ದೇವರಹಿಪ್ಪರಗಿ: ಧರ್ಮಗಳು, ಆಚರಣೆಗಳು ಬೇರೆ ಬೇರೆ ಆಗಿರಬಹುದು ಆದರೆ ಎಲ್ಲ ಧರ್ಮಗಳ ತಿರುಳು ಮಾನವ ಕಲ್ಯಾಣವಾಗಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ.ಪ್ರಸನ್ನ್ ರೇಣುಕ ವೀರಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.
ಪಟ್ಟಣದ ವೀರಭದ್ರೇಶ್ವರರ ೧೧ನೇ ವರ್ಷದ ಕಾರ್ತಿಕ ದೀಪೋತ್ಸವದ ಅಂಗವಾಗಿ ಸೋಮವಾರ ಜರುಗಿದ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸರ್ವಕಾಲದಲ್ಲಿ, ಸರ್ವ ಸಮುದಾಯಗಳಿಗೆ ಬೆಳಕು ನೀಡುವುದು ಯಾವುದಾದರೂ ಇದ್ದರೆ ಅದುವೇ ಧರ್ಮ. ನಾವು ನುಡಿದಂತೆ ನಡೆಯುವುದೇ ಧರ್ಮ. ನುಡಿಯುವುದು ಒಂದು, ನಡೆಯುವುದು ಇನ್ನೊಂದು ಆದಾಗ ಸಮಾಜದ ಎಲ್ಲ ರಂಗಗಳಲ್ಲಿ ಅವ್ಯವಸ್ಥೆ, ಅರಾಜಕತೆ, ಅತೃಪ್ತಿಯ ಮನೋಭಾವ ಕಂಡು ಬರುತ್ತದೆ. ಧರ್ಮ ಎನ್ನುವುದು ಹಸಿದವನಿಗೆ ಅನ್ನ, ಬಾಯಾರಿದವನಿಗೆ ನೀರು, ಪಕ್ಷಿಗೆ ರೆಕ್ಕೆ, ಕುರುಡನಿಗೆ ಕಣ್ಣು ಇದ್ದ ಹಾಗೇ, ಅಂತೆಯೇ ಭೂಮಿತಾಯಿ, ಗಾಳಿ, ನೀರುಗಳಿಗೆ ಒಂದು ಧರ್ಮ ಹಾಗೂ ಜವಾಬ್ದಾರಿಯಿದೆ. ಒಂದು ವೇಳೆ ಜವಾಬ್ದಾರಿ ಮರೆತು ಭೂಮಿ ಮೈಗೊಡವಿದರೆ, ಗಾಳಿ ಬಿರುಗಾಳಿಯಾದರೆ, ನೀರು ಪ್ರವಾಹವಾದರೆ ನಮ್ಮ ಸ್ಥಿತಿ ಏನಾಗಬಹುದು? ಆದ್ದರಿಂದ ನಮ್ಮ ಧರ್ಮ, ಜವಾಬ್ದಾರಿ ಅರಿತು ನಡೆಯಬೇಕು ಎಂದು ಹೇಳುತ್ತಾ, ಪ್ರತಿಯೊಬ್ಬರಿಗೆ ಶಾಸ್ತ್ರದ ಅರಿವಿರಬೇಕು. ಇಲ್ಲವೇ ಶಸ್ತçದ ಭಯವಿರಬೇಕು. ಬಸವಣ್ಣ, ಮಹಾತ್ಮಾಗಾಂಧಿ, ಶರಣ ಬಸವೇಶ್ವರ, ಕಡಕೋಳ ಮಡಿವಾಳಪ್ಪ ಅವರ ಜೀವನದಲ್ಲಿ ಗುರು ಯಾವ ರೀತಿಯಾದ ಪರಿಣಾಮ ಉಂಟು ಮಾಡಿದ್ದರು ಎನ್ನುವುದನ್ನು ವಿವರಿಸಿದರು.
ಶ್ರಮ, ದುಡಿಮೆ, ಕೃಷಿ, ಆರೋಗ್ಯದ ನಡುವಿನ ಪರಸ್ಪರ ಸಂಬಂಧದ ಕುರಿತು ದೀರ್ಘವಾಗಿ ಮಾತನಾಡಿ, ಜಗತ್ತಿನ ಸಂಪತ್ತು ವಿಕಾಸಕ್ಕಾಗಿ ಇದೆ ವಿನಹ ವಿನಾಶಕ್ಕಾಗಿ ಅಲ್ಲ ಎಂದರು.
ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಧರ್ಮಸಭೆ ಉದ್ಘಾಟಿಸಿ ಮಾತನಾಡುತ್ತಾ, ಗುರುವಿನ ಆಶೀರ್ವಾದಿಂದ ನಾವು ಏನನ್ನಾದರೂ ಪಡೆಯಬಹುದು ಎನ್ನುವುದಕ್ಕೆ ನಾನೇ ಉತ್ತಮ ಉದಾಹರಣೆ ಎಂದರು.
ವಿಜಯಪುರ ಅನುಗ್ರಹ ಆಸ್ಪತ್ರೆಯ ನೇತ್ರತಜ್ಞ ಪ್ರಭುಗೌಡ ಬಿ.ಎಲ್. ಮಾತನಾಡಿದರು.
ಎಮ್ಮಿಗನೂರ ಹಂಪಿಸಾವಿರದೇವರಮಠದ ವಾಮದೇವ ಮಹಾಂತಶ್ರೀ, ಸದಯ್ಯನಮಠದ ವೀರಗಂಗಾಧರಶ್ರೀ, ಬಸವನಬಾಗೇವಾಡಿಯ ಶಿವಪ್ರಕಾಶಶ್ರೀ, ಜಡೇಮಠದ ಜಡೆಸಿದ್ದೇಶ್ವರಶ್ರೀ, ಪರದೇಶಿಮಠಶ್ರೀಗಳು ಆಶೀರ್ವಚನ ನೀಡಿದರು.
ಕಾರ್ತಿಕೋತ್ಸವ ಸೇವಾ ಸಮೀತಿಯ ಅಧ್ಯಕ್ಷ ಸಿ.ಕೆ.ಕುದರಿ ಪ್ರಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸೇವಾ ಸಮೀತಿಯ ಸದಸ್ಯರು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ನಂತರ ಮಹಾಪ್ರಸಾದ ಜರುಗಿತು.
ಸಗರದ ಮರುಳ ಮಹಾಂತಶ್ರೀಗಳು, ಕೊಕಟನೂರಿನ ಮಡಿವಾಳೇಶ್ವರ ಸ್ವಾಮೀಜಿ, ಚಿಮ್ಮಲಗಿಯ ಸಿದ್ಧರೇಣುಕ ಶ್ರೀಗಳು, ವ್ಹಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಣಮಂತ್ರಾಯಗೌಡ ಪಾಟೀಲ(ಪಡಗಾನೂರ) ಶಂಕರಗೌಡ ಕೋಟಿಖಾನಿ, ಮಲ್ಲಿಕಾರ್ಜುನ ಗವಾಯಿ, ತಬಲಾ ವಾದಕ ಭೀಮಣ್ಣ ಸಣ್ಣೂರ, ಬಾಳಾಸಾಹೇಬಗೌಡ ಪಾಟೀಲ, ಬಾಳಯ್ಯ ಇಂಡಿಮಠ, ಸಿದ್ದು ಆನಂದಿ, ವಿನೋದ ನಾಶೀಮಠ, ಪಿ.ಜಿ.ಹಿರೇಮಠ, ಬಸಯ್ಯ ಮಲ್ಲಿಕಾರ್ಜುನಮಠ, ಉಮಾಕಾಂತ ಸೊನ್ನದ, ಬಾಬುಗೌಡ ಪಾಟೀಲ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

