ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನಲ್ಲಿ ಒಟ್ಟು ೧೭,೫೫೨ ರೈತರು ಬೆಳೆ ವಿಮೆ ಪಾವತಿಸಿದ್ದಾರೆ. ಬೆಳೆ ವಿಮೆಯ ಕ್ಲೇಮ್ ಪಡೆಯಲು ಬೆಳೆ ಸಮೀಕ್ಷೆ ಅತ್ಯಂತ ಪ್ರಮುಖವಾಗಿದ್ದು, ರೈತರು ಸಮೀಕ್ಷೆ ಸಂದರ್ಭದಲ್ಲಿ ಅಗತ್ಯ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಬೇಕು. ಬೆಳೆ ಸಮೀಕ್ಷೆ ನಡೆಸುವ ಸಿಬ್ಬಂದಿ ರೈತರಿಂದ ಯಾವುದೇ ರೀತಿಯ ಹಣವನ್ನು ಪಡೆಯಬಾರದು. ಸಮೀಕ್ಷೆ ಕಾರ್ಯದಲ್ಲಿ ನೇಮಕಗೊಂಡ ಸಿಬ್ಬಂದಿ ಅಕ್ರಮ ಅಥವಾ ಕರ್ತವ್ಯಲೋಪ ಎಸಗಿರುವುದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಹೇಳಿದರು.
ಸಿಂದಗಿ ತಾಲೂಕು ಆಡಳಿತ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಬೆಳೆ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ಪ್ರತಿಯೊಬ್ಬ ರೈತರು ಬೆಳೆ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಭಾಗವಹಿಸಿ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಜಮೀನಿನ ವಿಸ್ತೀರ್ಣ, ಸರ್ವೇ ನಂಬರ್ ಹಾಗೂ ವಿವಿಧ ಹಿಸ್ಸಾಗಳಲ್ಲಿ ಬೆಳೆದಿರುವ ಬೆಳೆಗಳ ನಿಖರ ಮಾಹಿತಿ ನೀಡುವುದರಿಂದ ಸರ್ಕಾರದ ವಿವಿಧ ಸೌಲಭ್ಯಗಳು ಹಾಗೂ ಬೆಳೆ ವಿಮೆಯ ಪ್ರಯೋಜನ ಪಡೆಯಲು ಅನುಕೂಲವಾಗಲಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ನಡೆಸಲು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ನೇಮಕಗೊಂಡ ಸಿಬ್ಬಂದಿ ರೈತರ ಜಮೀನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ತಮ್ಮ ಜಮೀನಿನ ಒಟ್ಟು ವಿಸ್ತೀರ್ಣ, ಯಾವ ಬೆಳೆಯನ್ನು ಎಷ್ಟು ಪ್ರದೇಶದಲ್ಲಿ ಬೆಳೆದಿದ್ದಾರೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು. ಒಂದೇ ಜಮೀನಿನ ವಿವಿಧ ಹಿಸ್ಸಾಗಳಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆದಿದ್ದರೆ, ಪ್ರತಿಯೊಂದು ಹಿಸ್ಸಾದಲ್ಲಿರುವ ಬೆಳೆಯ ಮಾಹಿತಿಯನ್ನೂ ಪ್ರತ್ಯೇಕವಾಗಿ ದಾಖಲಿಸಬೇಕು ಎಂದು ಸೂಚಿಸಿದರು.
ಬೆಳೆ ಸಮೀಕ್ಷೆ ಸಂದರ್ಭದಲ್ಲಿ ರೈತರು ಕೇವಲ ಒಂದು ಬೆಳೆಯ ಮಾಹಿತಿಯನ್ನು ನೀಡಿದರೆ, ದಾಖಲಾಗಿರುವ ಆ ಬೆಳೆಗೆ ಮಾತ್ರ ವಿಮೆ ಪರಿಹಾರ ದೊರೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಎಲ್ಲ ಬೆಳೆಗಳ ನಿಖರ ಮಾಹಿತಿಯನ್ನು ನೀಡಬೇಕು. ತಪ್ಪು ಅಥವಾ ಅಪೂರ್ಣ ಮಾಹಿತಿ ನೀಡಿದಲ್ಲಿ ದಾಖಲೆಗಳೊಂದಿಗೆ ಹೊಂದಾಣಿಕೆಯಾಗದೆ ಸಮಸ್ಯೆ ಉಂಟಾಗಬಹುದು ಎಂದು ಎಚ್ಚರಿಸಿದರು.
ಈ ವೇಳೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಶಾಂತ ಸಾಣಿ ಮಾತನಾಡಿ, ಸರ್ವೇ ನಂಬರ್ವಾರು ಸಮೀಕ್ಷಾ ಸಿಬ್ಬಂದಿ: ರೈತರಿಗೆ ಬೆಳೆ ಸಮೀಕ್ಷೆ ಕುರಿತು ಯಾವುದೇ ಮಾಹಿತಿ ಅಥವಾ ಸಹಾಯದ ಅಗತ್ಯವಿದ್ದಲ್ಲಿ ಸರ್ವೇ ನಂಬರ್ ವ್ಯಾಪ್ತಿಗೆ ಅನುಗುಣವಾಗಿ ಸರ್ವೇ ನಂಬರ್ ೧ ರಿಂದ ೩೫೦ ರವರೆಗೆ ಹಾಜೀಸಾಬ್ ಇಂಚಗೇರಿ೭೦೨೨೧೮೭೯೪೧, ಸರ್ವೇ ನಂಬರ್ ೩೧೫ ರಿಂದ ೭೪೦ ರವರೆಗೆ ದಯಾನಂದ ಕೆಲೋಜಿ ೮೯೭೧೩೩೫೮೭೧, ಸರ್ವೇ ನಂಬರ್ ೭೪೧ ರಿಂದ ೧೦೩೩ ರವರೆಗೆ ಪರಶುರಾಮ ಕಟಕದೊಂಡ ೯೩೫೩೮೫೬೧೯೪ ನೇಮಕಗೊಂಡಿರುವ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ತಾಲೂಕಿನ ಎಲ್ಲ ರೈತರು ಬೆಳೆ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸಬೇಕು. ಬೆಳೆ ವಿಮಾ ಕಂಪನಿಗಳ ಹೆಸರಿನಲ್ಲಿ ಕೆಲವರು ಮಧ್ಯವರ್ತಿಗಳಾಗಿ ರೈತರಿಗೆ ಆಮಿಷವೊಡ್ಡಿ ಹಣ ವಸೂಲಿ ಅಥವಾ ವಂಚನೆ ಮಾಡುವ ಸಾಧ್ಯತೆ ಇರುವುದರಿಂದ ರೈತರು ಎಚ್ಚರಿಕೆಯಿಂದಿರಬೇಕು. ಯಾರಾದರೂ ವಿಮಾ ಕಂಪನಿಯ ಹೆಸರಿನಲ್ಲಿ ಆಮಿಷ ತೋರಿಸಿ ವಂಚನೆಗೆ ಮುಂದಾದರೆ ತಕ್ಷಣ ಕೃಷಿ ಇಲಾಖೆ ಅಥವಾ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

