ಅಪರಾಧ ತಡೆ ಮಾಸಾಚರಣೆಯಲ್ಲಿ ಪಿಎಸ್ಐ ಗಂಗೂಬಾಯಿ ಬಿರಾದಾರ ಕರೆ
ಕಲಕೇರಿ: ಆಧುನಿಕ ಜಗತ್ತಿನಲ್ಲಿ ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿಯಾದಂತೆಲ್ಲ ಬದಲಾದ ಸ್ವರೂಪದಲ್ಲಿ ಹಲವು ರೀತಿಯ ಅಪರಾಧ ಕೃತ್ಯಗಳು ನಡೆಯುತ್ತಿದ್ದು, ಇದನ್ನು ಯುವಜನತೆ ಅರಿತುಕೊಂಡು ಜಾಗೃತರಾಗಿ ಎಚ್ಚರಿಕೆಯಿಂದ ಜೀವನ ನಡೆಸುವುದರ ಜೊತೆಗೆ ಎಲ್ಲರೂ ಕಾನೂನು ಪಾಲನೆಯನ್ನು ಮೈಗೂಡಿಸಿಕೊಂಡು ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಮುಂದಾಗಬೇಕು ಎಂದು ಕಲಕೇರಿ ಪೋಲಿಸ್ ಠಾಣಾಧಿಕಾರಿ ಗಂಗೂಬಾಯಿ ಬಿರಾದಾರ ಹೇಳಿದರು.
ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ವಿಜಯಪುರ ಜಿಲ್ಲಾ ಪೋಲಿಸ್ ಇಲಾಖೆಯ ಇಂಡಿ ಉಪವಿಭಾಗ ಕಲಕೇರಿ ಠಾಣೆಯ ವತಿಯಿಂದ ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆ ಡಿಸೆಂಬರ್ ೨೦೨೩ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಖದೀಮರು ತಂತ್ರಜ್ಞಾನ ಬಳಸಿ ಬ್ಯಾಂಕ್ ಮತ್ತು ಎಟಿಎಂ ಕಳ್ಳತನ, ಸೈಬರ್ ಕ್ರೆöÊಮ್, ಫೋನ್ ಕಾಲ್ ಮೂಲಕ ದರೋಡೆ, ಫೇಸ್ಬುಕ್ ಫೇಕ್ ಐಡಿ ಮೂಲಕ ವಂಚನೆ ಸೇರಿದಂತೆ ಹಲವು ಕೃತ್ಯಗಳು ನಡೆಯುತ್ತಿದ್ದು, ಅಪರಿಚಿತರಿಗೆ ನಮ್ಮ ಓಟಿಪಿ ಮತ್ತಿತರೆ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದರು.
೧೮ ವರ್ಷದೊಳಗಿನ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಕುರಿತು ವಿಚಾರಣೆ ನಡೆಸಲು ಮತ್ತು ಶೀಘ್ರಗತಿಯಲ್ಲಿ ತೀರ್ಪು ಮತ್ತು ಶಿಕ್ಷೆ ವಿಧಿಸಲು ಫೋಕ್ಸೋ ಕಾಯ್ದೆ ೨೦೧೨ರಲ್ಲಿ ಜಾರಿಗೆ ಬಂದಿದ್ದು ಇದರನ್ವಯ ಯಾವುದೇ ಬಾಲ್ಯ ವಿವಾಹ, ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳ ಕುರಿತು ಮಕ್ಕಳ ಸಹಾಯವಾಣಿ ೧೦೯೮ಕ್ಕೆ ಮಾಹಿತಿ ನೀಡುವಂತೆ ತಿಳಿಸಿದರು.
ಅದೇರೀತಿ ರಸ್ತೆ ನಿಯಮಗಳನ್ನು ಪಾಲಿಸದೇ ಇಂದು ಸಾಕಷ್ಟು ಜೀವಗಳು ಬಲಿಯಾಗುತ್ತಿದ್ದು, ದ್ವಿಚಕ್ರವಾಹನಗಳ ಮೇಲೆ ಮೂರು ಜನರ ಸವಾರಿ, ಹೆಲ್ಮೆಟ್ ಧರಿಸದಿರುವುದು, ಲೈಸನ್ಸ್ ಇರದೇ ಚಲಾಯಿಸುವುದು, ಕುಡಿದು ವಾಹನ ಚಲಾಯಿಸುವುದು, ಅನವಶ್ಯಕವಾಗಿ ಹಾರ್ನ್ ಹಾಕುವುದು, ಕಣ್ಣಿಗೆ ಅಪಾಯವಾಗುವ ಲೈಟ್ಗಳ ಬಳಕೆ ಸೇರಿದಂತೆ ಹಲವು ರೀತಿಯ ತಪ್ಪುಗಳಿಂದ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿದ್ದು, ವೇಗದ ಜೀವನದಲ್ಲಿ ಸ್ವಲ್ಪ ಸಾವಧಾನದಿಂದ ರಸ್ತೆ ನಿಯಮಗಳನ್ನು ಪಾಲಿಸಿ ಮುಂದೆ ನಡೆದರೆ ತಮ್ಮ ಅಮೂಲ್ಯವಾದ ಪ್ರಾಣವನ್ನು ಉಳಿಸಿಕೊಳ್ಳುವುದರ ಜೊತೆಗೆ ದೇಶಕ್ಕೆ ಆಗುವ ನಷ್ಟವನ್ನು ತಪ್ಪಿಸಬಹುದು ಎಂದು ಹೇಳಿದರು.
ಸಂಸ್ಥೆಯ ಆಡಳಿತಾಧಿಕಾರಿ ಮುನ್ನಾ ಸಿರಸಗಿ ಅಧ್ಯಕ್ಷತೆ ವಹಿಸಿದ್ದರು,
ಮುಖ್ಯಗುರುಮಾತೆಯರಾದ ನಯಾರಾಬಾನು ಮಕಾಂದಾರ, ಸಯನಾಜ ಕುಡಚಿ, ಮಹೇಶ ಬೀರಗುಂಡ, ಕೆ.ಆರ್.ಪಾಟೀಲ, ನಿಂಗರಾಜ ಬಾಬಾಪುರ, ಜಾವೀದ ಜರ್ದಿ ಮತ್ತು ಪೋಲಿಸ್ ಸಿಬ್ಬಂದಿ ವರ್ಗ ಸೇರಿದಂತೆ ಇತರರು ಇದ್ದರು.

