ಲೇಖನ
– ರಶ್ಮಿ ಕೆ. ವಿಶ್ವನಾಥ್.
ಮೈಸೂರು
ಉದಯರಶ್ಮಿ ದಿನಪತ್ರಿಕೆ
“ಲೋಕೋ ಭಿನ್ನ ರುಚಿಃ” – ಲೋಕದಲ್ಲಿ ನಾಲಗೆಗಳೆಷ್ಟೋ ರುಚಿಗಳಷ್ಟು.
ಅವರಿಗೆ ರುಚಿಸಿದ್ದು ನಮಗೆ ರುಚಿಸಬೇಕೆಂದೇನು ಇಲ್ಲಾ. ಆದರೂ ಒಪ್ಪಿಕೊಳ್ಳಲೇಬೇಕು.
ನಮಗೆ ರುಚಿಸಿದ್ದು ಮತ್ತೊಬ್ಬರಿಗೆ ರುಚಿಸಬೇಕೆಂದೇನು ಇಲ್ಲಾ. ಹಾಗಾಗಿ ಅವರು ಒಪ್ಪಿಕೊಳ್ಳುವುದಿಲ್ಲ. ಆದರೆ ಅವರು ಒಪ್ಪದಿದ್ದರೂ ಸಹ ನಾವು ಒಪ್ಪಿಕೊಳ್ಳಲೇಬೇಕು. ನಮ್ಮ ಮನಸು ನಮ್ಮ ಸುತ್ತ ಮುತ್ತಲಿನವರೊಂದಿಗಿನ ಬಾಂಧವ್ಯವನ್ನು ಬೇಡುತ್ತದೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಅದು ಅನಿವಾರ್ಯತೆಯಾಗಿರುತ್ತದೆ.
ಹಾಗಾಗಿ ಯಾರು ಎಷ್ಟೇ ನೋಯಿಸಿದರು, ಅವರಮೇಲಿನ ಬೇಸರ, ಕೋಪ, ಮುನಿಸು, ತಾತ್ಸಾರ ಎಲ್ಲವನ್ನು ಹಾಗೆ ಒಳಗಿನ ಮನಸ್ಸಿನಲ್ಲಿಯೇ ಬಿಟ್ಟು, ಮೇಲೊಂದು ತಣ್ಣನೆಯ ಮುಖವಾಡ ತೊಟ್ಟು.. ಸುಳ್ಳು ಸುಳ್ಳೇ ಆದರೂ ಸರಿಯೆ.. ಮೆಲ್ಲಗೆ ನಕ್ಕುಬಿಡಬೇಕು.
“ಏ ಇಲ್ಲಪ್ಪ ನಾನೇ ತಿಂದುನೋಡಿದ್ದೀನಿ ಹಾಗಲಕಾಯಿ ಸಿಹಿ ಇತ್ತು” ಎಂದು ದೊಡ್ಡ ಸ್ಥಾನದಲ್ಲಿರುವವರು ಅಥವಾ ಹೆಸರು ಮಾಡಿರುವವರು ಹೇಳಿದರೆ, “ಊಹುಂ” ಎಂದವೋ ಅಲ್ಲಿಗೆ ಮುಗಿಯಿತು. ‘ಶನಿಮಹಾತ್ಮ ಹೆಗಲೇರಿದಂತೆಯೇ’. ಇಲ್ಲ-ಸಲ್ಲದ ಆಪಾದನೆಗಳು ನಮ್ಮ ಮೇಲೆಯೇ ಎರಗಿಬೀಳುತ್ತವೆ. “ಗೆದ್ದೆತ್ತಿನ ಬಾಲ ಹಿಡಿಯುವ” ಜನರ ಬೆಂಬಲ ಅಂಥವರಿಗೆ ಇದ್ದೇ ಇರುತ್ತದೆ.”ಒಗ್ಗಟ್ಟಿನಲ್ಲಿ ಬಲವಿದೆ” ಎಂಬುದನ್ನು “ಆ ಬಹುಸಂಖ್ಯಾತರು” ಪ್ರದರ್ಶಿಸಿಬಿಡುತ್ತಾರೆ. ಹಾಗಾಗಿ ನಾವು ಕೊನೆಗೆ “ಹೂಂ” ಎನ್ನದೆ ವಿಧಿಯಿಲ್ಲ.
ಇದುವೇ ಜೀವನ.

ಇಲ್ಲಿ ಕೆಲಸಂದರ್ಭಗಳಲ್ಲಿ ನಿಜಾಯಿತಿಗೆ ಜಾಗವಿರುವುದಿಲ್ಲ. ಇದ್ದರೂ ಆದರ ಒತ್ತಡ ಸಹಿಸಲಾಗುವುದಿಲ್ಲ. “ಬೆತ್ತಲೆ ಲೋಕದಲ್ಲಿ ಬಟ್ಟೆತೊಟ್ಟವನೇ ಹುಚ್ಚ”. “ನಾವು ಮನುಷ್ಯ ಎಂಬ ಬುದ್ದಿವಂತ ಪ್ರಾಣಿ, ಬಟ್ಟೆತೊಡಬೇಕು” ಎಂದು ಹೇಳಹೋದರೆ, ಅಲ್ಲಿ ಯಾರಿಗೂ ಹಿಡಿಸದು. ಅದರ ಬದಲಿಗೆ “ಹೌದು. ನೀವು ಇರುವುದೇ ಸರಿ. ನನಗೆ ಚಳಿ ಆಗ್ತಾ ಇದೆ ಅದಕ್ಕೆ ಬಟ್ಟೆಹಾಕಿಕೊಂಡೆ ಅಷ್ಟೆ” ಈ ರೀತಿ ಏನಾದರೊಂದು ಮಿಥ್ಯವನ್ನೇ ಸತ್ಯವೆಂದು ಹೇಳಿ ಸುಮ್ಮನಾಗಿಬಿಡಬೇಕು.
‘ಈ ಜೀವನ ನನ್ನದು, ನನ್ನ ಇಷ್ಟದಂತೆ ಬದುಕ್ತೀನಿ’ ಎನ್ನಬಹುದು. ಬದುಕಲೂಬಹುದು. ಅದು ಕೆಲವು ಸ್ಥಳ & ಸಮಯಗಳಲ್ಲಿ ಮಾತ್ರ. ಉಳಿದಂತೆ ಸಂಘಜೀವಿಯಾದ ಮನುಷ್ಯ ಸಮಾಜದ ಅಣತಿಯಂತೆ ಬದುಕಬೇಕಾಗುತ್ತದೆ. ಉದ್ಯಮಿಗಳು ತಮ್ಮ ಪ್ರಾಡಕ್ಟ ಮಾರಲು, ಉದ್ಯೋಗಿಗಳು ಕೆಲಸ ಉಳಿಸಿಕೊಂಡು ಸಂಬಳ ಪಡೆಯಲು, ಸಂಸಾರದಲ್ಲಿ ಸಂಬಂಧ ಉಳಿಯಲು ಹೀಗೆ..
ಹೆದರಬೇಕಾಗುತ್ತದೆ, ಹೆದರಿಸಬೇಕಾಗುತ್ತದೆ, ಓಲೈಸಬೇಕಾಗುತ್ತದೆ, ಸೆಳೆಯಬೇಕಾಗುತ್ತದೆ..
ಏಕೆಂದರೆ ಜೀವನ ಅದೆಲ್ಲವನ್ನ ಬಯಸುತ್ತದೆ.
“ಮುಖವಾಡ ಹಾಕಿಕೊ. ಇಲ್ಲದಿದ್ದರೆ ಸೂರ್ಯನ ಬಿಸಿಕಿರಣ ತಾಗಿ ಸುಟ್ಟುಬಿಟ್ಟೀತು..” ಎಂದು ಮತ್ತೆ ಮತ್ತೆ ನಮ್ಮ ಮನಕ್ಕೆ ನಾವೇ ಹೇಳಿಕೊಳ್ಳಬೇಕಾಗುತ್ತದೆ.
‘ನೆಟ್ಟಗೆ ಬೆಳೆದುನಿಂತ ಮರ, ಗಾಳಿ ಜೋರಾಗಿ ಬೀಸಿದೊಡನೆ ಲೊಟಕ್ಕನೆ ಮುರಿದುಬೀಳುತ್ತದೆ. ಅದೇ ಗಾಳಿಬಂದೆಡೆಗೆ ತಾನೂ ತೂರಿಬಿಟ್ಟರೆ, ಉಳಿದುಬಿಡಬಹುದು. ಹಾಗೆಯೇ ತೂರಾಟ ಅತೀ ಆದರೆ ಮುರಿದುಹೋಗಲೂಬಹುದು. ಹಾಗಾಗಿ ಯಾವ ಮಾರುತಕ್ಕೆ ಎಷ್ಟು ಬಾಗಬೇಕು ಎಂಬುದನ್ನು ಸಹ ಯೋಚಿಸಿ ಆಲೋಚಿಸಿ ತೂಗಿ ಬಾಗಬೇಕಾಗುತ್ತದೆ.
ಆದ್ದರಿಂದಲೇ ಅಲ್ಲವೇ ರಾಜಕೀಯಕ್ಕೆ ಕಾಲಿರಿಸಿದ, ಸರ್ಕಾರಿ ಕೆಲಸಕ್ಕೆ ಸೇರಿದ ಎಷ್ಟೋ ಪ್ರಾಮಾಣಿಕ ವ್ಯಕ್ತಿಗಳು ಬದಲಾಗುವುದು. ಕೆಟ್ಟ ಕ್ರಿಮಿಮಾನವರ ಜೊತೆ ಸೇರಿ ಅವರೂ ಸಹ ಕೆಟ್ಟವರಾಗುವುದು. ಇಲ್ಲದಿದ್ದರೆ ಅವರಿಗೆ ಬದುಕಲುಬಿಡಬೇಕಾದವರು ಬಿಟ್ಟಾರೆಯೇ? ಹೀಗೆಯೇ ಅಲ್ಲವೇ ಸಮಾಜ ಕೊಳಕಾಗುತ್ತಾ ಬರುವುದು. “ಸಗಣಿ ಜೊತೆ ಸರಸ ಆಡುವುದಕ್ಕಿಂತ, ಗಂಧದ ಜೊತೆ ಗುದ್ದಾಡು” ಎನ್ನುತ್ತದೆ ಗಾದೆ. ಆದರೆ ಸರಸ ಆಡುವಂತೆ ನಟನೆಯನ್ನಾದರೂ ಮಾಡುವ ಸಮಯ ಬಂದಾಗ ನಟಿಸಲೇಬೇಕಲ್ಲ?!
ತಮ್ಮದೇ ಹೆಚ್ಚೆಂದು ಕೊಚ್ಚಿಕೊಳ್ಳುತ್ತಾ, ಬುರುಡೆ ಬುಡುತ್ತಾ, ಅಧಿಕಾರ ಚಲಾಯಿಸುತ್ತಾ ಅವಕಾಶವಾದಿಗಳಾಗಿ ಬದುಕುವವರಿಗೆ, “ಮಾಡುವುದು ಅನಾಚಾರ, ಮನೆಮುಂದೆ ಬೃಂದಾವನ” ಎನ್ನುವಂತಿರಿರುವವರಿಗೆ, ಅದು ಅವರಿಷ್ಟದ ಬದುಕೆ.

ಆದರೆ ನಿಷ್ಠೆಯ ಜೀವನ ನಡೆಸಬಯಸುವವರಿಗೆ, ಸ್ವಾಭಿಮಾನಿಗಳಿಗೆ, ಸೂಕ್ಷ್ಮ ಮನಸ್ಸಿನವರಿಗೆ “ಬದುಕಲೊಲ್ಲೆ, ಸಾಯಲೊಲ್ಲೆ” ಎಂಬಂತ ಇಬ್ಬಂಗಿ ಪರಿಸ್ಥಿತಿ. ಅಂತಹ ಪರಿಸ್ಥಿತಿಗಳು ಬಂದಾಗೆಲ್ಲ ಮನದೊಳಗೇ ನಡೆಯುವ ಆಂದೋಲನಗಳಿಗೆ ಉತ್ತರಿಸುತ್ತಾ, ಸಮಾಧಾನ ಹೇಳುತ್ತಾ, ಸಮಜಾಯಿಷಿ ಕೊಡುತ್ತಾ ಸಾಗಬೇಕು. ಅದುವೆ ತಮ್ಮ ಜೀವವನ್ನು ಉಳಿಸಿ ಜೀವನ ನಡೆಸುತ್ತೇವೆ ಎಂದು ನಮ್ಮ ಜೀವನಕ್ಕೆ ನಾವು ಕೊಡಬೇಕಾದ & ಕೊಟ್ಟ ಬದ್ಧತೆ.


