ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಬೆಳಕಿಗೆ ಬಾರದ ಗ್ರಾಮೀಣ ಕಲಾವಿದರೇ ನಮ್ಮ ಜನಪದ ಸಂಸ್ಕೃತಿಯ ನಿಜವಾದ ವಾರಸುದಾರರು. ಅವರ ಕಲೆ, ಬದುಕು ಮತ್ತು ಪರಂಪರೆಯಲ್ಲೇ ಭಾರತದ ಸಾಂಸ್ಕೃತಿಕ ಬೇರುಗಳು ಗಟ್ಟಿಯಾಗಿ ಬೇರೂರಿವೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಪಟ್ಟಣದ ಬೆಂಗಳೂರು ಬೇಕರಿ ಫಂಕ್ಷನ್ ಹಾಲ್ ನಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ, ಜನಪದ ಚರಗ ಕೃತಿ ಲೋಕಾರ್ಪಣೆ ಹಾಗೂ ಜಾನಪದ ಕಲಾವಿದರ ಸನ್ಮಾನ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ತಲೆತಲಾಂತರಗಳಿಂದ ಕಲೆ-ಪರಂಪರೆಯನ್ನು ಜೀವಂತವಾಗಿರಿಸಿರುವ ಜನಸಾಮಾನ್ಯರ ಕೊಡುಗೆಯಿಂದ ಜನಪದ ಸಂಸ್ಕೃತಿ ಉಳಿದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಅನೇಕ ಅಮೂಲ್ಯ ಪ್ರತಿಭೆಗಳು ಬೆಳಕಿಗೆ ಬಾರದ ಸ್ಥಿತಿಯಲ್ಲಿವೆ. ಅಂತಹ ಕಲಾವಿದರನ್ನು ಹುಡುಕಿ ಗುರುತಿಸಿ, ಅವರಿಗೆ ವೇದಿಕೆ ಹಾಗೂ ಪ್ರೋತ್ಸಾಹ ನೀಡುವ ಕೆಲಸವನ್ನು ಪರಿಷತ್ತು ಮಾಡಬೇಕು. ಜನಪದ ಕಲೆ ಕೇವಲ ಮನರಂಜನೆಯಲ್ಲ, ಅದು ನಮ್ಮ ಇತಿಹಾಸ, ಜೀವನಶೈಲಿ ಮತ್ತು ಸಂಸ್ಕೃತಿಯ ಜೀವಂತ ದಾಖಲೆ. ಆದ್ದರಿಂದ ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್. ಪಾಟೀಲ ಮಾತನಾಡಿ, ಅಕ್ಷರ ಜಗತ್ತು ಹುಟ್ಟುವ ಮುನ್ನವೇ ಜನಪದ ಸಾಹಿತ್ಯ ಜನಜೀವನದ ಭಾಗವಾಗಿ ಸಮಾಜವನ್ನು ಮುನ್ನಡೆಸುತ್ತಿತ್ತು. ವಾದ್ಯಗಳ ಅಬ್ಬರ, ಕೃತಕ ಅಲಂಕಾರಗಳಿಲ್ಲದೆ ಜನರ ಬದುಕಿನಿಂದ ಸಹಜವಾಗಿ ಹುಟ್ಟಿಬಂದ ಕಲೆ-ಹಾಡುಗಳೇ ನಿಜವಾದ ಮೂಲ ಜಾನಪದ. ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಹೆಸರಿನಲ್ಲಿ ಮೂಲ ಜಾನಪದಕ್ಕೆ ಹಲವು ರೀತಿಯ ಕಲಬೆರಕೆ ಸೇರುತ್ತಿದ್ದು, ಇದರಿಂದ ಜನಪದದ ಸಹಜ ಸೊಗಡು ಹಾಗೂ ಮೂಲ ಸ್ವರೂಪಕ್ಕೆ ಧಕ್ಕೆ ಉಂಟಾಗುತ್ತಿದೆ. ಜಾನಪದವನ್ನು ಕೇವಲ ಪ್ರದರ್ಶನದ ಕಲೆಯಾಗಿ ನೋಡುವುದಕ್ಕಿಂತ, ಅದು ನಮ್ಮ ಬದುಕು, ಭಾಷೆ, ಆಚರಣೆ ಮತ್ತು ಸಂಸ್ಕೃತಿಯ ಜೀವಂತ ದಾಖಲೆ ಎಂಬ ಅರಿವು ಮೂಡಿಸುವಲ್ಲಿ ಮತ್ತು ಜಾನಪದ ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮಹತ್ವದ ಪಾತ್ರ ವಹಿಸುತ್ತಿದೆ. ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿರುವ ಕರ್ನಾಟಕ ಪರಿಷತ್ತಿನ ಮೂಲಕ ನೀಡಲಾಗುವ ಪ್ರಶಸ್ತಿ-ಪುರಸ್ಕಾರಗಳಿಗೆ ವಿಶೇಷ ಮೌಲ್ಯವಿದ್ದು, ಅವು ಕಲಾವಿದರ ಪ್ರತಿಭೆಗೆ ದೊರೆಯುವ ಗೌರವದ ಸಂಕೇತವಾಗಿವೆ ಎಂದರು.
ಬಸರಕೋಡದ ಪವಾಡ ಬಸವೇಶ್ವರ ಸಂಸ್ಥೆಯ ಅಧ್ಯಕ್ಷರಾದ ಕೆ.ವೈ.ಬಿರಾದಾರ ಅವರು ಜೋಳದ ತೆನೆಗಳನ್ನು ಸೂಡು ಕಟ್ಟುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಷತ್ತಿನ ಅಧ್ಯಕ್ಷ ಎ.ಆರ್.ಮುಲ್ಲಾ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿದರು. ಇದೇ ವೇಳೆ ಡಾ. ಪ್ರಕಾಶ ನರಗುಂದ ಸಂಪಾದಿಸಿರುವ ಜನಪದ ಚರಗ ಕೃತಿಯನ್ನು ಎಸ್.ಜಿ.ವಿ.ಸಿ. ವಿದ್ಯಾಪ್ರಸಾರಕ ವಿಶ್ವನಿಧಿ ಕಾರ್ಯದರ್ಶಿ ಅಶೋಕ ತಡಸದ ಲೋಕಾರ್ಪಣೆ ಮಾಡಿದರು.
ಇದೇ ವೇಳೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಹಿಳಾ ಘಟಕದ ನಶಾಮುಕ್ತ ಭಾರತ ಅಭಿಯಾನ ಹಾಗೂ ಮಿಷನ್ ಸ್ಪಂದನ ದಡಿ ೧೦ ಕೋಟಿ ನಶಾಮುಕ್ತ ಪ್ರತಿಜ್ಞೆ ಸ್ವೀಕರಿಸುವ ಮಹಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಗಣ್ಯರು, ಕಲಾವಿದರು ಹಾಗೂ ಸಾರ್ವಜನಿಕರು ನಶಾಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ಪ್ರತಿಜ್ಞೆ ಸ್ವೀಕರಿಸಿದರು.
ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಶಸಾಪ ಅಧ್ಯಕ್ಷ ಸಿ.ಜಿ.ನಾಗರಾಳ, ಸಮಾಜ ಸೇವಕಿ ಕಾಶಿಬಾಯಿ ರಾಂಪೂರ, ಎಸ್.ಎಂ.ನೆರಬೆಂಚಿ, ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಹಿರೇಮಠ ಪದಾಧಿಕಾರಿಗಳಾದ ಸಂಗಣ್ಣ ಕಂಚಾಣಿ, ಎಲ್.ಎಂ.ಚಲವಾದಿ, ಎಸ್.ವಾಯ್.ವಗ್ಗರ, ಚೇತನ ಶಿವಶಿಂಪಿ, ಎಂ.ಎನ್. ಮಾಗಿ, ಸರಸ್ವತಿ ಪೀರಾಪೂರ, ಹುಸೇನ ಮುಲ್ಲಾ, ಎಂ.ವಿ.ಬೀಳೇಭಾವಿ, ರಮೇಶ ಇಂಗಳಗಿ, ವಿಜಯ ಸೋನಾರ, ಮಹಮ್ಮದ ರಫೀಕ್ ಢವಳಗಿ, ಎಸ್.ಆರ್. ಪಾಟೀಲ, ನರಸಮ್ಮ ಗುಬಚಿ, ಸುಧಾರಾಣಿ ಮೇಟಿ, ಸೇರಿದಂತೆ ನೂರಕ್ಕೂ ಹೆಚ್ಚು ಕಲಾವಿದರು ಹಾಗೂ ಜಾನಪದಾಸಕ್ತರು ಪಾಲ್ಗೊಂಡಿದ್ದರು. ಚಂದ್ರಶೇಖರ ಕಲಾಲ ಸ್ವಾಗತಿಸಿದರು. ಡಾ.ಪ್ರಕಾಶ ನರಗುಂದ ಆಶಯ ನುಡಿಗಳನ್ನಾಡಿದರು. ಎಸ್.ಕೆ.ಘಾಟಿ ಕಾರ್ಯಕ್ರಮ ನಿರ್ವಹಿಸಿದರು.
ಬಾಕ್ಸ್
ಹಾಡಿನ ರೂಪದಲ್ಲಿ ಪೊಲೀಸರ ಸಾಹಸಗಾಥೆ
ಕಳ್ಳತನದ ತನಿಖೆಯನ್ನೇ ಜಾನಪದ ಹಾಡಾಗಿ ಕಟ್ಟಿಕೊಟ್ಟ ಸುಪ್ರೀತಾ
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಗೋನಾಳ ಪಿ.ಎನ್. ಗ್ರಾಮದ ಜಾನಪದ ಕಲಾವಿದೆ ಕುಮಾರಿ ಸುಪ್ರೀತಾ ಗೋನಾಳ ಅವರು ಇತ್ತೀಚೆಗೆ ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ ಸಂಪೂರ್ಣ ಘಟನೆಯನ್ನು ಹಾಡಿನ ಮೂಲಕ ಕಟ್ಟಿ, ತನಿಖೆಯಲ್ಲಿ ಶ್ರಮಿಸಿದ ಐಜಿಪಿ, ಎಸ್ಪಿ, ಸಿಪಿಐ ಹಾಗೂ ಪಿಎಸ್ಐ ಸಂಜಯ ತಿಪರೆಡ್ಡಿ ಅವರ ತಂಡದ ಕಾರ್ಯವನ್ನು ಜನಪದ ಶೈಲಿಯಲ್ಲಿ ಬಣ್ಣಿಸಿದರು.
ಬಾಕ್ಸ್
ಜಾನಪದ ಕ್ಷೇತ್ರದ ಸಾಧಕರಿಗೆ ಗೌರವ
ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹುಲ್ಲೂರಿನ ಗುರುಪಾದಪ್ಪ ಚಲವಾದಿ, ಪೀರಾಪುರದ ಬಿ.ಎಸ್. ಬಿರಾದಾರ, ಕಾಶಿನಕುಂಟಿಯ ಬಂದಗಿಸಾಬ ಬಿಲಕೇರಿ, ಮಡಿಕೇಶ್ವರದ ಸುಭಾಸ ಚಲವಾದಿ, ಕೊಳೂರಿನ ಶೇಖಪ್ಪ ಕತ್ತಿ, ಅಬ್ಬಿಹಾಳದ ಸಿದ್ದಪ್ಪ ಅಂಕನಾಳ, ಹರಿಂದ್ರಾಳದ ರಮೇಶ ಭಜಂತ್ರಿ, ದೇವರ ಹುಲಗಬಾಳದ ಚನ್ನಮ್ಮ ಪಾಟೀಲ, ಅಮರಗೋಳದ ಶಿವಪ್ಪ ಅಮರಗೋಳ, ಕುಂಟೋಜಿಯ ಎಂ.ಪಿ.ವಾಳದವರ, ಗೋನಾಳದ ಪಿ.ಎನ್ ದ ಸುಪ್ರಿತಾ ಗೋನಾಳ ಹಾಗೂ ಬಿದರಕುಂದಿಯ ಎಸ್.ಕೆ. ಘಾಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

