹೊಗಳಿದವರು ಎಂದು ಅಡಾಳಟ್ಟಿಯ ಭೀಮಾಶಂಕರ ಶರಣರು ಹೇಳಿದರು.
ಕೃಷಿಗೆ ಮೈಯೋಡ್ಡಿದವರನ್ನು ಗೋಪಾಲರನ್ನು ಪ್ರಾಣಿ ಹಿಂಸೆ ಮಾಡದವರನ್ನ ಪ್ರೀತಿಸುವವರು ಇವರು ಈ ಶತಮಾನದ ಮಾತೃ ಪ್ರೇಮಿ ಸಂತರಿವರು ಎಂದು ಕಕಮರಿಯ ಗುರುದೇವಾಶ್ರಮದ ಆತ್ಮಾರಾಮ ಸ್ವಾಮೀಜಿ ನುಡಿದರು.
ಉತ್ತಮ ಮಾರ್ಗದಲ್ಲಿ ನಡೆದು, ಅದನ್ನೇ ಹೃದಯದಲ್ಲಿ ತುಂಬಿಕೊಂಡ ನಂತರ, ತಮ್ಮ ಹೃದಯದಲ್ಲಿ ಮೂಡಿದ ಸದ್ಭಾವದ ಪಾಕವನ್ನೇ ಮಾತಿನಾನುಭೂತಿಯಲ್ಲಿ ಅಭಿವ್ಯಕ್ತಿಸುವ ನಡೆಯೇ ಮಹಾತ್ಮರ ಹಾದಿ ಎಂದವರು ಕಕಮರಿಯ ಗಂಗಣ್ಣ ಮಹಾರಾಜರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ತುಕಾರಾಮ ದಡಕೆ, ಗೌರಿಶಂಕರ ಹಿರೇಮಠ, ಸುರೇಶಗೌಡ ಚಾವರ, ಲಿಂಗರಾಜ ಪಾಟೀಲ, ಆನಂದ ಕೊರಬು, ಮಹಾದೇವ ಜಾಧವ, ಅರವಿಂದ ಮಾಲಗಾರ, ಶಂಕರ ಪಡತಾರೆ, ಹಣಮಂತ ಗುಗ್ಗರಿ, ದಾನೇಶ ಐನಾಪುರ, ಹಣಮಂತ ಶಿಂದೆ, ಶಿವಾಜಿ ಜಾಧವ, ರಮೇಶ ಗಾಯಕವಾಡ ಮತ್ತು ಗ್ರಾಮಸ್ಥರು ಇದ್ದರು.
ಅಪ್ಪು ಭಜಂತ್ರಿ ಶಿಕ್ಷಕರು ಪ್ರಾರ್ಥನೆ ಗೀತೆಯನ್ನು ಹಾಡಿದರು.ಆರ್ ಎಂ ಸಕ್ರಿ ನಿರೂಪಿಸಿದರು ಧರೆಪ್ಪ ಸಿದ್ನಾಥ ಸ್ವಾಗತಿಸಿದರು ನಿಂಗಪ್ಪ ಕೋಟಿ ವಂದಿಸಿದರು.

