ಇಂಡಿ ಪತ್ರಕರ್ತರಿಂದ ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಅವರಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಶಿವಾನಂದ ತಗಡೂರ ಅವರು ರಾಜ್ಯದ ಪತ್ರಕರ್ತರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿರುವ ನಾಯಕರಾಗಿದ್ದು, ಅವರ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ದುರುದ್ದೇಶಪೂರಿತವಾಗಿವೆ. ಸತ್ಯಾಸತ್ಯತೆ ಪರಿಶೀಲಿಸದೆ ಆರೋಪ ಮಾಡುವ ಪ್ರವೃತ್ತಿಗೆ ಕಡಿವಾಣ ಬೀಳಬೇಕೆಂದು ಹಿರಿಯ ಪತ್ರಕರ್ತ ಎ.ಸಿ. ಪಾಟೀಲ ಒತ್ತಾಯಿಸಿದರು.
ಗುರುವಾರ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರ ವಿರುದ್ಧ ಕೆಲವರು ಮಾಡಿರುವ ಆಧಾರ ರಹಿತ ಹಾಗೂ ಸುಳ್ಳು ಆರೋಪಗಳನ್ನು ಖಂಡಿಸಿ ಪತ್ರಕರ್ತರು ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಅವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು.
ಪ್ರಾಮಾಣಿಕವಾಗಿ ಕಾರ್ಯ ಮಾಡುವವರ ತೇಜೋವಧೆ ಸರಿಯಲ್ಲ. ಇಡೀ ಪತ್ರಕರ್ತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕಾರ್ಯ ಶಿವಾನಂದ ತಗಡೂರ ಮಾಡಿದ್ದಾರೆ ಎಂದರು.
ಇನ್ನೋರ್ವ ಹಿರಿಯ ಪತ್ರಕರ್ತ ಉಮೇಶ ಕೋಳೇಕರ ಮಾತನಾಡಿ, ಪತ್ರಕರ್ತರ ಸಂಘವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಕೆಲವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಇಂತಹ ಬೆಳವಣಿಗೆಗಳು ಪತ್ರಕರ್ತರ ಏಕತೆಗೆ ಧಕ್ಕೆ ಉಂಟುಮಾಡಲಿದ್ದು, ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕೆಂದರು.
ಉಮೇಶ ಬಳಬಟ್ಟಿ ಮಾತನಾಡಿ, ಆಧಾರರಹಿತ ಆರೋಪಗಳ ಮೂಲಕ ವ್ಯಕ್ತಿತ್ವ ಹರಣ ಮಾಡಲು ಯತ್ನಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಖಾಜು ಸಿಂಗೆಗೋಳ ಮಾತನಾಡಿ, ಸತ್ಯಾಂಶವನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಯಲಗೊಂಡ ಬೇವನೂರ, ಶರಣು ಕಾಂಬಳೆ, ಶಂಕರ ಜಮಾದಾರ ಮಾತನಾಡಿದರು.
ಕಾನಿಪ ಸಂಘದ ಖಜಾಂಚಿ ಆನಂದ ಗಣಾಚಾರಿ, ಸಚಿನ್ ಇಂಡಿ, ಜೈಭೀಮ ಸಿಂಗೆ, ತುಕಾರಾಮ ಪವಾರ, ಗುರು ದಶವಂತ, ಅಲ್ಲಾಭಕ್ಷ ಗೋರೆ, ಲಾಲಸಿಂಗ ರಾಠೋಡ, ಮಲ್ಲು ಹಾವಿನಾಳಮಠ, ಫಯಾಜ ಬಾಗವಾನ, ಸಿದ್ದಯ್ಯ ಮಠ, ಚಂದ್ರಶೇಖರ ಮೇಲಿನಮನಿ ಸೇರಿದಂತೆ ಇನ್ನಿತರರು ಇದ್ದರು.

