ಸೆ.16ಕ್ಕೆ ಕೊಲ್ಹಾರದಲ್ಲಿ ರೈತ ಜನತಾ ಸಭೆ | ಜಿಲ್ಲಾಧಿಕಾರಿ ಸೇರಿ ಹಿರಿಯ ಅಧಿಕಾರಿಗಳ ಖುದ್ದು ಹಾಜರಿಗೆ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಕೊಲ್ಹಾರ ಪಟ್ಟಣ ಹಾಗೂ ತಾಲೂಕು ವ್ಯಾಪ್ತಿಯ ಸಂತ್ರಸ್ತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಲ್ಹಾರ ತಾಲೂಕು ಘಟಕದ ನೇತೃತ್ವದಲ್ಲಿ ಸೆ.16ರಂದು ಬೃಹತ್ ಪ್ರತಿಭಟನೆ ಹಾಗೂ ರೈತ ಜನತಾ ಸಭೆ ಹಮ್ಮಿಕೊಳ್ಳಲಾಗಿದೆ.
ಸಂತ್ರಸ್ತರಿಗೆ ಸೂಕ್ತ ನಿವೇಶನ ಹಂಚಿಕೆ ಮಾಡದಿರುವುದು, ನೆಪವೊಡ್ಡಿ ಉತಾರೆ ನೀಡದೆ ವಿಳಂಬ ಮಾಡುತ್ತಿರುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸದಿರುವುದನ್ನು ಖಂಡಿಸಿ ತಹಶೀಲ್ದಾರ್ ಸಂತೋಷ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸೆ.16ರ ಬೆಳಿಗ್ಗೆ 12 ಗಂಟೆಯೊಳಗೆ ಕೊಲ್ಹಾರ ಪಟ್ಟಣ ಪಂಚಾಯಿತಿ ಎದುರು ನಡೆಯುವ ರೈತ ಜನತಾ ಸಭೆಗೆ ವಿಜಯಪುರ ಜಿಲ್ಲಾಧಿಕಾರಿ, ಬಾಗಲಕೋಟೆ ಪುನರ್ವಸತಿ ಹಾಗೂ ಭೂಸ್ವಾಧೀನ ಅಧಿಕಾರಿಗಳು, ಆಲಮಟ್ಟಿ ಪುನರ್ವಸತಿ ಅಧಿಕಾರಿಗಳು, ಹೆಸ್ಕಾಂ ಅಧೀಕ್ಷಕ ಅಭಿಯಂತರರು ಹಾಗೂ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರು ಖುದ್ದು ಆಗಮಿಸಿ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬೇಕು ಎಂದು ತಾಲೂಕು ಅಧ್ಯಕ್ಷ ಸೋಮು ಭೀ. ಬಿರಾದಾರ ಹಾಗೂ ಸಂತ್ರಸ್ತರು ಆಗ್ರಹಿಸಿದ್ದಾರೆ.
ನಿವೇಶನ ಹಂಚಿಕೆಯಲ್ಲಿನ ತಾರತಮ್ಯ ನಿವಾರಿಸಿ, ಸಿಓಡಿ ಪ್ರಕರಣ ಹೊರತುಪಡಿಸಿ ನೈಜ ಮೂಲ ಸಂತ್ರಸ್ತರಿಗೆ ತಕ್ಷಣ ಉತಾರೆ ನೀಡಬೇಕು. ಸಿಓಡಿ ತನಿಖಾ ವರದಿಯನ್ನು ಬಹಿರಂಗಪಡಿಸಬೇಕು. ಕುಟುಂಬದ ಎಲ್ಲ ಮಕ್ಕಳಿಗೂ ನಿವೇಶನ ನೀಡಬೇಕು ಹಾಗೂ ಬಡತನದ ಕಾರಣ ಮಾರಾಟವಾದ ಅಥವಾ ಪಡೆದ ನಿವೇಶನಗಳ ರದ್ದು ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಲಾಗಿದೆ.
ಕೊಲ್ಹಾರ ಪಟ್ಟಣದ ಅಸಮರ್ಪಕ ಒಳಚರಂಡಿ ಕಾಮಗಾರಿಯನ್ನು ಸರಿಪಡಿಸಿ, ಕಾಮಗಾರಿಯಲ್ಲಿನ ಲೋಪದ ಕುರಿತು ತನಿಖೆ ನಡೆಸಬೇಕು. ಮುಳವಾಡ ಏತ ನೀರಾವರಿ ‘ಎ’ ಮತ್ತು ‘ಬಿ’ ಸ್ಕೀಮ್ ಮೂಲಕ ಅಖಂಡ ವಿಜಯಪುರ ಜಿಲ್ಲೆಯ ಕೆರೆಗಳನ್ನು ತುಂಬಿಸಲು 2027ರ ಜನವರಿಯಿಂದ ಜುಲೈವರೆಗೆ 20 ಟಿಎಂಸಿ ನೀರು ಕಾಯ್ದಿರಿಸಬೇಕು. ರೈತರ ಜಮೀನುಗಳಿಗೆ ಸಮರ್ಪಕ 2 ಫೇಸ್ ಹಾಗೂ 3 ಫೇಸ್ ವಿದ್ಯುತ್ ಪೂರೈಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಹಾಗೂ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರ ಸಮ್ಮುಖದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸದಿದ್ದರೆ ರಾಷ್ಟ್ರೀಯ ಹೆದ್ದಾರಿಯ ಕೊಲ್ಹಾರ ಸೇತುವೆ ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕಲ್ಲಪ್ಪ ಗಿಡ್ಡಪ್ಪಗೋಳ, ರಮೇಶ ಬೀಳಗಿ, ಶಶಿಕಾಂತ ಬಿರಾದಾರ, ಸತೀಶ ಕುಲ್ಲಳ್ಳಿ, ಮುದಕನ್ನ ಚಲವಾದಿ, ಯಮನಪ್ಪ ಬಿಸ್ಟಗೊಂಡ, ಸಂಗಪ್ಪ ಗುಳಗೊಂಡ ಸೇರಿದಂತೆ ಹಲವು ಸಂತ್ರಸ್ತರು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

