ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ವಿಜಯಲಕ್ಷ್ಮೀ ಕಲಶೆಟ್ಟಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಮಟ್ಟದಲ್ಲಿ ಉತ್ತಮ ಶಿಕ್ಷಣ ಪಡೆದು ಅತ್ಯುನ್ನತ ಹುದ್ದೆಯನ್ನು ಪಡೆಯಬಹುದು ಎಂದು ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ವಿಜಯಲಕ್ಷ್ಮೀ ಕಲಶೆಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ಸಂಭ್ರಮ ಶನಿವಾರದ ಸಾಧಕರ ಪರಿಚಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಿಜಯಲಕ್ಷ್ಮೀ ರವರು, ನಾನು ಕಲಿತ ಶಾಲೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಗೌರವ ಸನ್ಮಾನ ಸ್ವೀಕರಿಸಿ ಮಕ್ಕಳ ಜೊತೆಗೆ ಸಾಧನೆ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳುತ್ತಿರುವುದು ಹೆಮ್ಮೆಯ ಕ್ಷಣ ಎಂದರು. ಮಕ್ಕಳು ಪ್ರಾಥಮಿಕ ಹಂತದಲ್ಲಿಯೇ ತಮ್ಮ ಗುರಿಯನ್ನು ನಿರ್ಧರಿಸಿ ಶಿಕ್ಷಕರ ಮಾರ್ಗದರ್ಶನ ದಿಂದ ನಿರಂತರ ಅಧ್ಯಯನ ಮಾಡಬೇಕು ಅಂದಾಗ ಮಾತ್ರ ಉನ್ನತ ಹುದ್ದೆಯನ್ನು ಪಡೆಯಬಹುದು ಎಂದರು
ಕಳೆದ ಫೆಬ್ರುವರಿ ಯಲ್ಲಿ ಕೆ.ಪಿ.ಎಸ್.ಸಿ ವತಿಯಿಂದ ನಡೆದ ಪರೀಕ್ಷೆಯಲ್ಲಿ ಬೆಂಗಳೂರನ ಸರಕು ಮತ್ತು ಸಾಗಾಣಿಕೆ ಇಲಾಖೆಯ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ ಸೇವೆಗೆ ಸೇರಿದ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಕಲಶೆಟ್ಟಿ ರವರ ಸಾಧನೆಯನ್ನು ಗುರುತಿಸಿ ಮಕ್ಕಳಿಗೆ ಪ್ರೇರಣೆ ಸಿಗಲಿ ಎಂಬ ಉದ್ದೇಶದಿಂದ ಅವರನ್ನು ಕರೆಯಿಸಿ ಸನ್ಮಾನಿಸಿ ಸಾಧಕರನ್ನು ಮಕ್ಕಳಿಗೆ ಪರಿಚಯಿಸುವ ಕಾರ್ಯ ಶ್ಲಾಘನೀಯ ಎಂದು ಸಂಸ್ಥೆಯ ಅಧ್ಯಕ್ಷ ಶ್ರೀಶೈಲಪ್ಪ ಜೋಗೂರ ಮಾತನಾಡಿದರು.
ಈ ವೇಳೆ ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ, ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ಸರುಬಾಯಿ ಬಂಡಗರ, ಅಂಜಲಿ ಕನ್ನೊಳ್ಳಿ, ಐಶ್ವರ್ಯ ಬೇಪಾರಿ ಮುಂತಾದವರು ಇದ್ದರು

