ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ರೈತ ಸಂಘಟನೆಗಳ ಒಕ್ಕೂಟ ದಿಂದ ಆಲಮೇಲ ತಾಲೂಕಿನ ರೈತರೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕು ಬರಗಾಲ ಘೋಷಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ರೈತ ಸಂಘಟನೆಗಳ ಒಕ್ಕೂಟ ದಿಂದ ಆಲಮೇಲ ತಾಲೂಕಿನ ರೈತರೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.
ಸಿಂದಗಿ ತಾಲೂಕಿನ ರೈತ ಸಂಘದ ಗೌರವಾಧ್ಯಕ್ಷ ಬಾಳು ಕುಂಬಾರ, ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷ ಜಗದೇವಿ ಬಿರಾದಾರ ಮಾತನಾಡಿ, ವಿಜಯಪುರ ಜಿಲ್ಲೆ ಸಂಪೂರ್ಣ ಬರಗಾಲ ಘೋಷಿಸಬೇಕು. ಇಲ್ಲದಿದ್ದರೆ ರಾಜ್ಯ ರಾಷ್ಟ್ರೀಯ, ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಂದಗಿ ತಾಲೂಕಿನ ರೈತ ಸಂಘದ ಯುವ ಘಟಕದ ಅಧ್ಯಕ್ಷ ಪ್ರಶಾಂತ ಭೂಸನೂರ, ಶಶಿಧರ್ ನಾಯ್ಕೋಡಿ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಗಾಲ ಘೋಷಣೆ ಮಾಡಬೇಕು. ಜಿಲ್ಲೆಯ ಬಹುತೇಕ ಆಡಳಿತ ಕಾಂಗ್ರೆಸ್ ಶಾಸಕರದ್ದೇ ಇದ್ದು ಸರ್ಕಾರಕ್ಕೆ ವಾಸ್ತವವನ್ನು ಮನವರಿಕೆ ಮಾಡಿ ಬರಗಾಲ ಘೋಷಿಸಲು ಒತ್ತಾಯಿಸಬೇಕೆಂದು ಮನವಿ ಮಾಡಿದರು.
ಕವಿರಾಜ ಲಾಳಸಂಗಿ, ಹರೀಶ ಯಂಟಮಾನ
ಮಾತನಾಡಿದರು.
ಆಲಮೇಲ ಪಟ್ಟಣದ ಮೇನ್ ಬಜಾರ್ ದೇವಿ ಗುಡಿಯಿಂದ ಪ್ರಮುಖ ಬೀದಿಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ರೈತರು ಮೆರವಣಿಗೆ ಮೂಲಕ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದರು. ನಂತರ ಬಸ್ ನಿಲ್ದಾಣ ಹತ್ತಿರದ ವೃತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿ ಸರ್ಕಾರಕ್ಕೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ ಮಲ್ಲಣ್ಣ ಯಲಗೋಡ, ರೈತರ ಮನವಿಯನ್ನು ಸರ್ಕಾರಕ್ಕೆ ತಲುಪಿಸುತ್ತೇನೆ ಹಾಗೂ ತಾಲೂಕಾ ಆಡಳಿತದಿಂದಲೂ ಆಲಮೇಲ ತಾಲೂಕು ಬರಗಾಲ ಘೋಷಣೆಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಅಳ್ಳೋಳ್ಳಿ ಮಠದ ಶ್ರೀಶೈಲಯ್ಯ ಮಹಾಸ್ವಾಮಿಗಳು, ಅರ್ಜುನಗಿ ಹಿರೇಮಠದ ಸಂಗನಬಸವ ಶಿವಾಚಾರ್ಯರು, ತಾಲೂಕು ಅಧ್ಯಕ್ಷ ಮಾಂತೇಶ ಕತ್ತಿ, ರಾಜು ಮೇತ್ರಿ, ಹೌಸಕುಮಾರ ಬಂಡಗಾರ, ಗೊಟು ಲಾವಟೆ, ರಾಮು ಲಾವಟೆ, ಈರಪ್ಪ ಮೇಟಿ, ಮಹೇಶ ಹೋನಳ್ಳಿ, ನಬಿ ಮೇಲಿನಮನಿ, ರಾಜು ಬಿರಾದಾರ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

