ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸನಾತನ ಧರ್ಮದ ಪವಿತ್ರ ಶ್ರಾವಣ ಮಾಸದಲ್ಲಿ ಪುರಾಣ-ಪ್ರವಚನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದು ಆ ಭಾಗದ ಜನತೆಯಲ್ಲಿ ಸತ್ಯ, ಧರ್ಮ, ಮಾನವೀಯತೆ, ಸಹಬಾಳ್ವೆ ಮತ್ತು ಸದಾಚಾರದ ಮೌಲ್ಯಗಳನ್ನು ಬೆಳೆಸುವದಕ್ಕಾಗಿ ಎಂದು ಮಿಣಜಗಿ ಗ್ರಾಮದ ಗುರುಪಾದೇಶ್ವರ ಮಠದ ಆಡಳಿತಾಧಿಕಾರಿಗಳು ಹಾಗೂ ಪ್ರವಚನಕಾರರಾದ ಪ್ರೊ.ಡಾ.ಸೋಮಶೇಖರ ಹಿರೇಮಠ ಹೇಳಿದರು.
ಮಿಣಜಗಿ ಗ್ರಾಮದ ಮಾಯಮ್ಮ ದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಶಿವಶರಣೆ ಅಕ್ಕಮಹಾದೇವಿಯವರ ಪ್ರವಚನ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.
ಅಕ್ಕಮಹಾದೇವಿಯವರ ವಚನಗಳು ಕೇವಲ ಆಧ್ಯಾತ್ಮಿಕ ವಿಚಾರಗಳಲ್ಲ. ಅವು ಮನುಷ್ಯನ ಬದುಕಿಗೆ ಸತ್ಯ, ನಿಷ್ಠೆ, ವೈರಾಗ್ಯ ಹಾಗೂ ಆತ್ಮಶುದ್ಧಿಯ ಮಾರ್ಗವನ್ನು ತೋರಿಸುವ ಜೀವನ ಸಂದೇಶಗಳಾಗಿವೆ. ಅಕ್ಕಮಹಾದೇವಿಯವರು ತಮ್ಮ ಬದುಕಿನ ಮೂಲಕ ಮಹಿಳಾ ಸ್ವಾತಂತ್ರ್ಯ, ಆತ್ಮಗೌರವ ಮತ್ತು ಭಕ್ತಿಯ ಮಹತ್ವವನ್ನು ಸಾರಿದ್ದಾರೆ. ಅವರ ವಚನಗಳಲ್ಲಿರುವ ತತ್ವಗಳನ್ನು ಇಂದಿನ ಯುವಜನತೆ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಾನಿಧ್ಯ ವಹಿಸಿದ್ದ ವಡವಡಗಿಯ ಭೃಂಗೇಶ್ವರ ಶಿವಾಚಾರ್ಯರು ಮಾತನಾಡಿ, ಪುರಾಣ-ಪ್ರವಚನಗಳಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಮ್ಮ ಹಿರಿಯರು ಬೆಳೆಸಿಕೊಂಡು ಬಂದಿರುವ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಕಾರ್ಯವಾಗುತ್ತಿರೋದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ ಅವು ನಮ್ಮ ಬದುಕನ್ನು ಬದಲಿಸುವ ಜೀವನದರ್ಶನಗಳಾಗಬೇಕು. ಸತ್ಯವನ್ನು ಪಾಲಿಸುವುದು, ಧರ್ಮದ ಹಾದಿಯಲ್ಲಿ ನಡೆಯುವುದು, ಹಿರಿಯರನ್ನು ಗೌರವಿಸುವುದು, ದುರ್ಬಲರಿಗೆ ನೆರವಾಗುವುದು, ಪರಸ್ಪರ ಪ್ರೀತಿ-ಸೌಹಾರ್ದದಿಂದ ಬದುಕುವುದು ಹಾಗೂ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.
ಎಲ್ಲ ಮಾತೆಯರು ತಮ್ಮ ಇಷ್ಟಾರ್ಥಸಿದ್ಧಿಗಾಗಿ ಇಷ್ಟಲಿಂಗ ಪೂಜೆ ಮಾಡಿಕೊಂಡರು. ಮಹದೇವಿ ಬಿರಾದಾರ, ಬಸ್ಸಮ್ಮ ಬಿರಾದಾರ, ಚೆನ್ನಮ್ಮ ವಾಲಿ, ಪದ್ಮಾವತಿ ಬಿರಾದಾರ, ಬಸಮ್ಮ ತೆಕ್ಕೂರ್, ಜೆ.ಡಿ.ಪಾಟೀಲ, ಡಿ.ಕೆ.ಪಾಟೀಲ, ಸಂಗನಗೌಡ ಪಾಟೀಲ, ಮಲ್ಲನಗೌಡ ಬಿರಾದಾರ, ಮಹಾಂತೇಶ ಬಿರಾದಾರ, ಈರಯ್ಯ ಹಿರೇಮಠ, ಸಾಬಣ್ಣ ಅಗ್ನಿ, ಎಂ.ಜಿ.ಯರನಾಳ, ಎಮ್ ಸರ್ಜಾಪುರ್ ಸೇರಿದಂತೆ ಸಾಕಷ್ಟು ಜನ ಭಾಗಿಯಾಗಿ ಪ್ರವಚನ ಆಲಿಸಿದರು. ಸಂಗೀತಗಾರರಾದ ಮಹಾಂತೇಶ ಬಿರಾದಾರ, ತಬಲಾವಾದಕರಾದ ಆಕಾಶ್ ಹಿರೇಮಠರು ಪ್ರವಚನಕಾರರಿಗೆ ಸಾಥ್ ನೀಡಿದರು.

