ಕಡಪಟ್ಟಿ ಪವಾಡ ಬಸವೇಶ್ವರ ಜಾತ್ರೆಯಲ್ಲಿ ಭಕ್ತಿ–ಶ್ರದ್ಧೆಯ ವೈಭವ | ಸಾವಿರಾರು ಭಕ್ತರಿಂದ ಸೇವೆ, ಸಮರ್ಪಣೆ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಶ್ರಾವಣ ಮಾಸದ ಕೊನೆಯ ಸೋಮವಾರದ ನಂತರ ಸಮೀಪದ ಕಡಪಟ್ಟಿ ಗ್ರಾಮದಲ್ಲಿ ಪವಾಡ ಬಸವೇಶ್ವರ ಜಾತ್ರಾ ಮಹೋತ್ಸವವು ಭಕ್ತಿ, ಶ್ರದ್ಧೆ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಕರ್ನಾಟಕದಲ್ಲೇ ಅಪರೂಪ ಎನ್ನಬಹುದಾದ ಚಕ್ರ ರಹಿತ ಜೋಡು ಬಸವಣ್ಣನ ರಥೋತ್ಸವ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, ಭಕ್ತರು ತಮ್ಮ ಹೆಗಲ ಮೇಲೆ ರಥವನ್ನು ಹೊತ್ತು ಸಾಗಿಸುವ ಮೂಲಕ ವಿಶಿಷ್ಟ ಭಕ್ತಿ ಪರಂಪರೆಯನ್ನು ಮುಂದುವರಿಸಿದರು.
ಜಾತ್ರೆಯ ಅಂಗವಾಗಿ ಮುಂಜಾನೆ ಕಡಪಟ್ಟಿ ಗ್ರಾಮದಿಂದ ದೇವರ ಕಳಸವು ಸಕಲ ವಾದ್ಯಮೇಳಗಳೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಸಾಗಿ ಶ್ರೀ ಪವಾಡ ಬಸವೇಶ್ವರ ದೇವಸ್ಥಾನ ತಲುಪಿತು. ದೇವಸ್ಥಾನದಲ್ಲಿ ಭಕ್ತರ ಸಮ್ಮುಖದಲ್ಲಿ ಕಳಸಾರೋಹಣ ನೆರವೇರಿಸಲಾಯಿತು. ಬಳಿಕ ಮಧ್ಯಾಹ್ನ 1 ಗಂಟೆಗೆ ಪುಷ್ಪಾಲಂಕಾರ ರಥೋತ್ಸವ ಹಾಗೂ ಸಂಜೆ 7 ಗಂಟೆಗೆ ದೀಪಾಲಂಕಾರ ರಥೋತ್ಸವ ಭಕ್ತರ ಗಮನ ಸೆಳೆಯಿತು.
ಐತಿಹಾಸಿಕ ಹಿನ್ನೆಲೆಯ ಪವಾಡ ಬಸವಣ್ಣ: ಕಡಪಟ್ಟಿಯ ಪವಾಡ ಬಸವೇಶ್ವರ ದೇವಸ್ಥಾನವು ಪುರಾತನ ಕಾಲದಿಂದಲೂ ಈ ಭಾಗದ ಜನರ ಆರಾಧನಾ ಕೇಂದ್ರವಾಗಿ ಗುರುತಿಸಿಕೊಂಡಿದೆ. ‘ಕಡಪಟ್ಟಿ ಬಸವಣ್ಣ’ ಎಂದೇ ಪ್ರಸಿದ್ಧಿ ಪಡೆದಿರುವ ದೇವಸ್ಥಾನಕ್ಕೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ವಿವಿಧ ಭಾಗಗಳಿಂದಲೂ ಭಕ್ತರು ಆಗಮಿಸಿ ದರ್ಶನ ಪಡೆದು ಹರಕೆ ತೀರಿಸುತ್ತಾರೆ.
ಬಸವಣ್ಣನ ಪವಾಡಗಳ ಕುರಿತು ಹಲವು ಜನಪದ ಕಥೆಗಳು ಹಾಗೂ ಗೀತೆಗಳು ಇಂದಿಗೂ ಈ ಭಾಗದಲ್ಲಿ ಪ್ರಚಲಿತದಲ್ಲಿವೆ. ಇದೇ ಕಾರಣಕ್ಕೆ ‘ಕಡಪಟ್ಟಿ ಪವಾಡ ಬಸವಣ್ಣ’ ಎಂಬ ಹೆಸರಿನಿಂದ ಈ ಕ್ಷೇತ್ರ ಪ್ರಸಿದ್ಧಿ ಪಡೆದಿದೆ. ಈ ಪವಾಡಗಳ ಕಥನಗಳು ಸ್ಥಳೀಯ ಜನಪದ ಪರಂಪರೆಯ ಭಾಗವಾಗಿ ತಲೆಮಾರುಗಳಿಂದ ಮುಂದುವರಿದು ಬಂದಿವೆ.
ಸಾವಿರಾರು ಭಕ್ತರಿಗೆ ಅನ್ನದಾಸೋಹ: ಜಾತ್ರೆಗೆ ಆಗಮಿಸಿದ ಸಾವಿರಾರು ಭಕ್ತರಿಗೆ ದೇವಸ್ಥಾನದ ವತಿಯಿಂದ ಹಾಗೂ ಭಕ್ತರ ಸಹಕಾರದಿಂದ ಅನ್ನದಾಸೋಹ ಏರ್ಪಡಿಸಲಾಗಿತ್ತು. ದೂರದ ಊರುಗಳಿಂದ ಆಗಮಿಸಿದ ಭಕ್ತರು ದರ್ಶನ ಪಡೆದು, ರಥೋತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಬೆಳಗ್ಗಿನಿಂದಲೇ ದೇವಸ್ಥಾನದ ಸುತ್ತಮುತ್ತ ಭಕ್ತರ ಸಂಚಾರ ಹೆಚ್ಚಾಗಿದ್ದು, ವಾದ್ಯಮೇಳಗಳ ನಾದ, ಭಜನೆ, ಜಯಘೋಷ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದ ಕಡಪಟ್ಟಿ ಗ್ರಾಮವು ಹಬ್ಬದ ವಾತಾವರಣದಲ್ಲಿ ಕಂಗೊಳಿಸಿತು.
ಜಾತ್ರೆಯು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಕಡಪಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರನ್ನು ಒಂದೆಡೆ ಸೇರಿಸುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಭ್ರಮವಾಗಿಯೂ ರೂಪುಗೊಂಡಿತು. ಹಿರಿಯರು ಸಂಪ್ರದಾಯವನ್ನು ಮುಂದುವರಿಸಿದರೆ, ಯುವಕರು ಉತ್ಸಾಹದಿಂದ ಜಾತ್ರಾ ವ್ಯವಸ್ಥೆ ಹಾಗೂ ರಥೋತ್ಸವದಲ್ಲಿ ಕೈಜೋಡಿಸಿದ್ದು ವಿಶೇಷವಾಗಿತ್ತು.
ಜಾತ್ರಾ ಮಹೋತ್ಸವದಲ್ಲಿ ಊರಿನ ಗಣ್ಯರಾದ ಶ್ರೀಕಾಂತ ರಾಮದುರ್ಗ, ಬಸಯ್ಯ ಕಡಕೋಳ, ಬಸಯ್ಯ ಮಠಪತಿ, ಸಿದ್ದರಾಮ ಬಗರನಾಳ, ಮಹಾಲಿಂಗ ರಾಮದುರ್ಗ, ರಾಜು ಜಿಡ್ಡಿಮನಿ, ಜಗದೀಶ ಮಾಳಿ, ಬಸವರಾಜ ಜಾಲಿಬೇರಿ, ಜಗದೀಶ ಬೆಳಗಲಿ, ಮಹಾಲಿಂಗ ಜಂಬಗಿ, ಜಕ್ಕಪ್ಪ ಜಿಡ್ಡಿಮನಿ, ಮಾಂತೇಶ್ ಬೆಳಗಲಿ, ಮಂಜುನಾಥ ನ್ಯಾಮಗೌಡ, ಮಲ್ಲಪ್ಪ ಜಾಲಿಬೇರಿ, ಗಿರೀಶ್ ಜಾಲಿಬೇರಿ, ಪ್ರಭು ಧಾರಣಿ, ಮುತ್ತಪ್ಪ ಧಾರಣಿ, ಸದಾಶಿವ ಮಡಿವಾಳರ, ಜಕ್ಕಪ್ಪ ಮೆಂಡಿಗೇರಿ, ಶಂಕರ ಪೂಜಾರಿ, ಕೈಲಾಸ ಬಗರಾಳ, ರವಿ ಮುಗಳಖೋಡ, ಮಹೇಶ ಬೆಳಗಲಿˌ ಮಲ್ಲಪ್ಪ ಧಾರಣಿ ಸೇರಿದಂತೆ ಗ್ರಾಮದ ಯುವಕರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.
ಹೆಗಲ ಮೇಲೆ ರಥ ಹೊರುವ ವಿಶಿಷ್ಟ ಪರಂಪರೆ
ಕಡಪಟ್ಟಿ ಜಾತ್ರೆಯ ವಿಶೇಷತೆ ಎಂದರೆ ಚಕ್ರಗಳಿಲ್ಲದ ಜೋಡು ಬಸವಣ್ಣನ ರಥ. ಸಾಮಾನ್ಯವಾಗಿ ರಥೋತ್ಸವಗಳಲ್ಲಿ ಚಕ್ರಗಳ ಮೂಲಕ ರಥವನ್ನು ಎಳೆಯುವ ಪದ್ಧತಿ ಕಂಡುಬರುತ್ತದೆ. ಆದರೆ ಕಡಪಟ್ಟಿಯ ಪವಾಡ ಬಸವೇಶ್ವರ ಜಾತ್ರೆಯಲ್ಲಿ ಭಕ್ತರು ತಮ್ಮ ಹೆಗಲ ಮೇಲೆ ರಥವನ್ನು ಹೊತ್ತು ಸಾಗಿಸುವುದು ಇಲ್ಲಿನ ವಿಶಿಷ್ಟ ಧಾರ್ಮಿಕ ಪರಂಪರೆಯಾಗಿದೆ.
ಕಡಪಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಜಾತಿ, ಮತ, ವಯಸ್ಸಿನ ಭೇದವಿಲ್ಲದೆ ರಥೋತ್ಸವದಲ್ಲಿ ಪಾಲ್ಗೊಂಡು ಬಸವಣ್ಣನಿಗೆ ತಮ್ಮ ಸೇವೆ ಸಮರ್ಪಿಸುತ್ತಾರೆ. ರಥ ಸಾಗುವ ಸಂದರ್ಭದಲ್ಲಿ ಭಕ್ತರು ಉತ್ತತ್ತಿ, ಬಾಳೆಹಣ್ಣು, ಕೊಬ್ಬರಿ, ಬೆತ್ತಸು ಸೇರಿದಂತೆ ವಿವಿಧ ಹರಕೆಗಳನ್ನು ಸಮರ್ಪಿಸಿ ಭಕ್ತಿಭಾವ ಮೆರೆದರು.

