ವಿವಿಧ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಮತ್ತೊಂದು ಹೊಡೆತ
ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ್ ಎಮ್ ಇಟ್ಟಿ
ಬಾಗಲಕೋಟೆ: ಮಳೆ-ಹವಾಮಾನ ವೈಪರೀತ್ಯದ ಪರಿಣಾಮ ಬೆಳೆಗಳ ಮೇಲೆ ಒಂದೆಡೆ ಹೊಡೆತ ಬೀಳುತ್ತಿದ್ದರೆ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾಗುತ್ತಿದೆ. ಇದೀಗ ಅಡುಗೆ ಮನೆಯ ಅವಿಭಾಜ್ಯ ವಸ್ತುವಾಗಿರುವ ಈರುಳ್ಳಿಯ ದರವೂ ಏರಿಕೆಯ ಹಾದಿ ಹಿಡಿದಿದ್ದು, ಗ್ರಾಹಕರು ಈರುಳ್ಳಿ ಕೊಳ್ಳುವಾಗಲೇ ಬೆಲೆ ನೋಡಿ ಕಣ್ಣೀರು ಹಾಕುವಂತಾಗಿದೆ.
ಜಮಖಂಡಿ ಸೇರಿದಂತೆ ಸುತ್ತಮುತ್ತಲಿನ ಸ್ಥಳೀಯ ಮಾರುಕಟ್ಟೆಗಳಲ್ಲಿ ಈರುಳ್ಳಿ ದರದಲ್ಲಿ ಇತ್ತೀಚಿನ ದಿನಗಳಲ್ಲಿ ಏರಿಕೆ ಕಂಡುಬರುತ್ತಿದೆ. ಗುಣಮಟ್ಟ, ಗಾತ್ರ ಹಾಗೂ ಮಾರುಕಟ್ಟೆಗೆ ಆಗಮಿಸುವ ಪ್ರಮಾಣದ ಆಧಾರದ ಮೇಲೆ ದರದಲ್ಲಿ ವ್ಯತ್ಯಾಸವಿದ್ದರೂ, ಕೆಲವೆಡೆ ಕೆಜಿಗೆ 45ರಿಂದ 55ರ ಆಸುಪಾಸಿಗೆ ಈರುಳ್ಳಿ ಮಾರಾಟವಾಗುತ್ತಿರುವುದು ಗ್ರಾಹಕರಿಗೆ ಹೊರೆಯಾಗಿದೆ.
ಈರುಳ್ಳಿ ಬೆಲೆ ಏರಿಕೆಯಿಂದ ಮಧ್ಯಮ ಹಾಗೂ ಬಡ ಕುಟುಂಬಗಳ ಅಡುಗೆ ಮನೆಯ ಬಜೆಟ್ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ತರಕಾರಿ, ಬೇಳೆ, ಎಣ್ಣೆ ಸೇರಿದಂತೆ ವಿವಿಧ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಈರುಳ್ಳಿ ದರ ಏರಿಕೆಯೂ ಮತ್ತೊಂದು ಹೊಡೆತ ನೀಡಿದೆ.
ಮುಂದಿನ ದಿನಗಳಲ್ಲಿ ಹೊಸ ಈರುಳ್ಳಿ ಬೆಳೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದರೆ ದರದಲ್ಲಿ ಇಳಿಕೆ ಕಾಣುವ ನಿರೀಕ್ಷೆಯಿದೆ. ಆದರೆ ಸದ್ಯದ ಪೂರೈಕೆ ಪರಿಸ್ಥಿತಿ, ಹವಾಮಾನ ಹಾಗೂ ಬೇಡಿಕೆಯನ್ನು ಗಮನಿಸಿದರೆ ಈರುಳ್ಳಿ ಬೆಲೆ ತಕ್ಷಣವೇ ದೊಡ್ಡ ಪ್ರಮಾಣದಲ್ಲಿ ಇಳಿಯುವ ಸಾಧ್ಯತೆ ಕಡಿಮೆ ಎಂಬುದು ಮಾರುಕಟ್ಟೆ ವಲಯದ ಅಂದಾಜಾಗಿದೆ.
ಬಾಕ್ಸ್
ಮಾರುಕಟ್ಟೆಗೆ ಪೂರೈಕೆ ಕಡಿಮೆಯಾದರೆ ಬೆಲೆ ಮತ್ತಷ್ಟು ಏರಿಕೆ?
ಮಹಾರಾಷ್ಟ್ರ ಸೇರಿದಂತೆ ಪ್ರಮುಖ ಈರುಳ್ಳಿ ಉತ್ಪಾದನಾ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯ, ಮಳೆಯ ಪ್ರಮಾಣದಲ್ಲಿನ ವ್ಯತ್ಯಾಸ, ಹೊಸ ಬೆಳೆ ಮಾರುಕಟ್ಟೆಗೆ ಬರುವಲ್ಲಿನ ವಿಳಂಬ ಹಾಗೂ ಸಾಗಾಟದ ವೆಚ್ಚದಂತಹ ಅಂಶಗಳು ಈರುಳ್ಳಿ ಬೆಲೆಯ ಮೇಲೆ ಪರಿಣಾಮ ಬೀರುತ್ತಿವೆ. ಇದರ ಜೊತೆಗೆ ಹಬ್ಬದ ದಿನಗಳು ಸಮೀಪಿಸುತ್ತಿರುವುದರಿಂದ ಬೇಡಿಕೆ ಹೆಚ್ಚಾಗುತ್ತಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗುತ್ತಿದೆ.
ಸ್ಥಳೀಯ ಮಾರುಕಟ್ಟೆಯಲ್ಲಿ ಸಗಟು ದರ ಹೆಚ್ಚಾದಾಗ ಅದರ ನೇರ ಪರಿಣಾಮ ಚಿಲ್ಲರೆ ಮಾರುಕಟ್ಟೆಯ ಮೇಲೂ ಬೀಳುತ್ತದೆ. ಹೀಗಾಗಿ ಸಗಟು ವ್ಯಾಪಾರಿಗಳಿಂದ ಚಿಲ್ಲರೆ ವ್ಯಾಪಾರಿಗಳವರೆಗೆ ಬೆಲೆ ಏರಿಕೆಯ ಸರಪಳಿ ಮುಂದುವರಿದು ಅಂತಿಮವಾಗಿ ಗ್ರಾಹಕರ ಜೇಬಿಗೆ ಹೊರೆ ಬೀಳುತ್ತಿದೆ.
ಬಾಕ್ಸ್
ಸ್ಥಳೀಯ ಗ್ರಾಹಕರಿಗೆ ‘ಈರುಳ್ಳಿ ಬಿಸಿ’
ಈರುಳ್ಳಿ ದರ ಏರಿಕೆಯಿಂದ ದಿನನಿತ್ಯದ ಅಡುಗೆಯಲ್ಲೂ ಕಡಿತ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. “ತರಕಾರಿ ಬೆಲೆ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಈರುಳ್ಳಿ ಇಲ್ಲದೆ ಅಡುಗೆ ಪೂರ್ಣವಾಗುವುದಿಲ್ಲ. ಆದರೆ ದರ ಹೆಚ್ಚಾಗಿರುವುದರಿಂದ ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಖರೀದಿಸಬೇಕಾಗಿದೆ” ಎಂದು ಸ್ಥಳೀಯ ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.

“ಈರುಳ್ಳಿ ದಿನನಿತ್ಯದ ಅಡುಗೆಯಲ್ಲಿ ಅನಿವಾರ್ಯ. ದರ ಏರಿಕೆಯಿಂದ ಒಂದು ಕುಟುಂಬಕ್ಕೆ ಸಣ್ಣ ಪ್ರಮಾಣದ ಹೆಚ್ಚುವರಿ ಖರ್ಚು ಎನಿಸಿದರೂ, ತಿಂಗಳ ಲೆಕ್ಕದಲ್ಲಿ ಅದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಬಜೆಟ್ಗೆ ದೊಡ್ಡ ಹೊರೆಯಾಗುತ್ತದೆ. ಮಾರುಕಟ್ಟೆಯಲ್ಲಿ ಪೂರೈಕೆ ಸಮರ್ಪಕವಾಗಿ ಇರುವಂತೆ ಅಧಿಕಾರಿಗಳು ಗಮನಹರಿಸಬೇಕು.”
– ಗ್ರಾಹಕರು
ಜಮಖಂಡಿ

