ಒಟ್ಟು ೪೫೦೦ ಕೋಟಿ ರೂ. ಮೊತ್ತದ ಯೋಜನೆ | ವಿಜಯಪುರ ಸಂಸದ ರಮೇಶ ಜಿಗಜಿಣಗಿ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಳಿಕೋಟೆ, ಯಾದಗೀರ ಸುತ್ತಮುತ್ತಲಿನ ಜನತೆಯ ಅನೇಕ ದಶಕಗಳ ಬೇಡಿಕೆಯಾಗಿರುವ ಆಲಮಟ್ಟಿ ಯಾದಗೀರ ರೈಲ್ವೇ ಮಾರ್ಗಕ್ಕೆ ಸಂಬಂಧಿಸಿದಂತೆ ೪.೫ ಕೋಟಿ ರೂ. ವೆಚ್ಚದಲ್ಲಿ ಸರ್ವೇ ಕಾರ್ಯ ಕೈಗೊಳ್ಳಲು ಟೆಂಡರ್ ಕರೆಯಲಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಲಮಟ್ಟಿಯಿಂದ ಯಾದಗೀರಿ ೧೬೨ ಕೀ.ಮೀ. ದೂರದ ರೈಲ್ವೇ ಮಾರ್ಗಕ್ಕೆ ಈಗ ಪ್ರಥಮ ಹಂತವಾಗಿ ಸರ್ವೇ ಕಾರ್ಯಕ್ಕೆ ೪.೫ ಕೋಟಿ ರೂ. ಮೊತ್ತಕ್ಕೆ ಟೆಂಡರ್ ಕರೆಯಲಾಗಿದೆ, ಇದು ಒಟ್ಟು ೪೫೦೦ ಕೋಟಿ ರೂ. ಮೊತ್ತದ ಯೋಜನೆಯಾಗಿದೆ ಎಂದು ಜಿಗಜಿಣಗಿ ಮಾಹಿತಿ ನೀಡಿದ್ದಾರೆ.
ಬ್ರಿಟಿಷರ ಕಾಲದಿಂದಲೂ ಈ ರೈಲ್ವೇ ಮಾರ್ಗದ ಬೇಡಿಕೆ ಇತ್ತು. ತಾಳಿಕೋಟೆ, ಯಾದಗೀರಿ ಸೇರಿದಂತೆ ಅನೇಕ ಭಾಗದ ಜನರು ಈ ರೈಲ್ವೇ ಮಾರ್ಗಕ್ಕೆ ಬೇಡಿಕೆ ಇರಿಸಿದ್ದರು, ಅನೇಕ ಹಂತದ ಹೋರಾಟ ಸಹ ನಡೆಸಿದ್ದರು. ಅನೇಕ ಗ್ರಾಮಗಳ ನಿವಾಸಿಗಳ ನಿಯೋಗ ಸಹ ನವದೆಹಲಿಗೆ ಬಂದಿತ್ತು. ನಾನು ಸ್ವತಃ ಕೇಂದ್ರ ರೈಲ್ವೇ ಸಚಿವರನ್ನು ಭೇಟಿ ಮಾಡಿಸಿದ್ದೆ, ಈಗ ಜನತೆಯ ಅನೇಕ ಹೋರಾಟ ಹಾಗೂ ನನ್ನ ಪ್ರಯತ್ನ ಫಲವಾಗಿ ಈಗ ಈ ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಈಗ ಈ ಜಾಲದ ಸರ್ವೇ ಕಾರ್ಯದ ೪.೫ ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ ಎಂದು ಜಿಗಜಿಣಗಿ ಹೇಳಿದ್ದಾರೆ.

