ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಗಳಿಸುವ ಸಂಪತ್ತು, ಆಸ್ತಿ-ಪಾಸ್ತಿಗಿಂತ ಒಂದು ಸಸಿಯನ್ನು ನೆಟ್ಟು ಅದನ್ನು ಪೋಷಿಸುವುದರಿಂದ ದೊರೆಯುವ ಸಂತೋಷ ಮತ್ತು ತೃಪ್ತಿ ಹೆಚ್ಚು ಮಹತ್ವದ್ದಾಗಿದೆ. ಬೆಳೆದ ಮರಗಳನ್ನು ಕಡಿದಾಗ ಜನರು ವ್ಯಕ್ತಪಡಿಸುವ ಆಕ್ರೋಶವು ಹಸಿರೀಕರಣದ ಬಗ್ಗೆ ಜನರಲ್ಲಿ ಮೂಡಿರುವ ಜಾಗೃತಿಗೆ ಸಾಕ್ಷಿಯಾಗಿದೆ ಎಂದು ವಿಜಯಪುರ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಹೇಳಿದರು.
ವಿಜಯಪುರ ಐಶ್ವರ್ಯ ನಗರದ ಉದ್ಯಾನವನದಲ್ಲಿ 75 ಸಸಿಗಳನ್ನು ನೆಡುವ ವನಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಗಣಪತಿ ಪೆಂಡಾಲ ಹಾಕಲು ಇಲ್ಲಿನ ಮರಗಳನ್ನು ಕಡಿದಿದ್ದರು. ಇದರಿಂದ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ತಾವು ಮಾಡಿದ್ದು ತಪ್ಪು ಎಂದು ತಿಳಿದು ನಾಲ್ಕು ಗಿಡಗಳ ಬದಲಿಗೆ 75 ಗಿಡಗಳನ್ನು ಇಂದು ನೆಟ್ಟು ರಕ್ಷಣೆ ಮಾಡಲು ಮುಂದೆ ಬಂದಿರುವುದು ಎಲ್ಲರಿಗೂ ಸಂತಸ ತಂದಿದೆ ಎಂದರು.
ಐಶ್ವರ್ಯ ನಗರದ ನಿವಾಸಿ ಜಯಪ್ರಕಾಶ ಸೊಡ್ಡಗಿ ಮಾತನಾಡಿ, ಮನೆ-ಮಠಗಳಲ್ಲಿ ಹೋಮ-ಹವನ, ಮಂತ್ರಪಠಣ ಮಾಡುವುದರಿಂದ ದೊರೆಯುವ ಪುಣ್ಯದಂತೆ ಒಂದು ಸಸಿ ನೆಟ್ಟು ಅದನ್ನು ಪೋಷಿಸುವ ಕಾರ್ಯಕ್ಕೆ ಸಮಾನವಾಗಿದೆ ಎಂಬ ಸಂದೇಶ ಅಗ್ನಿಪುರಾಣದಲ್ಲಿ ಕಾಣುತ್ತೇವೆ. ಜನ್ಮದಿನ, ಸಭೆ-ಸಮಾರಂಭಗಳಲ್ಲಿ ದುಂದು ವೆಚ್ಚ ಮಾಡುವ ಬದಲು ಮನೆ-ಮನೆಗಳಲ್ಲಿ, ರಸ್ತೆ ಪಕ್ಕದಲ್ಲಿ, ಉದ್ಯಾನಗಳಲ್ಲಿ ಸಸಿಗಳನ್ನು ನೆಟ್ಟು ಹಸಿರು ವಾತಾವರಣ ಸೃಷ್ಟಿಸಿದರೆ, ತಾಪಮಾನ ಕಡಿಮೆಯಾಗುತ್ತದೆ. ಸುಂದರ ಪರಿಸರವನ್ನೂ ನಿರ್ಮಾಣ ಮಾಡಬಹುದು. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ತಿಳಿದು, ತಿಳಿಯದೆ ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತವಾಗಿ ಒಂದು ಸಸಿಯನ್ನು ನೆಟ್ಟು, ಪೋಷಿಸುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಐಶ್ವರ್ಯ ನಗರ ನಿವಾಸಿ ಬಸವರಾಜ ಕೋರಿ ಸಸಿಗಳಿಗೆ ಡ್ರಿಪ್ ವ್ಯವಸ್ಥೆ ಕಲ್ಪಿಸಿ, ಪೋಷಣೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾಪೌರ ಮಡಿವಾಳ ಕರಡಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಭೀಮಶಿ ಬಿರಾದಾರ, ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಅಜೂರ, ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ರಾಜ್ಯ ಗುತ್ತಿಗೆದಾರರ ಸಂಘದ ಸಂಘಟನಾ ಕಾರ್ಯದರ್ಶಿ ಹಣಮಂತ ಚಿಂಚಲಿ ಸೇರಿದಂತೆ ಐಶ್ವರ್ಯ ನಗರದ ನಿವಾಸಿಗಳಾದ ಅಶೋಕ ದೇಶಟ್ಟಿ, ಈರಣ್ಣ ಹುಳಸೂರ, ವಿವೇಕ ಹುಂಡೇಕಾರ, ಜಯಪ್ರಕಾಶ ಅಂಬಲಿ, ಎಸ್.ಎಸ್. ತೊದಲಬಾಗಿ, ಗಂಟನೂರ ಮಠ, ಸಿದ್ದು ತೇಜೂರ, ಗಿರೀಶ ಅಮತೆಪ್ಪ, ಎಂ.ಎಸ್. ಬಿರಾದಾರ ಹಾಗೂ ವಿಜಯಪುರ ಸೈಕ್ಲಿಂಗ್ ಗ್ರೂಪ್ನ ಸದಸ್ಯರು ಉಪಸ್ಥಿತರಿದ್ದರು.

