ಕಾಗದದ ಮೇಲೆ ಭದ್ರಕೋಟೆ, ಸ್ಥಳದಲ್ಲಿ ಮಾತ್ರ ಬರೀ ಬಯಲು | ಸುಮಾರು ರೂ.3 ಲಕ್ಷ ಗುಳುಂ ಮಾಡಿದ ನುಂಗಣ್ಣರು | ಕ್ರಮಕ್ಕೆ ಗ್ರಾಮಸ್ಥರ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಶೇಷ ವರದಿ
ಅಫಜಲಪುರ: ’ಕೊಡಗನ ಕೋಳಿ ನುಂಗಿತ್ತ.. ನೋಡವ್ವ ತಂಗಿ..’ ಎಂಬ ಶರೀಫಜ್ಜನ ಹಾಡನ್ನು ಕೇಳಿರುತ್ತೀರಿ. ಆದರೆ ಇಲ್ಲೊಂದು ಕಡೆ ಅದಕ್ಕಿಂತ ರೋಚಕವಾದ ಕಳ್ಳಾಟದ ಪವಾಡ ನಡೆದಿದೆ.
ಪುಟ್ಟ ಮಕ್ಕಳು ಆಟವಾಡುವ ಅಫಜಲಪುರ ತಾಲೂಕಿನ ಚಿಂಚೋಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ರಕ್ಷಣೆ ನೀಡಬೇಕಿದ್ದ ಕಾಂಪೌಂಡ್ ಗೋಡೆಯನ್ನೇ ಗುತ್ತಿಗೆದಾರ ಮತ್ತು ಇಂಜಿನಿಯರ್ ಸೇರಿ ನುಂಗಿ ನೀರು ಕುಡಿದಿದ್ದಾರೆ!
ಕಾಂಪೌಂಡ್ ನಿರ್ಮಾಣಕ್ಕೆ ಸರ್ಕಾರ ಬಿಡುಗಡೆ ಮಾಡಿದ್ದ ₹3 ಲಕ್ಷ ಅನುದಾನವನ್ನು, ಸ್ಥಳದಲ್ಲಿ ಒಂದು ಇಟ್ಟಿಗೆಯನ್ನೂ ಇಡದೆ, ಕಾಮಗಾರಿ ಸಂಪೂರ್ಣ ಮುಗಿದಿದೆ ಎಂದು ಬಿಲ್ ಸೃಷ್ಟಿಸಿ ಹಣ ಡ್ರಾ ಮಾಡಿಕೊಂಡಿರುವ ಕರ್ಮಕಾಂಡ ಬಯಲಾಗಿದೆ.
ದಾಖಲೆಯಲ್ಲಿ ಭದ್ರಗೋಡೆ, ಸ್ಥಳದಲ್ಲಿ ಶೂನ್ಯ! ಕಾಗದದಲ್ಲೇ ಮುಗಿದ ಕೆಲಸ
ಇಲಾಖೆಯ ಕಡತಗಳ ಪ್ರಕಾರ ಅಂಗನವಾಡಿಗೆ ಸುತ್ತಲೂ ಸುಭದ್ರ ಕಾಂಪೌಂಡ್ ಗೋಡೆ ಎದ್ದು ನಿಂತಿದೆ, ಬಣ್ಣ ಬಳಿಯಲಾಗಿದೆ. ಆದರೆ ಸ್ಥಳಕ್ಕೆ ಹೋಗಿ ನೋಡಿದರೆ ವಾಸ್ತವ ಸ್ಥಿತಿ ಭಿನ್ನವಾಗಿದೆ. ಅಲ್ಲಿ ಹೊಸ ಕಾಂಪೌಂಡಿನ ಸುಳಿವೂ ಇಲ್ಲ. ಬೀದಿನಾಯಿಗಳು ಮತ್ತು ದನಕರುಗಳ ನಡುವೆಯೇ ಮಕ್ಕಳು ಹೆದರುತ್ತ ಆಟವಾಡಬೇಕಾದ ದುಸ್ಥಿತಿ ಇದೆ.
ಗುತ್ತಿಗೆದಾರ-ಇಂಜಿನಿಯರ್ ‘ಜುಗಲ್ಬಂದಿ’
ಸ್ಥಳ ಪರಿಶೀಲನೆ ಮಾಡಬೇಕಿದ್ದ ಸಂಬಂಧಪಟ್ಟ ಇಂಜಿನಿಯರ್, ಕಚೇರಿಯಲ್ಲೇ ಕುಳಿತು ಕಾಮಗಾರಿ ಗುಣಮಟ್ಟದಿಂದ ಕೂಡಿದೆ ಎಂದು ಪ್ರಮಾಣಪತ್ರ ನೀಡಿದ್ದರೆ, ಇತ್ತ ಗುತ್ತಿಗೆದಾರ ಕೆಲಸ ಮಾಡದೆಯೇ ಬಿಲ್ ಕ್ಲೈಮ್ ಮಾಡಲು ಇಂಜಿನಿಯರ್ ಸಂಪೂರ್ಣ ಸಹಕಾರ ನೀಡಿದ್ದು, ₹3 ಲಕ್ಷ ಸಾರ್ವಜನಿಕರ ತೆರಿಗೆ ಹಣ ಇಬ್ಬರ ಜೇಬು ಸೇರಿರ ಬಹುದಾದ ಶಂಕೆ ತಲೆದೋರಿದೆ.
ಸಾರ್ವಜನಿಕರ ಆಕ್ರೋಶ:
ಅಂಗನವಾಡಿ ಕಂದಮ್ಮಗಳ ರಕ್ಷಣೆಗೆಂದು ಬಂದ ಪುಟ್ಟ ಮೊತ್ತವನ್ನೂ ಬಿಡದೆ ಲೂಟಿ ಹೊಡೆದಿದ್ದಾರೆನ್ನಲಾದ ಈ ಜೋಡಿಯ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ.
ಸರ್ಕಾರದ ಯೋಜನೆಗಳನ್ನು ನುಂಗಿ ತೇಗುವ ಇಂತಹ ‘ಕೋಡಗರಿಗೆ’ ಮೇಲಧಿಕಾರಿಗಳು ಕಠಿಣ ಕಾನೂನಿನ ಬಿಸಿ ಮುಟ್ಟಿಸುತ್ತಾರಾ ಅಥವಾ ದಾಖಲೆಗಳಂತೆಯೇ ತನಿಖೆಯೂ ಕಾಗದದಲ್ಲೇ ಮುಗಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.
“ಮಕ್ಕಳ ಅನ್ನದ ತುತ್ತಿಗೆ ಕನ್ನ ಹಾಕಿದಂತೆ, ಅವರ ಸುರಕ್ಷತೆಯ ಕಾಂಪೌಂಡ್ ಹಣವನ್ನು ಲಪಟಾಯಿಸಿರುವ ಇಂಜಿನಿಯರ್ ಮತ್ತು ಗುತ್ತಿಗೆದಾರನನ್ನು ತಕ್ಷಣ ಅಮಾನತುಗೊಳಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಿ ಹಣ ವಸೂಲಿ ಮಾಡಬೇಕು.”
– ಚಂದ್ರಕಾಂತ್ ಮದರಿ
ಮಾಜಿ ಗ್ರಾಪಂ ಸದಸ್ಯರು, ಚಿಂಚೋಳಿ

