ಲೇಖನ- ಎನ್. ಬಿ. ಪೂಜಾರಿ.ಉಪನ್ಯಾಸಕರುಶ್ರೀ ಆರ್. ಡಿ. ಪಾಟೀಲ್ ಪಿಯು ಕಾಲೇಜುಸಿಂದಗಿPh: 9972495101
ಉದಯರಶ್ಮಿ ದಿನಪತ್ರಿಕೆ
ಮಾನವನು ಈ ಸಮಾಜದಲ್ಲಿ ಕಲಿತು, ಅನುಭವಿಸಿ ಗಳಿಸಿದ ಅತ್ಯಂತ ಅಮೂಲ್ಯ ಆಸ್ತಿಯೇ ಸಂಸ್ಕೃತಿ. ಹಣ, ಆಸ್ತಿ, ಅಧಿಕಾರ, ಅಂತಸ್ತುಗಳು ಮನುಷ್ಯನ ಬದುಕಿಗೆ ಅಗತ್ಯವಾಗಬಹುದು; ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ ವ್ಯಕ್ತಿಯ ಬದುಕಿಗೆ ಮೌಲ್ಯ, ಘನತೆ ಮತ್ತು ಅರ್ಥವನ್ನು ನೀಡುವುದು ಸಂಸ್ಕೃತಿ. ‘ಸಂಸ್ಕೃತಿ’ ಎಂಬುದು ಒಂದು ನಿರ್ದಿಷ್ಟ ವ್ಯಾಖ್ಯೆಯೊಳಗೆ ಸಂಪೂರ್ಣವಾಗಿ ಹಿಡಿದಿಡಲಾಗದ ವಿರಾಟ ಶಕ್ತಿ. ಅದು ಮನುಷ್ಯನ ವಿಚಾರ, ಆಚಾರ, ನಡೆ-ನುಡಿ, ಮೌಲ್ಯಗಳು ಹಾಗೂ ಬದುಕಿನ ರೀತಿ-ನೀತಿಗಳಲ್ಲಿ ವ್ಯಕ್ತವಾಗುತ್ತದೆ. ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಸಂಸ್ಕೃತಿಯ ಪಾತ್ರ ಅತ್ಯಂತ ಮಹತ್ವದ್ದು. ಮನುಷ್ಯನು ಕೇವಲ ದೈಹಿಕವಾಗಿ ಬೆಳೆಯುವುದರಿಂದ ಪರಿಪೂರ್ಣನಾಗುವುದಿಲ್ಲ; ಆತನಲ್ಲಿ ಮಾನವೀಯ ಮೌಲ್ಯಗಳು, ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿ ಬೆಳೆದಾಗ ಮಾತ್ರ ಆತ ನಿಜವಾದ ಅರ್ಥದಲ್ಲಿ ಮನುಷ್ಯನಾಗುತ್ತಾನೆ.
ನಮ್ಮ ದೇಶದ ಸಂಸ್ಕೃತಿ ವೈವಿಧ್ಯಮಯ ಹಾಗೂ ಶ್ರೀಮಂತವಾದುದು. ಭಾಷೆ, ವೇಷ-ಭೂಷಣ, ಆಹಾರ ಪದ್ಧತಿ, ಆಚಾರ-ವಿಚಾರ, ಹಬ್ಬ-ಹರಿದಿನಗಳು, ಕಲೆ, ಸಾಹಿತ್ಯ, ಪರಂಪರೆ ಹಾಗೂ ಜೀವನಶೈಲಿಯಲ್ಲಿ ಇದರ ವೈಶಿಷ್ಟ್ಯವನ್ನು ಕಾಣಬಹುದು. ಇವು ಕೇವಲ ಆಚರಣೆಗಳಲ್ಲ; ಅವುಗಳ ಹಿಂದೆ ಹಲವು ಮೌಲ್ಯಗಳು ಅಡಗಿವೆ. ಹಿರಿಯರಿಗೆ ಗೌರವ ನೀಡುವುದು, ಕಿರಿಯರನ್ನು ಪ್ರೀತಿಸುವುದು, ಅತಿಥಿಯನ್ನು ಸತ್ಕರಿಸುವುದು, ಪರಸ್ಪರ ಸಹಕಾರದಿಂದ ಬದುಕುವುದು, ಪ್ರಕೃತಿಯನ್ನು ಗೌರವಿಸುವುದು ಹಾಗೂ ಸಮಾಜದ ಒಳಿತನ್ನು ಬಯಸುವುದು ನಮ್ಮ ಸಂಸ್ಕೃತಿಯ ಪ್ರಮುಖ ಅಂಶಗಳಾಗಿವೆ. ಇಂತಹ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಸಂಸ್ಕೃತಿಯು ತನ್ನದೇ ಆದ ಗುಣಲಕ್ಷಣಗಳನ್ನು ಹೊಂದಿದೆ. ಅದು ಎಲ್ಲಾ ಸಮಾಜಗಳಲ್ಲಿಯೂ, ಎಲ್ಲಾ ಕಾಲದಲ್ಲಿಯೂ ಏಕರೂಪವಾಗಿರಬೇಕೆಂದೇನೂ ಇಲ್ಲ. ಕಾಲಕಾಲಕ್ಕೆ ಬದಲಾಗುವ ಪರಂಪರೆ ಹಾಗೂ ಪ್ರಕ್ರಿಯೆಯನ್ನು ಸಂಸ್ಕೃತಿ ಹೊಂದಿರುತ್ತದೆ. ಮನುಷ್ಯನ ಜೀವನಶೈಲಿ ಬದಲಾಗುವಂತೆ ಸಂಸ್ಕೃತಿಯ ಕೆಲವು ರೂಪಗಳೂ ಬದಲಾಗುತ್ತವೆ. ಆದರೆ ಅದರ ಮೂಲ ಮೌಲ್ಯಗಳು ಉಳಿಯಬೇಕು. ಪರಂಪರೆಯಲ್ಲಿರುವ ಉತ್ತಮವಾದುದನ್ನು ಉಳಿಸಿಕೊಂಡು, ಕಾಲಕ್ಕೆ ತಕ್ಕ ಬದಲಾವಣೆಗಳನ್ನು ವಿವೇಕದಿಂದ ಸ್ವೀಕರಿಸುವುದೇ ಆರೋಗ್ಯಕರ ಸಂಸ್ಕೃತಿಯ ಬೆಳವಣಿಗೆ. ಹಳೆಯದೆಲ್ಲ ಒಳ್ಳೆಯದು, ಹೊಸದೆಲ್ಲ ಕೆಟ್ಟದ್ದು ಎಂಬ ಮನೋಭಾವವೂ ಸರಿಯಲ್ಲ; ಹೊಸದೆಲ್ಲ ಶ್ರೇಷ್ಠ, ಹಳೆಯದೆಲ್ಲ ಅನಾವಶ್ಯಕ ಎಂಬ ದೃಷ್ಟಿಕೋನವೂ ಸೂಕ್ತವಲ್ಲ.
ಸಂಸ್ಕೃತಿಯು ಮನುಷ್ಯನ ಬಯಕೆಗಳು, ಆಸೆ-ಆಕಾಂಕ್ಷೆಗಳಿಗೆ ಸರಿಯಾದ ದಿಕ್ಕನ್ನು ನೀಡುತ್ತದೆ. ಸುಖ, ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಬೇಕಾದ ಮೌಲ್ಯಗಳನ್ನು ಕಲಿಸುತ್ತದೆ. ಮುಖ್ಯವಾಗಿ, ಮನುಷ್ಯನ ಅನೇಕ ಚಟುವಟಿಕೆಗಳನ್ನು ಸ್ವಯಂಪ್ರೇರಣೆಯಿಂದ ನಿಯಂತ್ರಿಸುವ ಶಕ್ತಿ ಸಂಸ್ಕೃತಿಗಿದೆ. ಹೊರಗಿನ ಕಾನೂನು ಅಥವಾ ಶಿಕ್ಷೆಯ ಭಯದಿಂದ ತಪ್ಪು ಮಾಡದಿರುವುದಕ್ಕಿಂತ, ತನ್ನ ಅಂತರಂಗದ ಸಂಸ್ಕಾರದಿಂದ ತಪ್ಪು ಮಾಡಬಾರದು ಎಂದು ನಿರ್ಧರಿಸುವ ಗುಣವೇ ಶ್ರೇಷ್ಠ. ಈ ಒಳಗಿನ ಅರಿವು ಮತ್ತು ಆತ್ಮನಿಯಂತ್ರಣವನ್ನು ಬೆಳೆಸುವುದೇ ಸಂಸ್ಕೃತಿಯ ನಿಜವಾದ ಶಕ್ತಿ.
ಹಾಗಾದರೆ ಈ ಸಂಸ್ಕೃತಿ ನಮ್ಮಿಂದ ಏನನ್ನು ಮಾಡಿಸುತ್ತದೆ? ಎಂಬ ಪ್ರಶ್ನೆ ಸಹಜ. ಸಂಸ್ಕೃತಿ ಮಾನವ ಪ್ರಾಣಿಯನ್ನು ಮನುಷ್ಯನನ್ನಾಗಿ ಮಾಡುತ್ತದೆ. ಮಾನವನ ನಡತೆಯನ್ನು ಕ್ರಮಬದ್ಧಗೊಳಿಸಿ, ಆತನನ್ನು ಸಮೂಹ ಜೀವನಕ್ಕೆ ಸಿದ್ಧಗೊಳಿಸುವುದು ಸಂಸ್ಕೃತಿಯ ಪ್ರಮುಖ ಕಾರ್ಯ. ಯಾವ ಬಗೆಯ ಆಹಾರ ಸೇವಿಸಬೇಕು, ಹೇಗೆ ಸೇವಿಸಬೇಕು, ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬೇಕು, ಇತರರೊಂದಿಗೆ ಹೇಗೆ ವರ್ತಿಸಬೇಕು, ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನು ಅದು ಕಲಿಸುತ್ತದೆ. ಇದರ ಮೂಲಕ ವ್ಯಕ್ತಿಯಲ್ಲಿ ಶಿಸ್ತು, ಸಂಯಮ, ವಿನಯ, ಜವಾಬ್ದಾರಿ ಮತ್ತು ಸಹಬಾಳ್ವೆಯ ಗುಣಗಳು ಬೆಳೆಯುತ್ತವೆ.
ಮನುಷ್ಯನು ಒಬ್ಬಂಟಿಯಾಗಿ ಬದುಕುವ ಜೀವಿಯಲ್ಲ. ಆತ ಕುಟುಂಬದ ಸದಸ್ಯ, ಸಮಾಜದ ಒಂದು ಭಾಗ ಮತ್ತು ದೇಶದ ನಾಗರಿಕ. ಹೀಗಾಗಿ ಆತನ ಬದುಕಿನಲ್ಲಿ ಸಾಮಾಜಿಕ ಜವಾಬ್ದಾರಿ ಅತ್ಯಗತ್ಯ. ಇನ್ನೊಬ್ಬರ ನೋವನ್ನು ಅರ್ಥಮಾಡಿಕೊಳ್ಳುವುದು, ಅಗತ್ಯವಿರುವವರಿಗೆ ನೆರವಾಗುವುದು, ಹಿರಿಯರನ್ನು ಗೌರವಿಸುವುದು, ಕಿರಿಯರನ್ನು ಪ್ರೀತಿಯಿಂದ ಕಾಣುವುದು, ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು ಹಾಗೂ ಪರಿಸರವನ್ನು ಸಂರಕ್ಷಿಸುವುದು ಉತ್ತಮ ಸಂಸ್ಕಾರದ ಲಕ್ಷಣಗಳು. ಇವುಗಳನ್ನು ಕೇವಲ ಪುಸ್ತಕ ಓದುವುದರಿಂದ ಕಲಿಯಲು ಸಾಧ್ಯವಿಲ್ಲ. ಬದುಕಿನ ಅನುಭವ, ಕುಟುಂಬದ ವಾತಾವರಣ ಮತ್ತು ಶಿಕ್ಷಣದ ಮೂಲಕ ಇವು ವ್ಯಕ್ತಿಯಲ್ಲಿ ಬೆಳೆದು ಬರುತ್ತವೆ.
ಇಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಣವೆಂದರೆ ಕೇವಲ ಅಂಕಗಳನ್ನು ಗಳಿಸುವುದು, ಪದವಿ ಪಡೆಯುವುದು ಅಥವಾ ಉದ್ಯೋಗಕ್ಕೆ ಅರ್ಹತೆ ಹೊಂದುವುದು ಮಾತ್ರವಲ್ಲ. ಶಿಕ್ಷಣವು ವ್ಯಕ್ತಿಯ ಬುದ್ಧಿಯನ್ನು ಬೆಳೆಸುವುದರ ಜೊತೆಗೆ ಆತನ ಮನಸ್ಸನ್ನೂ ಸಂಸ್ಕರಿಸಬೇಕು. ಜ್ಞಾನವಿರುವ ವ್ಯಕ್ತಿಗೆ ಆ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸುವ ವಿವೇಕವಿರಬೇಕು. ವಿದ್ಯೆಯೊಂದಿಗೆ ವಿನಯ, ಜ್ಞಾನದೊಂದಿಗೆ ಜವಾಬ್ದಾರಿ, ಸಾಮರ್ಥ್ಯದೊಂದಿಗೆ ಮಾನವೀಯತೆ ಸೇರಿದಾಗ ಮಾತ್ರ ಶಿಕ್ಷಣ ಸಾರ್ಥಕವಾಗುತ್ತದೆ. ಆದ್ದರಿಂದ ಶಿಕ್ಷಣದ ಗುರಿ ಕೇವಲ ವಿದ್ಯಾವಂತರನ್ನು ಸೃಷ್ಟಿಸುವುದಾಗಿರದೆ, ಸುಸಂಸ್ಕೃತ ನಾಗರಿಕರನ್ನು ರೂಪಿಸುವುದಾಗಿರಬೇಕು.
ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಮನುಷ್ಯನ ಬದುಕಿನಲ್ಲಿ ಮಹತ್ತರ ಬದಲಾವಣೆ ತಂದಿದೆ. ಮೊಬೈಲ್, ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳು ಜಗತ್ತನ್ನು ನಮ್ಮ ಕೈಗೆ ತಂದಿವೆ. ಆದರೆ ತಂತ್ರಜ್ಞಾನವನ್ನು ಬಳಸುವ ವಿವೇಕ ಇಲ್ಲದಿದ್ದರೆ ಅದು ಮಾನವೀಯ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಒಂದೇ ಮನೆಯಲ್ಲಿರುವವರು ಪರಸ್ಪರ ಮಾತನಾಡುವುದಕ್ಕಿಂತ ಮೊಬೈಲ್ನಲ್ಲಿ ಹೆಚ್ಚು ತೊಡಗಿಕೊಳ್ಳುವ ಪರಿಸ್ಥಿತಿಯೂ ಇದೆ. ಹೀಗಾಗಿ ತಂತ್ರಜ್ಞಾನವನ್ನು ತಿರಸ್ಕರಿಸುವ ಅಗತ್ಯವಿಲ್ಲ; ಅದನ್ನು ಮಿತವಾಗಿ, ಜವಾಬ್ದಾರಿಯಿಂದ ಮತ್ತು ವಿವೇಕದಿಂದ ಬಳಸುವ ಸಂಸ್ಕಾರವನ್ನು ಬೆಳೆಸಬೇಕಾಗಿದೆ.

ವಿಪರ್ಯಾಸವೆಂದರೆ, ಸಂಸ್ಕೃತಿಯನ್ನು ಹೊಂದಿರುವ ಸುಸಂಸ್ಕೃತರೆಂದು ಕರೆಸಿಕೊಳ್ಳುವ ನಾವುಗಳೇ ಕೆಲವೊಮ್ಮೆ ಸಂಸ್ಕೃತಿಯ ಮೂಲ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತೇವೆ. ನಮ್ಮ ಸಂಸ್ಕೃತಿಯೇ ಶ್ರೇಷ್ಠ, ಮತ್ತೊಬ್ಬರ ಸಂಸ್ಕೃತಿ ಕೀಳು ಎಂಬ ಮನೋಭಾವ ಸಂಸ್ಕೃತಿಯ ಲಕ್ಷಣವಲ್ಲ. ನಿಜವಾದ ಸಂಸ್ಕೃತಿ ತನ್ನ ಸಂಸ್ಕೃತಿಯನ್ನು ಗೌರವಿಸುವುದರ ಜೊತೆಗೆ ಇತರರ ಸಂಸ್ಕೃತಿಯನ್ನೂ ಗೌರವಿಸಲು ಕಲಿಸುತ್ತದೆ. ಬಲವಂತವಾಗಿ ಒಂದು ಸಂಸ್ಕೃತಿಯ ಜನರನ್ನು ಇನ್ನೊಂದು ಸಂಸ್ಕೃತಿಗೆ ಒಗ್ಗಿಸುವುದು ಸಂಸ್ಕೃತಿಯ ಬೆಳವಣಿಗೆಯಲ್ಲ. ಸಂಸ್ಕೃತಿ ಪ್ರೀತಿ, ಗೌರವ, ಅನುಭವ ಮತ್ತು ಸ್ವೀಕಾರದ ಮೂಲಕ ಸಹಜವಾಗಿ ಬೆಳೆಯಬೇಕು. ಇಲ್ಲದಿದ್ದರೆ ಸಂಸ್ಕೃತಿಯಿಂದ ಪಕ್ವಗೊಂಡ ಭಾವನೆಯ ಹಣ್ಣುಗಳು ಸಂಸ್ಕರಿಸಲ್ಪಡದೆ ಕೊಳೆತುಹೋಗುವ ಸಾಧ್ಯತೆ ಇದೆ.
ನಮ್ಮ ದೇಶದ ಸಂಸ್ಕೃತಿ ವಿಶಿಷ್ಟವಾದುದು ಮತ್ತು ಶ್ರೇಷ್ಠವಾದುದು. ನಮ್ಮ ವೇಷ-ಭೂಷಣ, ಭಾಷೆ, ಆಚಾರ-ವಿಚಾರ ಮುಂತಾದವುಗಳು ಅದರ ಪ್ರತೀಕಗಳಾಗಿವೆ. ಆದರೆ ಅವುಗಳನ್ನು ಕೇವಲ ಹೊರಗಿನ ಆಚರಣೆಗಳಿಗೆ ಸೀಮಿತಗೊಳಿಸದೆ, ಅವುಗಳ ಹಿಂದಿರುವ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ಪ್ರಕೃತಿಯನ್ನು ಪೂಜಿಸುವುದರ ಜೊತೆಗೆ ಅದನ್ನು ಸಂರಕ್ಷಿಸಬೇಕು. ಹಿರಿಯರಿಗೆ ಗೌರವ ನೀಡುವುದರ ಜೊತೆಗೆ ಅವರ ಅನುಭವದಿಂದ ಕಲಿಯಬೇಕು. ಹಬ್ಬಗಳನ್ನು ಆಚರಿಸುವುದರ ಜೊತೆಗೆ ಅವುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಸಂಸ್ಕೃತಿಯ ಮೊದಲ ಪಾಠಶಾಲೆ ಕುಟುಂಬ. ಮಕ್ಕಳು ತಂದೆ-ತಾಯಿ ಮತ್ತು ಹಿರಿಯರನ್ನು ನೋಡಿ ಕಲಿಯುತ್ತಾರೆ. ನಾವು ಮಕ್ಕಳಿಗೆ ಏನು ಹೇಳುತ್ತೇವೆ ಎನ್ನುವುದಕ್ಕಿಂತ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದು ಅವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಮನೆಯಲ್ಲಿ ಪ್ರೀತಿ, ಗೌರವ, ಶಿಸ್ತು, ಸಹಕಾರ ಮತ್ತು ಮಾನವೀಯತೆಯ ವಾತಾವರಣ ನಿರ್ಮಾಣವಾದರೆ ಮಕ್ಕಳು ಸಹಜವಾಗಿಯೇ ಉತ್ತಮ ಸಂಸ್ಕಾರವನ್ನು ಪಡೆದುಕೊಳ್ಳುತ್ತಾರೆ. ಶಾಲೆ ಮತ್ತು ಕಾಲೇಜುಗಳು ಈ ಸಂಸ್ಕಾರಕ್ಕೆ ಜ್ಞಾನ ಹಾಗೂ ಸಾಮಾಜಿಕ ಜವಾಬ್ದಾರಿಯ ಆಯಾಮವನ್ನು ಸೇರಿಸಬೇಕು.
ಮನುಕುಲದ ಉದ್ಧಾರಕ್ಕಾಗಿ, ವಿಶ್ವಕಲ್ಯಾಣಕ್ಕಾಗಿ ಹಾಗೂ ಪ್ರಕೃತಿಯ ಸಂರಕ್ಷಣೆಗಾಗಿ ಶಿಕ್ಷಣ ಮತ್ತು ಸಂಸ್ಕೃತಿ ಪರಸ್ಪರ ಕೈಜೋಡಿಸಬೇಕು. ಶಿಕ್ಷಣ ಮನುಷ್ಯನಿಗೆ ಏನು ತಿಳಿಯಬೇಕು ಎಂಬುದನ್ನು ಕಲಿಸಿದರೆ, ಸಂಸ್ಕೃತಿ ಹೇಗೆ ಬದುಕಬೇಕು ಎಂಬುದನ್ನು ಕಲಿಸುತ್ತದೆ. ಜ್ಞಾನಕ್ಕೆ ವಿವೇಕ, ವಿದ್ಯೆಗೆ ವಿನಯ ಮತ್ತು ಬದುಕಿಗೆ ಮಾನವೀಯತೆ ಸೇರಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ.

ಹೀಗಾಗಿ ಸಂಸ್ಕೃತಿಯ ಶಿಕ್ಷಣವೆಂದರೆ ಕೇವಲ ನಮ್ಮ ಪರಂಪರೆಯನ್ನು ತಿಳಿದುಕೊಳ್ಳುವುದಲ್ಲ. ಅದರಲ್ಲಿರುವ ಉತ್ತಮ ಮೌಲ್ಯಗಳನ್ನು ಅರಿತು, ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಮುಂದಿನ ಪೀಳಿಗೆಗೆ ಅರ್ಥಪೂರ್ಣವಾಗಿ ತಲುಪಿಸುವ ಜವಾಬ್ದಾರಿಯೂ ಹೌದು. ಮನುಷ್ಯನನ್ನು ಕೇವಲ ವಿದ್ಯಾವಂತನನ್ನಾಗಿ ಮಾಡುವ ಶಿಕ್ಷಣಕ್ಕಿಂತ, ವಿವೇಕವಂತ, ಜವಾಬ್ದಾರಿಯುತ, ಮಾನವೀಯ ಮತ್ತು ಸುಸಂಸ್ಕೃತ ವ್ಯಕ್ತಿಯನ್ನಾಗಿ ರೂಪಿಸುವ ಶಿಕ್ಷಣವೇ ನಿಜವಾದ ಶಿಕ್ಷಣ. ಸಂಸ್ಕೃತಿಯು ಮನುಷ್ಯನನ್ನು ಮನುಷ್ಯನಾಗಿ ಬದುಕಲು ಪ್ರೇರೇಪಿಸುವ ದಿವ್ಯಶಕ್ತಿ. ಆ ಶಕ್ತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.


