ಬೆಂಗಳೂರು: ವೈದ್ಯಕೀಯ ಗರ್ಭಪಾತ (ಎಂಟಿಪಿ) ಕಾನೂನಿನ ಅಡಿಯಲ್ಲಿನ ಹಕ್ಕುಗಳ ಕುರಿತು ಮಹಿಳೆಯರಿಗೆ ಸಮಾಲೋಚನೆ ನೀಡುವ ಮೂಲಕ, ಸಂತ್ರಸ್ತರಿಗೆ ಮಾನಸಿಕ ಆಘಾತ ಕಡಿಮೆ ಮಾಡಲು ಹಾಗೂ ಅವರಿಗೆ ಸಹಾಯ ಮಾಡಲು ಕರ್ನಾಟಕ ಹೈಕೋರ್ಟ್ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಅತ್ಯಾಚಾರದಿಂದ ಗರ್ಭಿಣಿಯಾಗಿದ್ದ 17 ವರ್ಷದ ಬಾಲಕಿಗೆ ಎಂಟಿಪಿಗೆ ಒಳಗಾಗಲು ಅನುಮತಿ ನೀಡುವಾಗ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಈ ನಿರ್ದೇಶನಗಳನ್ನು ನೀಡಿದ್ದಾರೆ. ಅಪ್ರಾಪ್ತ ವಯಸ್ಸಿನ ಗರ್ಭಾವಸ್ಥೆಯ ಹಲವಾರು ಪ್ರಕರಣಗಳು ಲೈಂಗಿಕ ಅಪರಾಧಗಳಿಂದ ಸಂಭವಿಸಿದ್ದು, ಅದರ ಅನ್ವಯ ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಸಂತ್ರಸ್ತೆಯರು ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಬಯಸುವ ಹೆಚ್ಚಿನ ಪ್ರಕರಣಗಳಲ್ಲಿ ಗರ್ಭಾವಸ್ಥೆಯ ಅವಧಿಯು 24 ವಾರಗಳನ್ನು ದಾಟಿರುತ್ತದೆ ಎಂಬುದನ್ನು ನ್ಯಾಯಾಲಯವು ಗಮನಿಸಿದೆ. ಇದು ವೈದ್ಯಕೀಯ ಗರ್ಭಪಾತ (ತಿದ್ದುಪಡಿ)-1971ರ ಅಡಿಯಲ್ಲಿ ಅನುಮತಿ ನೀಡುವ ಅವಧಿಯಾಗಿದೆ. ನಂತರದ ಯಾವುದೇ ವಿಳಂಬಕ್ಕೆ ಹೈಕೋರ್ಟ್ನಿಂದ ಅನುಮತಿ ಪಡೆಯುವುದು ಅಗತ್ಯವಿದೆ.
ಐಪಿಸಿ ಸೆಕ್ಷನ್ 376 ಅಥವಾ ಪೋಕ್ಸೊ ಕಾಯ್ದೆಯಡಿ ಲೈಂಗಿಕ ಅಪರಾಧವನ್ನು ದಾಖಲಿಸಿದ ತಕ್ಷಣ, ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಿ ಗರ್ಭಿಣಿಯಾಗಿದ್ದಲ್ಲಿ ಖಚಿತಪಡಿಸಿಕೊಳ್ಳಬೇಕೆಂದು ನ್ಯಾಯಾಲಯ ಹೇಳಿದೆ. ಗರ್ಭಾವಸ್ಥೆಯ ಅವಧಿಯನ್ನು ಖಚಿತಪಡಿಸಿದ ನಂತರ, ಅಧಿಕಾರಿಗಳು ಸಂತ್ರಸ್ತೆಯ ದೈಹಿಕ ಮತ್ತು ಮಾನಸಿಕ ಸ್ಥಿತಿ, ವೈದ್ಯಕೀಯ ಗರ್ಭಪಾತಕ್ಕೆ ಒಳಗಾಗುವ ಸಾಮರ್ಥ್ಯ, ಆಕೆಯ ಆರೋಗ್ಯ ಮತ್ತು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮದ ಯಾವುದೇ ಅಂಶಗಳನ್ನು ಪರಿಶೀಲಿಸಬೇಕಾಗುತ್ತದೆ ಎಂದು ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.
ಲೈಂಗಿಕ ದೌರ್ಜನ್ಯದ ಸಂತ್ರಸ್ತೆ ಗರ್ಭಿಣಿ ಎಂದು ಕಂಡುಬಂದಲ್ಲಿ, ಮಕ್ಕಳ ಕಲ್ಯಾಣ ಸಮಿತಿ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಪ್ರಕರಣಕ್ಕೆ ಅನುಗುಣವಾಗಿ ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಸಂತ್ರಸ್ತೆಯ ಗರ್ಭಾವಸ್ಥೆಯ ಮುಂದುವರಿಕೆ ಮತ್ತು ಅದರ ಪರಿಣಾಮಗಳು, ವೈದ್ಯಕೀಯ ಗರ್ಭಪಾತದ ಪ್ರಕ್ರಿಯೆಯಂತಹ ಕಾನೂನು ಆಯ್ಕೆಗಳ ಕುರಿತು ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಸದಸ್ಯರಿಗೆ ಸಲಹೆ ನೀಡುವಂತೆ ತನಿಖಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
‘ಅಗತ್ಯವಿದ್ದದ್ದಲ್ಲಿ, ಸೂಕ್ತ ಅನುವಾದಕರನ್ನು ಬಳಸಿಕೊಂಡು ಸಂತ್ರಸ್ತರಿಗೆ ತಿಳಿದಿರುವ ಭಾಷೆಯಲ್ಲಿ ಸಮಾಲೋಚನೆ ನಡೆಸಬೇಕು. ಎಂಟಿಪಿಯನ್ನು ಕೈಗೊಳ್ಳುವ ಸಂದರ್ಭದಲ್ಲಿ, ಭ್ರೂಣದ ಅಂಗಾಂಶದ ಮಾದರಿಗಳನ್ನು ಡಿಎನ್ಎ ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಪರಿಶೀಲನೆಗೆ ಅಗತ್ಯವಿದ್ದರೆ ಹೆಚ್ಚುವರಿ ಮಾದರಿಗಳನ್ನು ಸಂರಕ್ಷಿಸಿಡಬೇಕು. ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರೊಂದಿಗೆ ಸಮಾಲೋಚಿಸಿ, ಡಿಜಿ ಮತ್ತು ಐಜಿಪಿ ಅವರು ಸೂಕ್ತವೆಂದು ಭಾವಿಸುವ ತಜ್ಞರ ಸಮಿತಿಯನ್ನು ರಚಿಸುವ ಮೂಲಕ ವಿವರವಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನವನ್ನು (ಎಸ್ಒಪಿ) ಸಿದ್ಧಪಡಿಸಲು ಮತ್ತು ಅದನ್ನು ಎಲ್ಲ ತನಿಖಾಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಗೆ ತಲುಪಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಮಕ್ಕಳ ಸಂರಕ್ಷಣಾ ಘಟಕಗಳು, ಸರ್ಕಾರಿ ಆಸ್ಪತ್ರೆಗಳು ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲರಿಗೂ ತರಬೇತಿ ಲಭ್ಯವಾಗುವಂತೆ ಮಾಡಬೇಕು. ಪ್ರಸ್ತುತ ಈ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಮದುವೆಯಾಗುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಲಾಗಿತ್ತು. ಗರ್ಭಾವಸ್ಥೆಯ ಅವಧಿ ಮುಗಿದ ಕಾರಣ, ನ್ಯಾಯಾಲಯವು ವೈದ್ಯಕೀಯ ಮಂಡಳಿಯನ್ನು ರಚಿಸಿತ್ತು. ವರದಿಯನ್ನು ಸ್ವೀಕರಿಸಿದ ನಂತರ, ಅಗತ್ಯವಿರುವ ಎಲ್ಲ ಸುರಕ್ಷತೆಗಳನ್ನು ತೆಗೆದುಕೊಳ್ಳುವ ಮೂಲಕ ಎಂಟಿಪಿಯನ್ನು ಕೈಗೊಳ್ಳುವಂತೆ ಸರ್ಕಾರಿ ಸ್ವಾಮ್ಯದ ವಾಣಿ ವಿಲಾಸ ಆಸ್ಪತ್ರೆಯ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

