ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಭಾರತೀಯ ಕನ್ನಡಿಗರಾಗಿ ಭಾವೈಕ್ಯತೆಯ ಭಾವದಿಂದ ಸಾಧು ಸಂತ ಶರಣರ ಫಕೀರಾಧಿಯಾಗಿ ಎಲ್ಲ ಧರ್ಮಗಳ ಪ್ರೀತಿಸುವುದರ ಮೂಲಕ ಕನ್ನಡ ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಉಳಿಸುವ ಸೇವಕರಾಗೋಣ ಎಂದು ಶಹಪೂರದ ಚರಬಸವೇಶ್ವರ ಸಂಸ್ಥಾನದ ಡಾ.ಶರಣು. ಬಿ ಗದ್ದುಗೆ ಹೇಳಿದರು.
ಪಟ್ಟಣದ ಆರಾಧ್ಯ ದೈವ ಹಜರತ್ ಜಚ್ಚಾ ಮಾಸಾಬಿಯ 529 ನೇ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡ ಸರ್ವ ಧರ್ಮ ಸಮ್ಮೇಳನ ಹಾಗೂ ಖಾಸಗಿ ಶಾಲಾ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಗರನಾಡಿಗೆ ಒಳ್ಳೆಯ ಕಲ್ಪನೆ ಇದೆ. ಸಮ ಸಮಾಜಕ್ಕಾಗಿ ಬಸವ ಪೂರ್ವ ಯುಗದಲ್ಲಿ ಹೋರಾಟದ ಕಿಚ್ಚು ಹಚ್ವಿದ ಭೋಗಣ್ಣನ, ಭಾವೈಕ್ಯತೆ ಕೇಂದ್ರಬಿಂದು ಮಹಾ ಸತಿ ಮಾಸಾಬಿ ನೆಲೆಸಿದ ಪುಣ್ಯ ಭೂಮಿ ಕೆಂಭಾವಿ ಕನ್ನಡ ನಾಡಿಗೆ ಭಾವೈಕ್ಯತೆ ಸಂದೇಶ ಕೊಡುತ್ತಿದೆ, ಕೆಲವು ಸಂದರ್ಭಗಳಲ್ಲಿ ದುಷ್ಟ ಶಕ್ತಿಗಳಿಂದ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ ಆದರೆ ಸಹ ಬಾಳ್ವೆಯ ಬೀಜ ಬಿತ್ತಲು ಇಂತ ಸಮಾರಂಭಗಳು ನಡೆಯಬೇಕು. ಅನ್ಯ ದರ್ಮವನ್ನು ಪ್ರೀತಿಸುವುದೆ ಬಾವೈಕ್ಯತೆಯಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲ ನರಸಿಂಹರಾವ್ ಕುಲ್ಕರ್ಣಿ ಮಾತನಾಡಿ, ಪಟ್ಟಣ ಆರಾಧ್ಯ ದೈವ ಮಾಸಾಬಿ ಹಿಂದುಗಳಿಗೆ ಮಹಾಸತ್ಯಮ್ಮಳಾಗಿ ಮುಸ್ಲೀಮರಿಗೆ ಮಾಸಾಬಿಯಾಗಿ ಸರ್ವರಿಂದಲೂ ಆರಾಧಿಸಲ್ಪಡುವ ಗ್ರಾಮ ದೇವತೆಯಾಗಿದ್ದಾಳೆ ಎಂದರು.
ಮಹ್ಮದ್ ಆದಮ್ ಖಾಜಿ ಪ್ರಾಸ್ತಾವಿಕ ಮಾತನಾಡಿದರು.
ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಲಿಂಗನಗೌಡ ಮಾಲಿ ಪಾಟೀಲ್ ವಹಿಸಿ ಮಾತನಾಡಿದರು.
ಹಜರತ್ ಷಾ ಬಹಿಬೂಬ್ ಪಾಷಾ ಖಾಜಿ ಫಾರೂಖಿ ಹಾಗೂ ಚನ್ನಯ್ಯ ಸ್ವಾಮಿ ಚಿಕ್ಕಮಠ ಸಾನಿಧ್ಯ ವಹಿಸಿದ್ದರು.
ಸಮ್ಮುಖ ಹಜರತ್ ಮಜರುದ್ದಿನ ಖಾಜಿ, ಆದಿತ್ಯಗೌಡ ಪೊ.ಪಾಟೀಲ, ಅಶೋಕ ಸಾಹು ಸೊನ್ನದ, ಕೃಷ್ಣಯ್ಯ ಗುತ್ತೇದಾರ್, ರಮೇಶ ಆರ್ ಕೊಡಗಾನೂರ ಇದ್ದರು.
ಫಜಲುದ್ದಿನ ಖಾಜಿ ಖುರಾನ್ ಸಂಸ್ಕೃತದಲ್ಲಿ ಪಠಣ ಮಾಡಿ ವಚನ ಗಾಯನದೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ತಾಹೀರ ಪಾಶಾ ಖಾಜಿ ನಿರೂಪಿಸಿದರು. ಸಮ್ಮೇಳನದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಎಲ್ಲಾ ಸಮುದಾಯದ ಭಕ್ತರು ಭಾಗವಹಿಸಿದ್ದರು
ಆದರ್ಶ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ
ಇದೇ ವೇಳೆ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಖಾಸಗಿ ಶಾಲಾ ಶಿಕ್ಷಕರಾದ ರಾಮಕೃಷ್ಣ ಹುಜರತ್ತಿ, ಸಾನಿಯಾ ಗುಲಾಮ್ ರಬ್ಬಾನಿ ನಾಲ್ತವಾಡ, ಸಂತೋಷ ರಾಠೋಡ್, ಮೀನಾಕ್ಷಿ ಸಂಗನಗೌಡ, ಭಾರತಿ ಎಮ್ ಜೆ, ಅಂಬಿಕಾ ನಿಂಗರಾಜ್, ಸುರೇಶ ಕಲ್ಲದೇವನಳ್ಳಿ, ಲತಾ ಆರ್ ಕೊಣ್ಣೂರು, ಲಕ್ಷ್ಮಿ ಶರಣು, ಭಾಗ್ಯಶ್ರೀ ಗುತ್ತೇದಾರ, ಮಡಿವಾಳಪ್ಪ ಬಿರೇದಾರ, ಕಸ್ತೂರಿ ಪ್ರಶಾಂತ, ಬಸನಗೌಡ ಮಾಲಿ ಪಾಟೀಲ್, ಮುಮ್ತಾಜ್ ಬೇಗಂ ರವರಿಗೆ ಆದರ್ಶ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

