ರವಿ ಬೆಳಗೆರೆ ಧ್ವನಿಮುದ್ರಿತ ಮಾತುಗಳಿಗೆ ರಂಗಸ್ಪರ್ಶ | ಪ್ರೇಕ್ಷಕರ ಮನಗೆದ್ದ ಏಕವ್ಯಕ್ತಿ ನಾಟಕ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಧ್ಯೇಯ, ಶ್ರದ್ಧೆ ಹಾಗೂ ಕಾಯಕನಿಷ್ಠೆಯಿಂದ ಬದುಕಿದಾಗ ಮಾತ್ರ ಮನುಷ್ಯ ಉನ್ನತಿ ಸಾಧಿಸಲು ಸಾಧ್ಯ. ಈ ಮಹತ್ವದ ಸಂದೇಶವನ್ನು ‘ಓ ಮನಸ್ಸೇ’ ನಾಟಕ ಪರಿಣಾಮಕಾರಿಯಾಗಿ ಸಾರುತ್ತದೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ವಿಶ್ವಭಾರತಿ ವಿದ್ಯಾವರ್ಧಕ ಸಂಸ್ಥೆಯ ಸಾಂಸ್ಕೃತಿಕ ಭವನದಲ್ಲಿ ಶ್ರೀ ದ್ಯಾಮವ್ವ ದೇವಿ ಕಲಾ ಬಳಗದ ವತಿಯಿಂದ ಸಾಣೇಹಳ್ಳಿ ಗ್ರಾಮರಂಗ ಸಾಂಸ್ಕೃತಿಕ ಟ್ರಸ್ಟ್ನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಓ ಮನಸ್ಸೇ’ ಏಕವ್ಯಕ್ತಿ ರಂಗಪ್ರಯೋಗದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾನಪದ ವಿಶ್ವಕೋಶ ಬಿ.ಆರ್. ಪೊಲೀಸ್ಪಾಟೀಲ ಮಾತನಾಡಿ, ನಾಟಕಗಳು ಸಮಾಜದ ಓರೆಕೋರೆಗಳನ್ನು ತಿದ್ದುವುದರ ಜತೆಗೆ ಸಾಮಾಜಿಕ ಪ್ರಜ್ಞೆ ಮೂಡಿಸುವ ತೆರೆದ ಪುಸ್ತಕಗಳಾಗಿವೆ. ಮೊಬೈಲ್ ವ್ಯಾಮೋಹದಿಂದ ಹೊರಬಂದು ರಂಗಭೂಮಿ, ಸಾಮಾಜಿಕ ನಾಟಕ ಹಾಗೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
55 ನಿಮಿಷಗಳ ನಾಟಕ ಪ್ರೇಕ್ಷಕರನ್ನು ಹಿಡಿದಿಟ್ಟಿತು. ಮಂಜುಳಾ ಸಾಣೇಹಳ್ಳಿ ಅವರ ಅಭಿನಯ ಹಾಗೂ ರವಿ ಬೆಳಗೆರೆ ಅವರ ಧ್ವನಿಮುದ್ರಿತ ಮಾತುಗಳು ಸಭಾಂಗಣದಲ್ಲಿ ವಿಶೇಷ ಅನುಭವ ಮೂಡಿಸಿದವು. ಪರಮಾನಂದ ತನಿಖೆದಾರ ಉದ್ಘಾಟಿಸಿದರು.
ಕಲ್ಲಪ್ಪ ಸಿ.ಸೊನ್ನದ, ಇಸ್ಮಾಯಿಲ್ಸಾಬ ತಹಶೀಲ್ದಾರ ಉಪಸ್ಥಿತರಿದ್ದರು. ಪರಶುರಾಮ ಬ.ಗಣಿ ಸ್ವಾಗತಿಸಿ ನಿರೂಪಿಸಿದರು. ವೈ.ಡಿ. ಬದಾಮಿ ಹಾಗೂ ಮಂಜುಳಾ ಬದಾಮಿ ಅಭಿನಯಿಸಿದರು.

