ಕೊಲ್ಹಾರ: ಹಳೇ ಗ್ರಾಮ ಕೃಷ್ಣಾ ಮೇಲ್ದಂಡೆ ಯೋಜನೆಯ ಅಡಿ ಮುಳಗಡೆಯಾಗಿ ಹೊಸ ಭರವಸೆಯಲ್ಲಿ ಪುನರ್ವಸತಿ ಕೇಂದ್ರ ನಿರ್ಮಾಣವಾಗಿ ೨೫ ವರ್ಷಗಳು ಗತಿಸುವ ಸಂದರ್ಭದಲ್ಲಿ ಕೆಲವು ಅಡೆ ತಡೆಗಳ ಮಧ್ಯದಲ್ಲಿಯೂ ಅಭಿವ್ರದ್ದಿ ಪಥದತ್ತ ಕೊಲ್ಹಾರ ಪಟ್ಟಣ ಸಾಗುತ್ತಿರುವುದು ಇಲ್ಲಿನ ಸಾರ್ವಜನರಲ್ಲಿ ಒಂದು ಕಡೆ ಸಂತಸವಾದರೆ ಇನ್ನೊಂದು ಕಡೆ ಆಗಬೇಕಾದ ಕಾಮಗಾರಿಗಳ ಪಟ್ಟಿ ದೊಡ್ಡದಾಗಿದೆ.
ಬಸವನ ಬಾಗೇವಾಡಿ ಮತಕ್ಷೇತ್ರದ ನಾಲ್ಕು ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಶಿವಾನಂದ ಪಾಟೀಲರ ಪರಿಶ್ರಮದ ಫಲವಾಗಿ ವಿವಿಧ ಇಲಾಖೆಗಳ ನೂರಾರು ಕೋಟಿ ಅನುದಾನ ಮಂಜೂರಾಗಿ ಕಾಮಗಾರಿಗಳು ಭರಪೂರ ಸಾಗುತ್ತಿರುವಾಗ ಸಾರ್ವಜನಿಕರ ಸಹಕಾರ ಒಮ್ಮತದಿಂದ ಮೂಡುತ್ತಿರುವದು ಸ್ಥಳಿಯ ನಾಗರಿಕರು ಕೂಡ ಶಾಸಕರಿಗೆ ಸಹಕಾರ ಕೊಟ್ಟಂತಾಗಿದೆ ಆದರೆ ಇಲ್ಲೊಂದು ಪ್ರಶ್ನೆ ಉದ್ಬವಿಸಿದೆ.
ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು ೧೭ ವಾರ್ಡುಗಳು ಇದರಲ್ಲಿ ಮೂರು ಜನ ಬಿಜೆಪಿ ಪಕ್ಷವನ್ನು ಪ್ರತಿನಿಧಿಸುವ ಸದಸ್ಯರು, ಉಳಿದಂತೆ ೧೪ ಜನ ಕಾಂಗ್ರೆಸ್ ಪಕ್ಷದ ಸದಸ್ಯರು ತಮ್ಮ ತಮ್ಮ ವಾರ್ಡುಗಳನ್ನು ಪ್ರತಿನಿಧಿಸುತ್ತಾರೆ. ಅಭಿವೃದ್ದಿ ಎಂದರೆ ಎಲ್ಲ ವಾರ್ಡುಗಳು ಏಕಕಾಲಕ್ಕೆ ಅಭಿವ್ರದ್ದಿಯಾದರೆ ಸಮಗ್ರ ದೃಷ್ಟಿಕೋನದಿಂದ ಅಭಿವ್ರದ್ದಿಪಡಿಸುತ್ತಿದ್ದಾರೆ ಎನ್ನಬಹುದು ಇಲ್ಲಿ ಕೆಲವು ಕಡೆ ಮಾತ್ರ ಕಾಮಗಾರಿಗಳು ನಡೆಯುತ್ತಿದ್ದು ಉಳಿದ ಕಡೆ ಯಾವಾಗ ಎನ್ನುವದು ಜನರಲ್ಲಿ ಆಶಾಭಾವನೆ ಮೂಡುತ್ತಿದೆ.
ರಸ್ತೆಯ ಎರಡು ಬದಿ ಗಟ್ಟಮುಟ್ಟಾದ ಗಟಾರಗಳ ವ್ಯವಸ್ಥೆ ಒಳಚರಂಡಿಗೆ ಮನೆ ಮನೆಯ ಶೌಚಾಲಯ ಹಾಗೂ ಬಚ್ಚಲುಮನೆಯ ಪೈಪಲೈನ್ ಜೋಡಣಾ ಕಾರ್ಯ ಮತ್ತು ೬,೯,೧೨,೧೮ ಮೀಟರ್ ಅಳತೆಯ ರಸ್ತೆಗಳಲ್ಲಿ ಮೊಹರಂ, ಖಡಿಕರಣ, ಡಾಂಬರೀಕರಣ ಕಾಮಗಾರಿಗಳು ಸುಸಜ್ಜಿತವಾಗಿ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಸಮ್ಮುಖದಲ್ಲಿ ಸಾಗುತ್ತಿವೆ. ಆದರೆ ಪುನರ್ವಸತಿ ಕೆಂದ್ರದಲ್ಲಿ ಇರುವ ಎಲ್ಲ ಅಳತೆಯ ರಸ್ತೆಗಳು ಅಂದಾಜು ೮೦ ಕಿ.ಮೀ ವ್ಯಾಪ್ತಿ ಪ್ರದೇಶವನ್ನು ಹೊಂದಿರುತ್ತವೆ ಎಂದು ತಿಳಿದುಬಂದಿದ್ದು ಇದೇ ರೀತಿ ಆಮೆಗತಿಯಲ್ಲಿ ರಸ್ತೆಗಳ ಅಭಿವೃದ್ದಿ ನಡೆದರೆ ಪೂರ್ಣವಾಗಲು ಎಷ್ಟು ವರ್ಷಗಳು ಗತಿಸಬಹುದು.
ಆಗಬೇಕಾದ ಕಾಮಗಾರಿಗಳು: ಕೃಷ್ಣೆ ಮಗ್ಗುಲಲ್ಲಿ ಹರಿದರೂ ಎರಡು ದಿನಕ್ಕೊಮ್ಮೆ ನಲ್ಲಿಗಳ ಮುಖಾಂತರ ನೀರಿನ ಸರಬರಾಜು ಆಗುತ್ತಿದ್ದು ದಿನನಿತ್ಯ ಸರಾಗವಾಗಿ ಮನೆ ಮನೆಗೆ ನೀರು ಪೂರೈಕೆಯಾಗಬೇಕಾದರೆ ಕೊಲ್ಹಾರ ಪಟ್ಟಣಕ್ಕೆ ನದಿ ಮೂಲದಿಂದ ಪ್ರತ್ಯೇಕವಾದ ಕುಡಿಯುವ ಪೈಪಲೈನ್ ಜೋಡಣೆ ಮಾಡುವದು ಮತ್ತು ಊರಿನ ನಾಲ್ಕು ದಿಕ್ಕಿನ ಎತ್ತರವಾದ ಪ್ರದೇಶದಲ್ಲಿ ಜಲಸಂಗ್ರಹ ಟ್ಯಾಂಕಗಳ ನಿರ್ಮಾಣವಾಗಬೇಕು, ಈಗಿರುವ ಟ್ಯಾಂಕ್ಗಳು ಈಗಿನ ಜನಸಂಖ್ಯೆ ಮುಂದಿನ ಬೆಳವಣಿಗೆಯ ಜನಸಂಖ್ಯೆಗೆ ಅನುಗುನವಾಗಿ ನಿರ್ಮಾಣವಾಗಿರುವದಿಲ್ಲ ಎನ್ನುವದನ್ನು ಅಧಿಕಾರಿಗಳು ಗಮನಿಸಿ ಕ್ರಮ ಕೈಗೊಳ್ಳಬೇಕೆನ್ನುವದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ರಾಷ್ಟ್ರೀಯ ಹೆದ್ದಾರಿ ೨೧೮ರಿಂದ ಎರಡು ಕಡೆಗಳಿಂದ ಪುರ ಪ್ರವೇಶವಾಗುವಾಗ ರಸ್ತೆ ಮಾರ್ಗ ಅತ್ಯಂತ ಚಿಕ್ಕದಾಗಿದ್ದು ದ್ವೀಪಥ ರಸ್ತೆಯನ್ನಾಗಿ ಅಗಲೀಕರಣ ಮಾಡುವದು, ಪಟ್ಟಣದಲ್ಲಿರುವ ಎಲ್ಲ ೧೮ಮೀ ರಸ್ತೆಗಳ ಡಾಂಬರೀಕರಣ ಪೂರ್ಣಗೊಂಡ ನಂತರ ಹಾಗೂ ಅಂಬೇಡ್ಕರ ವೃತ್ತದಿಂದ ರಾಚೋಟೇಶ್ವರ ದೇವಸ್ಥಾನದ ಮಾರ್ಗವಾಗಿ ಯುಕೆಪಿ ಕಾರ್ಯಾಲಯಕ್ಕೆ ತೆರಳುವ ರಸ್ತೆಯನ್ನು ಸೇರಿ ಪ್ರಕರತೆಯನ್ನು ಹೊಂದಿರುವ ಆಧುನಿಕ ತಂತ್ರಜ್ಞಾನದ ಬೀದಿ ದೀಪಗಳ ಅಳವಡಿಕೆ ಕಾಮಗಾರಿಯನ್ನು ಕೈಗೊಳ್ಳಬೇಕು ಹಾಗೂ ರಸ್ತೆಗಳ ಅಭಿವೃದ್ದಿ ಪಡಿಸುವ ಸಮಯದಲ್ಲಿ ಈಗಿರುವ ವಿದ್ಯುತ್ ಕಂಬಗಳು ರಸ್ತೆ ಮಧ್ಯದಲ್ಲಿಯೇ ಬರುವಂತಹ ಸನ್ನಿವೇಶ ಸೃಷ್ಟಿಯಾಗಿದ್ದು ಅವುಗಳನ್ನು ತೆರವುಗೊಳಿಸಿ ರಸ್ತೆ ಬದಿಯಲ್ಲಿ ಕಂಬಗಳನ್ನು ನಿಲ್ಲಿಸಲು ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕು.


