ಜಾತಿ ಗಣತಿ ಅವೈಜ್ಞಾನಿಕ | ಹೊಸ ಸಮೀಕ್ಷೆಗೆ ಪಟ್ಟು | ಮನವಿ ಪತ್ರಕ್ಕೆ 30ಕ್ಕೂ ಹೆಚ್ಚು ಶಾಸಕರ ಸಹಿ
ಬೆಳಗಾವಿ: ಒಕ್ಕಲಿಗರ ಬಳಿಕ ಲಿಂಗಾಯತ ಸಮುದಾಯದ ನಾಯಕರೂ 2015ರ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ(ಜಾತಿ) ಗಣತಿ ವರದಿಯನ್ನು ವಿರೋಧಿಸಿದ್ದಾರೆ. ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ಅದನ್ನು ಸ್ವೀಕರಿಸದಂತೆ ಆಗ್ರಹಿಸಿದ್ದಾರೆ.
ಶುಕ್ರವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ನಾಯಕರು ಜಾತಿ ಗಣತಿ ವರದಿ ಅಂಗೀಕರಿಸದಂತೆ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಪತ್ರಕ್ಕೆ ಸಿದ್ದರಾಮಯ್ಯ ಸರ್ಕಾರದ ಸಚಿವರಾದ ಎಂ.ಬಿ ಪಾಟೀಲ್, ಈಶ್ವರ ಖಂಡ್ರೆ, ಶಿವಾನಂದ ಪಾಟೀಲ್ ಸೇರಿದಂತೆ, ವಿವಿಧ ಪಕ್ಷಗಳ ಸುಮಾರು 30ಕ್ಕೂ ಹೆಚ್ಚು ಶಾಸಕರು ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಬಿಜೆಪಿ ಶಾಸಕರಾದ ಬಿವೈ ವಿಜಯೇಂದ್ರ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಲಕ್ಷಣ ಸವದಿ , ವಿಜಯಾನಂದ ಕಾಶಪ್ಪನವರ್, ಪಕ್ಷದ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್ ಕೂಡ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.
ಹಿರಿಯ ಕಾಂಗ್ರೆಸ್ ಶಾಸಕ ಮತ್ತು ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. 2015 ಜಾತಿ ಗಣತಿ ವರದಿ ಅವೈಜ್ಞಾನಿಕ, ಅವಧಿ ಮೀರಿದ್ದು ಮತ್ತು ಕ್ಷೇತ್ರ ಕಾರ್ಯದ ಕೊರತೆಯಿಂದ ಕೂಡಿದೆ ಎಂದು ಶಾಮನೂರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಒಕ್ಕಲಿಗ ಸಮುದಾಯದಿಂದ ವಿರೋಧ
ತಿಂಗಳ ಹಿಂದೆ ಇದೇ ರೀತಿಯ ಮನವಿಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಒಕ್ಕಲಿಗ ಸಮುದಾಯದ ನಾಯಕರು ಸಹಿ ಹಾಕಿದ್ದರು. 2016 ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿದೆ ಮತ್ತು ವಿಶ್ವಸಾರ್ಹತೆಯ ಕೊರೆತೆಯಿದೆ ಎಂದು ಆರೋಪಿಸಿದ್ದರು.
ವರದಿಗಳ ಪ್ರಕಾರ, ಲಿಂಗಾಯತ ಸಮುದಾಯ ಸಿಎಂಗೆ ಕೊಟ್ಟಿರುವ ಮನವಿಯು ಜಾತಿ ಗಣತಿಯನ್ನು ವಿರೋಧಿಸಿಲ್ಲ. ಆದರೆ, 2015ರ ಜಾತಿ ಗಣತಿ ಅವೈಜ್ಞಾನಿಕವಾಗಿದೆ. ಅದು ಜನರ ಮನೆ ಬಾಗಿಲಿಗೆ ತೆರಳಿ ಮಾಹಿತಿ ಸಂಗ್ರಹಿಸುವಲ್ಲಿ ವಿಫಲವಾಗಿದೆ. ವರದಿಯು ರಾಜ್ಯದಲ್ಲಿ ಇರುವ ಲಿಂಗಾಯತ ಸಮುದಾಯದ ಜನ ಸಂಖ್ಯೆಯನ್ನು ಸರಿಯಾಗಿ ತೋರಿಸಿಲ್ಲ. ಜಾತಿ ಗಣತಿ ಲಿಂಗಾಯತ ಸಮುದಾಯದ ಉಪ ಜಾತಿಗಳ ನಡುವೆ ಬಿರುಕು ಮೂಡಿಸಿದೆ ಎಂದು ಹೇಳಿದೆ.
ಲಿಂಗಾಯತ ಸಮುದಾಯದ ಉಪ ಜಾತಿಗಳ ಬಗ್ಗೆ ಕ್ರಾಸ್ ವೆರಿಕಫಿಕೇಶನ್ ಮಾಡಿಲ್ಲ. ಜನರು ಹೇಳಿದ ಜಾತಿಯನ್ನು ಒಪ್ಪಿಕೊಂಡಿದೆ. ಈ ವರದಿ ಒಪ್ಪಿಕೊಳ್ಳುವುದರಿಂದ ಅರ್ಹ ಬಡವರು, ಹಿಂದುಳಿದವರು ಮತ್ತು ಮಧ್ಯಮ ವರ್ಗದ ವೀರಶೈವ ಲಿಂಗಾಯತರು ಅವರ ಮೀಸಲಾತಿ ಮತ್ತು ಇತರ ಪ್ರಯೋಜನಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದೆ.
2015ರಲ್ಲಿ ಹೆಚ್.ಕಾಂತರಾಜು ಅವರು ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದಾಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾತಿ ಗಣತಿಗೆ ಚಾಲನೆ ನೀಡಿತ್ತು. ಈ ವರದಿ ಇನ್ನೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಪ್ರಸ್ತುತ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ ವರದಿಯನ್ನು ಸ್ವೀಕರಿಸಲು ಸರ್ಕಾರ ಮುಂದಾಗಿದೆ.

