ಬಳ್ಳೊಳ್ಳಿಯಲ್ಲಿ ಬಸ್ಗಳ ನಿಲುಗಡೆಗೆ ಸಾರಿಗೆ ಇಲಾಖೆಯ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಹಿಂದಿನ ಸರ್ಕಾರದ ಸಾರಿಗೆ ಸಚಿವರಾಗಿದ್ದ ಶ್ರಿರಾಮುಲು ಅವರು ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ಸಾರಿಗೆ ಇಲಾಖೆಯ ಎಲ್ಲ ಘಟಕಗಳ ಬಸ್ಗಳು ನಿಲುಗಡೆ ಮಾಡುವಂತೆ ಆದೇಶ ನೀಡಿದ್ದರೂ, ಸಾರಿಗೆ ಇಲಾಖೆ ಮಾತ್ರ ಆದೇಶವನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬಳ್ಳೊಳ್ಳಿ ಗ್ರಾಮಕ್ಕೆ ವಿಜಯಪುರ ಘಟಕದ ಕೆಲವೇ ಕೆಲವು ಬಸ್ಗಳು ಮಾತ್ರ ಸೇತುವೆ ಕೆಳಗಡೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿವೆ. ಆದರೆ ಚಿತ್ರದುರ್ಗ, ಹಳಿಯಾಳ, ಬೆಳಗಾವಿ ಸೇರಿದಂತೆ ವಿವಿಧ ಘಟಕಗಳ ಬಸ್ಗಳು ಗ್ರಾಮದ ಸೇತುವೆ ಕೆಳಗಡೆ ಬಂದು ನಿಲ್ಲಿಸುತ್ತಿಲ್ಲ. ಕೆಲ ಬಸ್ಗಳು ಸೇತುವೆ ಮೇಲೆ ಪ್ರಯಾಣಿಕರು ನಿಂತರೂ ಕಂಡು ಕಾಣದಂತೆ ಬಸ್ ನಿಲ್ಲಿಸದೆ ಪ್ರಯಾಣಿಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಬಳ್ಳೊಳ್ಳಿ ಗ್ರಾಮವು ಹೋಬಳಿ ಮಟ್ಟದ ಪ್ರಮುಖ ಕೇಂದ್ರವಾಗಿದ್ದು, ಇಲ್ಲಿ ನಾಡಕಚೇರಿ, ಸರ್ಕಾರಿ ಶಾಲೆಗಳು, ಕಾಲೇಜು, ರಾಷ್ಟ್ರೀಕೃತ ಬ್ಯಾಂಕ್, ಆಸ್ಪತ್ರೆ ಸೇರಿದಂತೆ ವಿವಿಧ ಸರ್ಕಾರಿ ಹಾಗೂ ಸಾರ್ವಜನಿಕ ಸೇವಾ ಸಂಸ್ಥೆಗಳಿವೆ. ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ಗ್ರಾಮಕ್ಕೆ ಆಗಮಿಸುತ್ತಾರೆ. ಆದರೆ ಬಸ್ಗಳು ಗ್ರಾಮದೊಳಗೆ ಸರಿಯಾಗಿ ಬಂದು ನಿಲ್ಲಿಸದಿರುವುದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು, ಸಾರಿಗೆ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಕೂಡಲೇ ಮಧ್ಯಪ್ರವೇಶಿಸಿ, ಎಲ್ಲ ಘಟಕಗಳ ಬಸ್ಗಳು ಬಳ್ಳೊಳ್ಳಿ ಗ್ರಾಮದ ಸೇತುವೆ ಕೆಳಗಡೆ ಬಂದು ನಿಗದಿತ ಸ್ಥಳದಲ್ಲಿ ಕಡ್ಡಾಯವಾಗಿ ನಿಲುಗಡೆ ಮಾಡುವಂತೆ ಆದೇಶ ನೀಡಿ ಸಾರ್ವಜನಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

