ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನೀಟ್ ಪರೀಕ್ಷೆ ಎಂದರೆ ಕೆಲವರಿಗೆ ಕಬ್ಬಿಣದ ಕಡಲೆಯಾದರೆ ಸ್ಮಾರ್ಟ ಆಗಿ ಓದುವವರಿಗೆ ಸುಲಭದ ತುತ್ತು. ಯಾವ ವಿಷಯವನ್ನು ಯಾವ ರೀತಿಯಾಗಿ ಓದಬೇಕು ಎನ್ನುವುದರ ಪರಿಜ್ಞಾನ ನಮ್ಮಲ್ಲಿ ಮೂಡಿಸಿಕೊಂಡರೆ ಸರಳವಾಗಿ ನೀಟ್ ಪಾಸು ಮಾಡಿ ಎಂಬಿಬಿಎಸ್ ಸೀಟು ಪಡೆಯಬಹುದು ಎಂದು ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ೬೩೧ ಅಂಕಗಳನ್ನು ಪಡೆದು ಬೆಂಗಳೂರು ಮೆಡಿಕಲ್ ಕಾಲೇಜ್ ಆಂಡ್ ರೀಸರ್ಚ ಇನ್ಸಿಟ್ಯೂಟ್ಗೆ ಆಯ್ಕೆಯಾದ ಸಲ್ಮಾನ ಗೋಡಿಹಾಳ ಹೇಳಿದರು.
ನಗರದ ಎಕ್ಸಲಂಟ್ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದಕ್ಕಾಗಿ ಕಾಲೇಜಿನ ವತಿಯಿಂದ ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು; ನಮ್ಮಲ್ಲಿರುವ ಅತೀ ದೊಡ್ಡ ಸಮಸ್ಯೆ ಎಂದರೆ ಅತಿಯಾದ ಆತ್ಮವಿಶ್ವಾಸ. ನಾನು ಮಾಡುತ್ತೇನೆ ಬಿಡು ಇಂದಲ್ಲ ನಾಳೆ ಆಗುತ್ತೆ ಬಿಡು ಎನ್ನುವ ರೀತಿಯಲ್ಲಿ ಅಧ್ಯಯನ ಮಾಡಿದರೆ ಯಶಸ್ವಿಯಾಗುವುದಕ್ಕೆ ಸಾಧ್ಯವಿಲ್ಲ. ಅತಿಯಾದ ಆತ್ಮವಿಶ್ವಾಸ ಅನಾವಶ್ಯಕ ಆಘಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಅದರಿಂದ ಹೊರ ಬರುವುದು ಉತ್ತಮ. ಅದರ ಜೊತೆಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳನ್ನು ಅತ್ಯಂತ ಆಧ್ಯತೆಯ ವಿಷಯವನ್ನಾಗಿ ಅಭ್ಯಾಸ ಮಾಡಿದಾಗ ಮಾತ್ರ ನೀಟ್ ಫಲಿತಾಂಶದಲ್ಲಿ ಏರಿಕೆ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್ಮನ್ ಬಸವರಾಜ ಕೌಲಗಿ ಮಾತನಾಡಿ; ಸಲ್ಮಾನ ಗೋಡಿಹಾಳ ಮಾಡಿದ ರೀತಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಅಧ್ಯಯನ ಮಾಡಿದರೆ ಅಪ್ಪ ಅಮ್ಮನ ಕನಸನ್ನು ಈಡೇರಿಸುವುದರ ಜೊತೆಗೆ ನಿಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಹೀಗಾಗಿ ಎಲ್ಲ ವಿದ್ಯಾರ್ಥಿಗಳು ಇಷ್ಟಪಟ್ಟು ಓದಿ ಅತ್ಯುತ್ತಮ ಅಂಕಗಳನ್ನು ಗಳಿಸಿಕೊಂಡು ಉನ್ನತ ಕಾಲೇಜುಗಳಲ್ಲಿ ಸೀಟುಗಳನ್ನು ಗಿಟ್ಟಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಮ. ಜುನಗೊಂಡ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಉಪಸ್ಥಿತರಿದ್ದರು.

