ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿ ಯಾವುದೇ ಆಕ್ಷೇಪಣೆ, ಸಲಹೆಗಳಿದ್ದಲ್ಲಿ ನಿಗದಿತ ಅವಧಿಯೊಳಗೆ ಸಲ್ಲಿಸಬೇಕು ಎಂದು ತಹಶೀಲ್ದಾರ ನಿಂಗಣ್ಣ ಬಿರಾದಾರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಧಾನಸಭಾ ಮತಕ್ಷೇತ್ರದ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು ಇದರಲ್ಲಿ ೧,೦೨೮೦೫ ಪುರುಷರು, ೯೭೩೯೮ ಮಹಿಳಾ, ೨೬ ತೃತಿಯ ಲಿಂಗಿ ಸಹಿತ ಒಟ್ಟು ೨,೦೦೨೨೯ ಮತದಾರರಿದ್ದಾರೆ. ಕ್ಷೇತ್ರದಲ್ಲಿನ ೨೫೨ ಮತಗಟ್ಟೆಗಳಿಗೆ ಹೊಸದಾಗಿ ೦೪ ಮತಗಟ್ಟೆಗಳನ್ನು ಸೃಜಿಸಿ ಒಟ್ಟು ೨೫೬ ಮತಗಟ್ಟೆಗಳು ರಚಿಸಲಾಗಿದೆ.
ಪರಿಷ್ಕರಣೆಯ ನಂತರ ಮತದಾರರ ಪಟ್ಟಿಯಿಂದ ೩೦,೫೫೧ ಮತದಾರರು ಹೊರಗುಳಿದಿದ್ದಾರೆ. ಇನ್ನೂ ೭೯೫೫ ಮತದಾರರು ಮರಣ ಹೊಂದಿದ್ದರೆ, ೩೦೧೭ ಜನ ಡಬಲ್ ಇದ್ದು, ೧೮,೬೭೨ ಮತದಾರರು ಶಾಶ್ವತ ವಲಸೆ ಹೋಗಿದ್ದಾರೆ. ೮೪೦ ಜನ ಗೈರಾಗಿದ್ದಾರೆ.
ಹೆಸರು ತಿದ್ದುಪಡೆ, ಆಕ್ಷೇಪಣೆಗಳಿಗೆ ನಮೂನೆ ೬,೭,೮ ರ ಮೂಲಕ ಸೆಪ್ಟೆಂಬರ್ ೨೩, ೨೦೨೬ರ ಸಂಜೆ ೫.೩೦ ಗಂಟೆಗಳ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆಕ್ಷೇಪಣೆ ಸ್ವೀಕೃತಿಗಳನ್ನು ಅಕ್ಟೋಬರ್ ೨೨, ೨೦೨೬ ರವರೆಗೆ ವಿಲೇವಾರಿ ಮಾಡಲಾಗುವುದು. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ ೨೭, ೨೦೨೬ ರಂದು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದರು.
ಗ್ರೇಡ್-೨ ತಹಶೀಲ್ದಾರ ಎಂ.ಜಿ.ಬಿರಾದಾರ, ಶಿರಸ್ತೇದಾರ ಸುರೇಶ ಮ್ಯಾಗೇರಿ, ದೇವರಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರ್ ಅಹ್ಮದ್ ಬೇಪಾರಿ, ಮತಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಸಾಯಬಣ್ಣ ಬಾಗೇವಾಡಿ, ಬಿಜೆಪಿ ಧುರೀಣ ಜಗದೀಶ ಚವ್ಹಾಣ, ಸಿಬ್ಬಂದಿ ಆರ್.ಕೆ.ಔರಾದಿ, ಸಂತೋಷ ತಳವಾರ ಇದ್ದರು.

