ಸಂಪೂರ್ಣ ಜಿಲ್ಲೆ ಬರ ಘೋಷಣೆಗೆ ಆಗ್ರಹಿಸಿ ವಿಜಯಪುರದಲ್ಲಿ ನಡೆಯುತ್ತಿದ್ದ ಧರಣಿ ಸತ್ಯಾಗ್ರಹ | ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೬-೨೭ ನೇ ಸಾಲಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಮಳೆ ಆಗದೇ ನಷ್ಟಗೊಂಡಿರುವ ರೈತರಿಗೆ ನ್ಯಾಯಯುತ ಪರಿಹಾರ ಸಿಗುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಅಂಬೇಡ್ಕರ ವೃತ್ತದಲ್ಲಿ ಕಳೆದ ೧೩ ದಿನಗಳಿಂದ ನಡೆಯುತ್ತಿರುವ ಹೋರಾಟದ ವೇದಿಕೆಗೆ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಮಹಾಂತೇಶ ಬಿರಾದಾರ ಅವರು ಧರಣಿ ನಿರತ ವೇದಿಕೆಯಲ್ಲಿ ರೈತರೊಂದಿಗೆ ಸುದಿರ್ಘ ಚರ್ಚೆ ನಡೆಸಿದರು.
ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ ಪಾಟೀಲರ ಜೊತೆ ದೂರುವಾಣಿಯಲ್ಲಿ ರೈತ ಮುಖಂಡರೊಡನೆ ಮಾತನಾಡಿಸಿ, ಕಳೆದ ಕೆಲವು ದಿನಗಳಿಂದ ಈ ವೇದಿಕೆಯಲ್ಲಿ ರೈತರೊಂದಿಗೆ ಹೋರಾಟ ಮಾಡುತ್ತಿರುವುದು ನಮ್ಮ ಗಮನಕ್ಕೂ ಹಾಗೂ ಸರಕಾರದ ಗಮನಕ್ಕೂ ಇದೆ, ಜಿಲ್ಲೆಯ ವಿವಿಧ ತಾಲೂಕಿನ ಹಳ್ಳಿಗಳಲ್ಲಿ ರೈತರ ಜಮೀನುಗಳಿಗೆ ಜಿಲ್ಲಾಧಿಕಾರಿಗಳು ಇನ್ನಿತರ ಅಧಿಕಾರಿಗಳೊಡನೆ ವೀಕ್ಷಣೆ ಮಾಡಿದ್ದೆನೆ, ಮಳೆ ಆಗದೇ ರೈತರು ಸಾಕಷ್ಟು ನಷ್ಟ ಆಗಿರುವುದನ್ನು ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಗಮನಕ್ಕೆ ತಂದಿದ್ದೇನೆ, ನಾನು ಮತ್ತು ನಮ್ಮ ಸರ್ಕಾರ ಯಾವಾಗಲೂ ರೈತರ ಪರ ಇದ್ದೇವೆ, ಜಿಲ್ಲೆಯ ೧೩ ತಾಲೂಕುಗಳನ್ನು ಸಂಪೂರ್ಣ ಬರ ಎಂದು ಘೋಷಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ಭರವಸೆ ವ್ಯಕ್ತಪಡಿಸಿ ಹೋರಾಟ ಹಿಂಪಡೆಯಲು ವಿನಂತಿಸಿದರು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ರೈತ ಸಂಘದ ಮುಖಂಡರೊಡನೆ ಮಾತನಾಡಿ, ಈ ಹೋರಾಟವನ್ನು ಉಸ್ತುವಾರಿ ಸಚಿವರ ಭರವಸೆಯ ಮೆರೆಗೆ ತಾತ್ಕಾಲಿಕವಾಗಿ ಹಿಂಪಡೆಯುತ್ತೆವೆ, ಒಂದು ವೇಳೆ ಮುಂದಿನ ೧೦ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಸಂಪೂರ್ಣ ಬರ ಘೋಷಣೆ ಮಾಡಬೇಕು, ಇಲ್ಲದಿದ್ದಲ್ಲಿ ನಮ್ಮ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರು ಹೇಳಿರುವಂತೆ ೨೫೦೦೦ ರೈತರೊಂದಿಗೆ ಸೋಲ್ಲಾಪುರ- ಬೆಂಗಳೂರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟ ಮಾಡಲಾಗುವುದು. ಆ ಸಂದರ್ಭದಲ್ಲಿ ತಾವೂ ಕೂಡಾ ನಮ್ಮ ಜೊತೆ ಹೋರಾಟದಲ್ಲಿ ಪಾಲ್ಗೋಳ್ಳಬೇಕು ಅಂದರು.
ಜಿಲ್ಲೆಯ ಎಲ್ಲಾ ೧೩ ತಾಲೂಕುಗಳನ್ನು ಬರಗಾಲ ಘೊಷಣೆ ಮಾಡಬೇಕು, ಪ್ರತಿ ಎಕರೆಗೆ ೫೦ ಸಾವಿರ ಪರಿಹಾರ ನೀಡಬೇಕು, ವಿಮೆ ತುಂಬಿದ ಎಲ್ಲಾ ರೈತರಿಗೆ ೫೦ ಪ್ರತಿಶತ ಮಧ್ಯಂತರ ಪರಿಹಾರ ನೀಡಬೇಕು, ಜಿಲ್ಲೆಯ ಎಲ್ಲಾ ಹಳ್ಳಕೊಳ್ಳ ಕೆರೆ ಕಾಲುವೆಗಳನ್ನು ತುಂಬಿಸಬೇಕು, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಬೇಕು, ಜೊತೆಗೆ ನಿರುದ್ಯೋಗಿ ಕೃಷಿ ಕಾರ್ಮಿಕರಿಗೆ ವಿ.ಜಿ.ರಾಮಜೀ ಅಡಿಯಲ್ಲಿ ೨೦೦ ದಿನಗಳ ಕೆಲಸ ನಿಡಬೇಕು ಎಂದು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಹೇಳಿದರು.
ಈ ವೇಳೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಮಹದೇವ ಬನಸೋಡೆ, ಜಿಲ್ಲಾ ಉಪಾಧ್ಯಕ್ಷ ಸಂಗಪ್ಪ ಟಕ್ಕೆ, ಅಂಬರೇಶ ಭೈರಗೊಂಡ, ಲಾಯಪ್ಪ ಇಂಗಳೆ ಸೇರಿದಂತೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಸೇರಿದಂತೆ ಉಪ ಪೋಲಿಸ ಅಧೀಕ್ಷಕರಾದ ನಾಗರಾಜ ಹಾಗೂ ಪೋಲಿಸ ಇಲಾಖೆಯ ನಗರ ಠಾಣೆಯ ಪಿ.ಎಸ್.ಐ ದೇವರಾಜ ಉಳ್ಳಾಗಡ್ಡಿ ಇತರರು ಇದ್ದರು

