“ಶ್ರೀ ಸಿದ್ಧಂತ ಶಿಖಾಮಣಿ”ಯಲ್ಲಿ ಶಿವಯೋಗಿ ಶಿವಾಚಾರ್ಯರು ತಮ್ಮ ವಂಶಕ್ಕೆ ಸಂಬಂಧಿಸಿದಂತೆ ನೀಡಿದ ಕೆಲವು ಮಾಹಿತಿಗೆ ಅನುಗುಣವಾಗಿ ಅವರ ವಂಶದ ಮೂಲ ಪುರುಷನು ಶಿವಯೋಗಿ ಎಂಬ ಹೆಸರಿನವನು. ಈ ಮೂಲ ಶಿವಯೋಗಿಯ ಮಗ ಮುದ್ದದೇವ. ಈತನ ಮಗ ಸಿದ್ಧನಾಥ. ಈ ಸಿದ್ಧನಾಥನ ಮಗನೇ “ಶ್ರೀ ಸಿದ್ಧಾಂತ ಶಿಖಾಮಣಿ” ಕರ್ತೃವಾದ ಶಿವಯೋಗಿ ಶಿವಾಚಾರ್ಯರು. ಆದರೆ ಇವರು ಸೊಲ್ಲಾಪುರದ ಶಿವಯೋಗಿ ಸಿದ್ಧರಾಮೇಶ್ವರರ ವಂಶಜರಲ್ಲ ಎಂಬುದು ಯುಕ್ತಿ-ತರ್ಕ-ಪ್ರಮಾಣಗಳಿಂದ ಸಿದ್ಧವಾದ ಸಂಗತಿಯಾಗಿದೆ.
ಇವರು ತಮ್ಮ ಕೃತಿ ” ಶ್ರೀ ಸಿದ್ಧಾಂತ ಶಿಖಾಮಣಿ”ಯಲ್ಲಿ ತಮ್ಮ ಕಾಲದ ಬಗೆಗಾಗಲಿ ಮತ್ತು ತನ್ನ ದೇಶದ ಬಗ್ಗೆಯಾಗಲಿ ಏನನ್ನು ಹೇಳಿಕೊಂಡಿಲ್ಲವಾದರೂ ೧೨ ನೇ ಶತಮಾನದ ಶರಣರ ಕೆಲವು ವಚನಗಳಲ್ಲಿ ಮತ್ತು ೧೧ ನೇ ಶತಮಾನದ “ಶ್ರೀಕರಭಾಷ್ಯ”ದಲ್ಲಿ “ಸಿದ್ಧಾಂತ ಶಿಖಾಮಣಿಯ” ಕೆಲವು ಶ್ಲೋಕಗಳು ಉಲ್ಲೇಖಗೊಂಡಿರುವುದರಿಂದ ಇವರು ೧೦ ನೇ ಶತಮಾಕ್ಕಿಂತ ಪೂರ್ವದಲ್ಲಿ ಇದ್ದರೆಂದು ವಿದ್ವಾಂಸರ ವಾದದಿಂದ ತಿಳಿದು ಬರುತ್ತದೆ.
ಇವರು “ಸಿದ್ಧಾಂತ ಶಿಖಾಮಣಿ”ಯನ್ನು ಬರೆಯುವ ಮೊದಲು ಅಭ್ಯಸಿಸಿರುವ ಗ್ರಂಥಗಳ ಬಗ್ಗೆ ಹೇಳುವ ಸಂದರ್ಭದಲ್ಲಿ
ಆಲೋಕ್ಯ ಶೈವತಂತ್ರಾಣಿ ಕಾಮಿಕಾಧ್ಯಾನಿ ಸಾದರಂ |
ವಾತುಲಾಂತಾನಿ ಶೈವಾನಿ ಪುರಾಣಾನ್ಯಖಿಲಾನಿ ತು || (ಸಿ.ಶಿ.೧.೨೫)
ಎಂದು ಹೇಳಿರುವುದರಿಂದ ಅವರ ಕಾಲದಲ್ಲಿ ಉಪಲಬ್ಧವಿರುವ ಎಲ್ಲ ಶೈವಾಗಮಗಳನ್ನು ಹಾಗೂ ಶಿವಸಂಬಂಧಿಯಾದ ಎಲ್ಲ ಪುರಾಣಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರೆಂಬುದು ಸ್ಪಷ್ಟವಾಗುತ್ತದೆ. ಇದಲ್ಲದೇ ಇವರು ತಮ್ಮ ಕೃತಿಯಲ್ಲಿ ಊರಿನ ಬಗ್ಗೆಯಾಗಲಿ ಮತ್ತು ತನ್ನ ತಾಯಿಯ ಬಗ್ಗೆಯಾಗಲಿ ಏನನ್ನೂ ಹೇಳಿಕೊಂಡಿಲ್ಲ. ಇದರಿಂದ ಇವರ ಈ ವಂಶಾವಳಿಯು ಗೃಹಸ್ಥಾಶ್ರಮಕ್ಕೆ ಸಂಬಂಧಿಸಿದ್ದಾಗಿರದೇ ಗುರು ಪರಂಪರೆಗೆ ಸಂಬಂಧಿಸಿದ್ದಾಗಿರಬಹುದು ಎಂದು ಊಹಿಸಲು ಅವಕಾಶವಿದೆ. ಇವರ ಅಜ್ಜನ ಹೆಸರು ಮುದ್ದದೇವ ಎಂದು ಇರುವುದರಿಂದ, ಮುದ್ದು ಎಂಬುದು ಕನ್ನಡದ ಶಬ್ದವಾಗಿರುವುದರಿಂದ ಇವರು ಕರ್ನಾಟಕದವರೆಂದು ಹೇಳಬಹುದು.
ಇವರು ಶಿವಯೋಗ ಮತ್ತು ಶಿವಜ್ಞಾನ ಕೋವಿದರಾಗಿ ಅವರ ಕಾಲದಲ್ಲಿ ಎಲ್ಲೆಡೆಯಲ್ಲೂ ಉತ್ತಮ ಕೀರ್ತಿಶಾಲಿಗಳಾಗಿದ್ದರು. ಸೂರ್ಯನಿಗೆ ಕತ್ತಲೆ ಅಂಜುವಂತೆ, ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತವನ್ನು ವಿರೋಧಿಸುವವರೆಲ್ಲರೂ ಇವರಲ್ಲಿರುವ ವಿದ್ವತ್ತು ಮತ್ತು ಶಿವಜ್ಞಾನದ ಕಾರಣದಿಂದಾಗಿ ಇವರಿಂದ ಭಯಪಡುತ್ತಿದ್ದರು. ಚಂದ್ರನು ಕತ್ತಲೆಯಲ್ಲೂ ದಾರಿಕಾರರಿಗೆ ದಾರಿ ದೀಪವಾಗಿರುವಂತೆ ವೀರಶೈವರೆಲ್ಲರಿಗೆ ಇವರು ಉತ್ತಮ ಮಾರ್ಗದರ್ಶಕರಾಗಿದ್ದರು. ತಮ್ಮ ಕೃತಿಯಲ್ಲಿ ಇನ್ನೊಂದು ಯಾವುದೇ ಸಿದ್ಧಾಂತವನ್ನು ಯುಕ್ತಿ-ಪ್ರಯುಕ್ತಿ-ಪ್ರಮಾಣಾದಿಗಳಿಂದ ಖಂಡಿಸದೇ ತಮ್ಮ ವಾದವನ್ನು ಮಾತ್ರ ನಿಖರವಾಗಿ ಮಂಡಿಸಿರುವುದರಿಂದ ಮತ್ತು-
ಸಾಂಖ್ಯಂ ಯೋಗಃ ಪಾಂಚರಾತ್ರಂ ವೇದಾಃ ಪಾಶುಪತಂ ತಥಾ |
ಏತಾನಿ ಮಾನಭೂತಾನಿ ನೋಪಹನ್ಯಾನಿ ಯುಕ್ತಿಭಿಃ || ( ಸಿ. ಶಿ. ೫. ೪)
ಎಂಬುದಾಗಿ ಸಾಂಖ್ಯ ಮೊದಲಾದ ಇತರ ಪ್ರಾಮಾಣಿಕ ಸಿದ್ಧಾಂತಗಳನ್ನು ಖಂಡಿಸುವುದು ಸೂಕ್ತವಲ್ಲ ಎಂದು ಹೇಳಿರುವುದರಿಂದ ಇವರು ಸಮನ್ವಯ ಮೂರ್ತಿಗಳು ಮತ್ತು ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಉಳ್ಳವರಾಗಿದ್ದರೆಂಬುದು ಸ್ಪಷ್ಟವಾಗುತ್ತದೆ.
ಹತ್ತು ಮಕ್ಕಳನ್ನು ಹೆರುವುದಕ್ಕಿಂತ ಮುತ್ತಿನಂಥ ಒಂದು ಮಗು ಸಾಕು ಎಂಬಂತೆ ಇವರು ಬರೆದ “ಶ್ರೀ ಸಿದ್ಧಾಂತ ಶಿಖಾಮಣಿ” ಇದೊಂದೇ ಕೃತಿ ಈಗ ಉಪಲಬ್ಧವಿದೆ.
ಇದರಲ್ಲಿ ಅವರು ವೀರಶೈವ ಸಿದ್ಧಾಂತದ ನೂರೊಂದು ಸ್ಥಲಗಳ ಸೂಕ್ಷ್ಮಾತಿ ಸೂಕ್ಷ್ಮ ಅನುಭವಗಳ ವಿವರಣೆಯನ್ನು ಅತ್ಯಂತ ವಿದ್ವತ್ಪೂರ್ಣವಾಗಿ ಪ್ರತಿಪಾದಿಸಿದ್ದಾರೆ. ನೂರೊಂದು ಸ್ಥಲಗಳನ್ನು ಇಷ್ಟು ನಿಖರವಾಗಿ ನಿರೂಪಿಸುವ ಮೊದಲ ಕೃತಿ ಇದಾಗಿರುವುದರಿಂದ ಇವರ ಶಿವಜ್ಞಾನ ಮತ್ತು ಶಿವಯೋಗಾನುಭವಗಳು ಎಷ್ಟು ಆಳವಾಗಿತ್ತು ಎಂಬುದು ಇದರಿಂದ ತಿಳಿದು ಬರುತ್ತದೆ. ಕಾರಣ ಇವರ ಈ ಕೃತಿಯು ವೀರಶೈವ ಧರ್ಮವನ್ನು ಪ್ರತಿಪಾದಿಸುವ ಎಲ್ಲ ಕೃತಿಗಳ ಶಿಖಾಮಣಿಯಾಗಿದೆ ಎನ್ನುತ್ತಾರೆ ಶ್ರೀಶೈಲ ಜಗದ್ಗುರುಗಳು.
*ಕರ್ನಾಟಕದಲ್ಲಿ ಮಠ-ಮಂದಿರಗಳು, ಸಂಘ-ಸಂಸ್ಥೆಗಳು ವಿವಿಧ ರಂಗಗಳಲ್ಲಿ ಗಣನೀಯ ಸಾಧಕರಿಗೆ ವಿಭಿನ್ನವಾದ ಸಾಕಷ್ಟು ಬೇರೆ ಬೇರೆ ಪ್ರಶಸ್ತಿಗಳನ್ನು ನೀಡುತ್ತ ಬಂದಿದ್ದರೂ, ಈ ಸಿದ್ಧಾಂತ ಶಿಖಾಮಣಿ ಕರ್ತೃವಾದ ಶಿವಯೋಗಿ ಶಿವಾಚಾರ್ಯರ ಹೆಸರಿನ ಮೇಲೆ ಯಾರೂ ಪ್ರಶಸ್ತಿಯನ್ನು ನೀಡಿಲ್ಲ. ಸಿಂದಗಿಯ ಸಾರಂಗ ಮಠದಿಂದ ಮಠಾಧಿಪತಿಗಳಾದ,ಗುರುಕುಲ ಭಾಸ್ಕರರಾದ ಷ ಬ್ರ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು ಇದಕ್ಕೆ ಮುಂದಾಗಿದ್ದು, ಆದರ್ಶ, ಅನುಕರಣೀಯ ಮತ್ತು ಅಭಿನಂದನೀಯ. ಶಿವಯೋಗಿ ಶಿವಾಚಾರ್ಯರ ಮುಡಿಗೆ ಕಿರೀಟ ಪ್ರಾಯವಾದ ಈ ಪ್ರಶಸ್ತಿಯು ‘ಪ್ರಶಸ್ತಿ ಶಿಖಾಮಣಿ ಆಗಿದೆ.*
Subscribe to Updates
Get the latest creative news from FooBar about art, design and business.
Related Posts
Add A Comment

