ಮುದ್ದೇಬಿಹಾಳದ ಚಿಣ್ಣರ ಲೋಕದಲ್ಲಿ ವಿಘ್ನನಿವಾರಕ | ಆಡಂಬರವಿಲ್ಲದ ಭಕ್ತಿಗೆ ಬೆರಗಾದ ಬಡಾವಣೆ
ಉದಯರಶ್ಮಿ ದಿನಪತ್ರಿಕೆ
ವರದಿ: ಚೇತನ ಶಿವಶಿಂಪಿ
ಮುದ್ದೇಬಿಹಾಳ: ದುಬಾರಿ ಬಜೆಟ್ ಇಲ್ಲ, ಕಿವಿಯೊಡೆಯುವ ಡಿಜೆ ಸೌಂಡ್ ಬಾಕ್ಸ್ಗಳಿಲ್ಲ, ರಾಜಕೀಯ ನಾಯಕರ ಬೃಹತ್ ಕಟೌಟ್ಗಳ ಅಬ್ಬರವೂ ಇಲ್ಲ. ಕೈಯಲ್ಲಿದ್ದ ಚಿಲ್ಲರೆ ಕಾಸು, ಬಣ್ಣದ ಕಾಗದಗಳು, ಹಳೆಯ ರಟ್ಟು ಮತ್ತು ಎದೆಯಾಳದ ಮುಗ್ಧ ಭಕ್ತಿಯನ್ನೇ ಬಂಡವಾಳವಾಗಿಸಿಕೊಂಡು ಪುಟ್ಟ ಮಕ್ಕಳು ಪ್ರತಿಷ್ಠಾಪಿಸಿರುವ ಗಣೇಶನ ಎದುರು ಇಡೀ ಬಡಾವಣೆಯೇ ಕೈಮುಗಿದು ನಿಂತಿತ್ತು. ಹಬ್ಬದ ಹೆಸರಿನಲ್ಲಿ ಕೋಟಿ ಕೋಟಿ ಹಣ ಹರಿಯುವ ಇಂದಿನ ದಿನಗಳಲ್ಲಿ, ಮಕ್ಕಳ ಈ ಪುಟ್ಟ ಗಣೇಶೋತ್ಸವ ಹಬ್ಬದ ಅಸಲಿ ಸಡಗರ ಮತ್ತು ಅರ್ಥವನ್ನು ಸದ್ದಿಲ್ಲದೆ ಸಾರಿದೆ ಪಟ್ಟಣದ ವಿದ್ಯಾನಗರದ ಹನುಮಾನ್ ದೇವಸ್ಥಾನದ ಬಳಿ ಪ್ರತಿಷ್ಟಾಪಿಸಲಾದ ಗಣಪ.
ತಿಂಡಿ ತಿನ್ನಲು ಅಪ್ಪ-ಅಮ್ಮ ಕೊಡುತ್ತಿದ್ದ ಐದು-ಹತ್ತು ರೂಪಾಯಿಗಳ ನಾಣ್ಯಗಳನ್ನು ತಿಂಗಳುಗಟ್ಟಲೆ ಮಣ್ಣಿನ ಹುಂಡಿಯಲ್ಲಿ ಕೂಡಿಟ್ಟಿದ್ದ ಪುಟಾಣಿ ಸೇನೆ, ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಕಾರ್ಯಪ್ರವೃತ್ತವಾಗಿತ್ತು. ಶಾಲೆ ಮುಗಿದ ತಕ್ಷಣ ಆಟವಾಡುವುದನ್ನು ಬಿಟ್ಟು, ಗಣೇಶನನ್ನು ಪ್ರತಿಷ್ಟಾಪಿಸುವ ಸ್ಥಳವನ್ನು ಸ್ವಚ್ಛಗೊಳಿಸಿದ್ದೇ ಗೊಳಿಸಿದ್ದು. ಗಿಡ-ಗಂಟಿ, ಮುಳ್ಳು ಕಲ್ಲುಗಳು ಇವರಿಗೆ ಲೆಕ್ಕಕ್ಕಿಲ್ಲ. ಹಾಗೋ ಹೀಗೋ ಮಾಡಿ ಸ್ಥಳವನ್ನು ಸ್ವಚ್ಛಗೊಳಿಸಿ, ಹತ್ತಿರದಲ್ಲಿ ಮನೆ ಕಟ್ಟುತ್ತಿದ್ದವರ ಬಳಿ ೪ ಬಂಬೂಗಳನ್ನೂ ತಂದೇ ಬಿಟ್ಟರು. ಹಳೆಯ ಸೀರೆ, ಮಾವಿನ ತಳಿರು ತೋರಣ ಮತ್ತು ರಟ್ಟಿನ ಪೆಟ್ಟಿಗೆಗಳಿಂದ ಸುಂದರವಾದ ಮಂಟಪ ಸಿದ್ಧಪಡಿಸಿದರು. ಅಲ್ಲಲ್ಲಿ ಮನೆಗಳಿಗೆ ತೆರಳಿ ಪಟ್ಟಿ ಎತ್ತಿ ಅದಕ್ಕೆ ತಮ್ಮ ಉಳಿತಾಯದ ಹಣವನ್ನು ಸೇರಿಸಿ ಗಣೇಶನನ್ನು ತಂದು ಪ್ರತಿಷ್ಠಾಪಿಸಿಯೇಬಿಟ್ಟರು ಚಿಣ್ಣರಾದ ಶ್ರೇಯಸ್, ಸಾನ್ವಿ, ಜ್ಯೋತಿ, ಸತ್ವಿಕ, ಆರುಶ್, ನಿತ್ಯಾ, ಆರಾಧ್ಯ, ಸನ್ನಿಧಿ, ತನ್ವಿಕಾ, ಐಶ್ವರ್ಯ, ಐಶಿರಿ, ವಿರೇಶ, ಪೃಥ್ವಿ, ಅಭಯ, ಚಿದಾನಂದ, ಶ್ರೀಕಾಂತ, ಅಜಿತಾ, ಸಮಸ್ವಿ, ಸಾಹಿತ್ಯ.
ಇಲ್ಲಿ ಪೂಜೆಗೂ ಯಾವುದೇ ಕೃತಕತೆಯ ಸೋಂಕಿಲ್ಲ. ಅಡುಗೆಮನೆಯಿಂದ ಅಮ್ಮನಿಗೆ ಹೇಳಿ ತಂದ ಸಕ್ಕರೆ, ಪುಟಾಣಿ ಈ ಗಣಪನಿಗೆ ಪರಮ ತೃಪ್ತಿಯ ನೈವೇದ್ಯ. ಮತ್ತು ನೆರೆಹೊರೆಯ ಮನೆಗಳಿಂದ ಕಿತ್ತು ತಂದ ದಾಸವಾಳದ ಹೂವುಗಳೇ ಗಣಪನಿಗೆ ವಿಶೇಶ ಅಲಂಕಾರ. ಕೈಯಲ್ಲಿ ಪುಟ್ಟ ತಟ್ಟೆಯನ್ನ ಹಿಡಿದು, ತಪ್ಪು-ತಪ್ಪಾಗಿಯೇ ಗಂಟೆ ಬಾರಿಸುತ್ತಾ ಮುಗ್ಧ ಸ್ವರದಲ್ಲಿ ಗಣಪತಿ ಭಪ್ಪಾ ಮೋರಯ್ಯಾ..ಪುಂಡೆ ಪಲ್ಲೆ ಸೋರಯ್ಯಾ ಎಂದು ಜಯಘೋಷ ಹಾಕುತ್ತಾ ಹಿಡಿದ ಆರತಿಯ ದೃಶ್ಯ ನೋಡುಗರನ್ನು ಮಂತ್ರಮುಗ್ಧಗೊಳಿಸಿತ್ತು.
ದೊಡ್ಡ ದೊಡ್ಡ ಮಂಟಪಗಳ ಅಬ್ಬರದ ನಡುವೆ, ಮಕ್ಕಳ ಎಳೆಯ ಹೃದಯಗಳ ಮುಗ್ಧತೆಯೇ ದೇವರಿಗೆ ಅತ್ಯಂತ ಪ್ರಿಯವೆಂಬಂತೆ ಈ ಪುಟ್ಟ ವಿನಾಯಕ ಕಂಗೊಳಿಸುತ್ತಿದ್ದಾನೆ. ಮಕ್ಕಳ ಈ ಅಪೂರ್ವ ಪ್ರಯತ್ನವನ್ನು ಕಂಡು ಹಿರಿಯರು ಹೆಮ್ಮೆಯಿಂದ ಬೆನ್ನುತಟ್ಟುತ್ತಿದ್ದು, ಅಕ್ಕಪಕ್ಕದ ಮನೆಯವರು ಪ್ರೀತಿಯಿಂದ ಭಾಗಿಯಾಗಿ ನೈವೇದ್ಯ ಅರ್ಪಿಸಿ ಮಕ್ಕಳ ಉತ್ಸಾಹಕ್ಕೆ ಸಾಥ್ ನೀಡಿದ್ದಾರೆ. ಆಡಂಬರವಿಲ್ಲದ ಈ ಪುಟ್ಟ ಗಣೇಶ ಇಡೀ ಪರಿಸರಕ್ಕೆ ಶುದ್ಧ ಪ್ರೀತಿ, ಶಾಂತಿ ಮತ್ತು ಹಬ್ಬದ ನೈಜ ಆನಂದದ ಬೆಳಕನ್ನು ಚೆಲ್ಲಿದ್ದಾನೆ.
“ಇಂದಿನ ಮಕ್ಕಳು ಮೊಬೈಲ್, ಗೇಮ್ಸ್ ಅಂತ ಕಳೆದುಹೋಗಿರುವಾಗ, ನಮ್ಮ ಬಡಾವಣೆಯ ಮಕ್ಕಳೆಲ್ಲ ಒಟ್ಟಾಗಿ ಇಂಥದೊಂದು ಸುಂದರ ಕೆಲಸ ಮಾಡಿದ್ದು ನೋಡಿ ನಿಜಕ್ಕೂ ಕಣ್ಣು ತುಂಬಿ ಬಂತು. ಒಗ್ಗಟ್ಟು, ಸಹಬಾಳ್ವೆ ಮತ್ತು ಸಂಸ್ಕೃತಿಯನ್ನು ಅವರು ಯಾವ ಪಠ್ಯಪುಸ್ತಕಗಳ ಹಂಗಿಲ್ಲದೆ ತಾವೇ ಕಲಿತುಕೊಂಡಿದ್ದಾರೆ. ಮಕ್ಕಳ ಈ ನಿಸ್ವಾರ್ಥ ಆಚರಣೆ ದೊಡ್ಡವರಿಗೇ ಒಂದು ಮಾದರಿ.”
– ಬಿ.ವಾಯ್.ಮೇಟಿ ಬಡಾವಣೆಯ ನಿವಾಸಿ

